ADVERTISEMENT

ಹೇಮಾ ಸಮಿತಿ ಗೋಪ್ಯತೆ ಕಾಪಾಡಿ: ಕೇರಳ ಸಿ.ಎಂ.ಗೆ ಮನವಿ

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2024, 14:33 IST
Last Updated 11 ಸೆಪ್ಟೆಂಬರ್ 2024, 14:33 IST
<div class="paragraphs"><p>ಪಿಣರಾಯಿ ವಿಜಯನ್</p></div>

ಪಿಣರಾಯಿ ವಿಜಯನ್

   

ತಿರುವನಂತಪುರ: ಲೈಂಗಿಕ ಕಿರುಕುಳ ಸಂಬಂಧ ನ್ಯಾಯಮೂರ್ತಿ ಹೇಮಾ ಸಮಿತಿ ಮುಂದೆ ಹೇಳಿಕೆ ನೀಡಿದವರ ಗೋಪ್ಯತೆ ಖಾತ್ರಿಪಡಿಸಬೇಕು ಎಂದು ಮಲಯಾಳ ಚಿತ್ರರಂಗದ ಮಹಿಳಾ ವೇದಿಕೆ ರಾಜ್ಯ ಸರ್ಕಾರವನ್ನು ಒತ್ತಾಯಿಸಿದೆ.

ನ್ಯಾ.ಹೇಮಾ ಸಮಿತಿಯ ಸಂಪೂರ್ಣ ವರದಿಯನ್ನು ಪೊಲೀಸ್ ವಿಶೇಷ ತನಿಖಾ ತಂಡಕ್ಕೆ ಹಸ್ತಾಂತರಿಸುವಂತೆ ಕೇರಳ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಆದೇಶಿಸಿದ ಮರು ದಿನವೇ ಈ ಬೆಳವಣಿಗೆ ನಡೆದಿದೆ.

ADVERTISEMENT

ವುಮೆನ್ ಇನ್ ಸಿನಿಮಾ ಕಲೆಕ್ಟಿವ್ (ಡಬ್ಲ್ಯುಸಿಸಿ) ಪ್ರತಿನಿಧಿಗಳು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರನ್ನು ಭೇಟಿ ಮಾಡಿ, ಕೇರಳ ಸರ್ಕಾರವು ರೂಪಿಸುತ್ತಿರುವ ಉದ್ದೇಶಿತ ಸಿನಿಮಾ ನೀತಿ ಮತ್ತು ಮಲಯಾಳ ಚಿತ್ರೋದ್ಯಮದಲ್ಲಿ ಮಹಿಳೆಯರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ತೆಗೆದುಕೊಳ್ಳಬೇಕಿರುವ ಕ್ರಮಗಳ ಕುರಿತು ಸಲಹೆ ನೀಡಿದರು.

‘ಹೇಮಾ ಸಮಿತಿಗೆ ಹೇಳಿಕೆ ನೀಡಿದ ಮಹಿಳೆಯರ ಗೋಪ್ಯತೆ ಮತ್ತು ಸುರಕ್ಷತೆಯ ಬಗ್ಗೆ ಡಬ್ಲ್ಯುಸಿಸಿ ಕಾಳಜಿ ವಹಿಸಲಿದೆ. ನಮ್ಮ ಕಳಕಳಿಯನ್ನು ಮುಖ್ಯಮಂತ್ರಿ ಜತೆ ಹಂಚಿಕೊಳ್ಳಲಾಗಿದ್ದು, ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ’ ಎಂದು ನಟಿ ರೇವತಿ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಆದರೆ, ಅವರು ವೇದಿಕೆಯ ಸದಸ್ಯರು ಸರ್ಕಾರಕ್ಕೆ ನೀಡಿದ ಸಲಹೆಗಳ ವಿವರಗಳನ್ನು ಬಹಿರಂಗಪಡಿಸಲು ನಿರಾಕರಿಸಿದರು.

ಈ ನಡುವೆ, ಲೈಂಗಿಕ ದೌರ್ಜನ್ಯ ಪ್ರಕರಣಗಳ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡವು ಹೇಮಾ ಸಮಿತಿಯ ವರದಿಯಲ್ಲಿ ಬಹಿರಂಗವಾದ ಅಪರಾಧಗಳ ಪ್ರತಿ ಪ್ರಕರಣದ ಬಗ್ಗೆ ಕಾನೂನು ತಜ್ಞರ ಅಭಿಪ್ರಾಯ ಪಡೆಯಲು ಯೋಜಿಸುತ್ತಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.