ADVERTISEMENT

ಬಡತನದಿಂದ ಬೇಸತ್ತು ಐದು ಮಕ್ಕಳನ್ನು ಬಾವಿಗೆ ಎಸೆದ ತಾಯಿ

ಪಿಟಿಐ
Published 16 ಅಕ್ಟೋಬರ್ 2018, 13:25 IST
Last Updated 16 ಅಕ್ಟೋಬರ್ 2018, 13:25 IST

ಅಹಮದಾಬಾದ್‌: ಬಡತನದಿಂದ ಬೇಸತ್ತು ಮಹಿಳೆಯೊಬ್ಬರು ತನ್ನ ಐವರು ಮಕ್ಕಳನ್ನು ಬಾವಿಗೆ ಎಸೆದು ತಾನೂ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ ಪ್ರಕರಣ ಗುಜರಾತ್‌ನ ಭಾವ್‌ನಗರ ಜಿಲ್ಲೆಯಲ್ಲಿ ನಡೆದಿದೆ.

ನೀರಿನಲ್ಲಿ ಮುಳುಗಿ ನಾಲ್ವರು ಮಕ್ಕಳು ಮೃತಪಟ್ಟಿದ್ದಾರೆ. ಮೃತರೆಲ್ಲರೂ ಒಂದೂವರೆ ವರ್ಷದಿಂದ ಏಳು ವರ್ಷದ ಒಳಗಿನವರು. ಈ ಪೈಕಿ ಮೂವರು ಗಂಡು ಮಕ್ಕಳು. ಗೀತಾಬೆನ್‌ ಭಾಲಿಯಾ (42) ಮತ್ತು ಆಕೆಯ ಎಂಟು ವರ್ಷದ ಮಗಳು ಮಾತ್ರ ಬದುಕುಳಿದಿದ್ದಾರೆ.

ಮಹಿಳೆ ಮಾನಸಿಕ ತೊಂದರೆಯಿಂದ ಬಳಲುತ್ತಿರುವುದು ಕಂಡುಬಂದಿದ್ದು, ‘ಕಣ್ಣು ಮುಚ್ಚಿದರೆ ದೆವ್ವ ಕಾಣಿಸಿಕೊಳ್ಳುತ್ತದೆ’ ಎಂದು ಹೇಳಿಕೆ ನೀಡಿರುವುದಾಗಿ ಅಲಾಂಗ್‌ ಪೊಲೀಸ್‌ ಠಾಣೆಯ ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ಭಾವ್‌ನಗರದ ರಾಯಲ್‌ ಹಳ್ಳಿಯಿಂದ ಗೀತಾಬೆನ್‌ ತನ್ನ ಐವರು ಮಕ್ಕಳನ್ನು ಪಂಚ್‌ಪಿಪ್ಲಾ ಗ್ರಾಮದ ದೇವಸ್ಥಾನಕ್ಕೆ ಕರೆದೊಯ್ಯುವುದಾಗಿ ಪತಿ ಧರ್ಮಸಿನ್ಹಾಗೆ ತಿಳಿಸಿ, ಸೋಮವಾರ ಸಂಜೆ ಮನೆ ಬಿಟ್ಟಿದ್ದರು. ಸುಮಾರು 170 ಕಿ.ಮೀ. ದೂರದ ಪಂಚ್‌ಪಿಪ್ಲಾ ತಲು‍ಪಿದ ನಂತರ, ಮಹಿಳೆ ಮಕ್ಕಳನ್ನು ಬಾವಿಗೆ ಎಸೆದು, ತಾನೂ ಜಿಗಿದಿದ್ದಾರೆ.

ಗ್ರಾಮದ ಜನರು ಗಮನಿಸಿ, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸೋಮವಾರ ರಾತ್ರಿ ಬಾವಿಯಲ್ಲಿ ಮಕ್ಕಳ ಶವಗಳು ತೇಲುತ್ತಿರುವುದು ಕಂಡುಬಂದಿದೆ. ಮಹಿಳೆ ಮತ್ತು ಒಬ್ಬ ಹೆಣ್ಣು ಮಗುವನ್ನು ರಕ್ಷಿಸಿದ್ದಾರೆ. ಮಹಿಳೆಯ ಪತಿ ಕೃಷಿ ಕಾರ್ಮಿಕನಾಗಿದ್ದಾರೆ. ಮಹಿಳೆ ವಿರುದ್ಧ ಪೊಲೀಸರು ಕೊಲೆ ಪ್ರಕರಣ ದಾಖಲಿಸಿ, ಬಂಧಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.