ADVERTISEMENT

ಪತ್ರಕರ್ತೆ ಮೇಲೆ ಗುಂಡಿನ ದಾಳಿ ಕೌಟುಂಬಿಕ ಕಲಹ ಶಂಕೆ

ಪಿಟಿಐ
Published 23 ಜೂನ್ 2019, 19:40 IST
Last Updated 23 ಜೂನ್ 2019, 19:40 IST
ಮಿತಾಲಿ
ಮಿತಾಲಿ   

ನವದೆಹಲಿ: ಪೂರ್ವ ದೆಹಲಿಯ ಅಶೋಕ ನಗರದಲ್ಲಿ ಶನಿವಾರ ತಡರಾತ್ರಿ ಪತ್ರಕರ್ತೆಮಿತಾಲಿ ಚಂದೋಲಾ ಅವರ ಮೇಲೆ ಗುಂಡಿನ ದಾಳಿ ನಡೆದಿದೆ. ಕೌಟುಂಬಿಕ ಕಲಹ ಈ ದಾಳಿಗೆ ಕಾರಣವಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ಮಿತಾಲಿ ಅವರು ಕಾರಿನಲ್ಲಿ ತೆರಳುತ್ತಿದ್ದಾಗ ಘಟನೆ ನಡೆದಿದೆ.ಅವರ ಕೈಗೆ ಗುಂಡು ತಾಗಿದೆ. ಅವರು ಅಪಾಯದಿಂದ ಪಾರಾಗಿದ್ದಾರೆ.

‘ಕಾರಿನಲ್ಲಿ ತೆರಳುತ್ತಿದ್ದ ವೇಳೆ ಇಬ್ಬರು ಮುಸುಕುಧಾರಿಗಳು ಮತ್ತೊಂದು ಕಾರಿನಲ್ಲಿ ಬಂದು ಅಡ್ಡಗಟ್ಟಲು ಯತ್ನಿಸಿದರು. ಮುಂಭಾಗದ ಗಾಜಿನ ಮೇಲೆ ಮೊಟ್ಟೆ ಎಸೆದರು. ಆಗಲೂ ಕಾರು ನಿಲ್ಲಿಸದೆ ಇದ್ದಾಗ ನನ್ನ ಮೇಲೆ ಎರಡು ಸುತ್ತು ಗುಂಡು ಹಾರಿಸಿದರು’ ಎಂದು ಮಿತಾಲಿ‍ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ.

ADVERTISEMENT

‘ನೋಯ್ಡಾದಲ್ಲಿ ಸುದ್ದಿವಾಹಿನಿಯೊಂದರಲ್ಲಿ ಕಾರ್ಯನಿರ್ವಹಿಸುತ್ತಿರುವ ಮಿತಾಲಿ, ಪತಿಯಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ. ವೈಯಕ್ತಿಕ ದ್ವೇಷ ಸೇರಿದಂತೆ ಎಲ್ಲಾ ಆಯಾಮಗಳಿಂದಲೂ ಪ್ರಕರಣದ ತನಿಖೆ ನಡೆಸಲಾಗುತ್ತಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.

‘ದಾಳಿ ನಡೆದ ಸ್ಥಳದಲ್ಲಿ ಸಿಸಿಟಿವಿ ಕ್ಯಾಮೆರಾಗಳಿದ್ದವೇ ಎಂದು ಪರಿಶೀಲಿಸಲಾಗುತ್ತಿದೆ. ಸಿಸಿಟಿವಿ ದೃಶ್ಯಾವಳಿಗಳಿದ್ದರೆ ದಾಳಿ ನಡೆಸಿದವರ ಚಹರೆ ಪತ್ತೆ ಸಾಧ್ಯವಾಗಬಹುದು’ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.