ಮುಂಬೈ: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಏಕನಾಥ್ ಶಿಂದೆ ಅವರ ಬಗ್ಗೆ ನೀಡಿರುವ ವಿವಾದಾತ್ಮಕ ಹೇಳಿಕೆಗಳಿಗೆ ಕ್ಷಮೆಯಾಚಿಸುವುದಿಲ್ಲ ಎಂದು ಸ್ಟ್ಯಾಂಡ್-ಅಪ್ ಕಾಮಿಡಿಯನ್ ಕುನಾಲ್ ಕಾಮ್ರಾ ಹೇಳಿದ್ದಾರೆ. ಮುಂಬೈನಲ್ಲಿ ಹಾಸ್ಯ ಕಾರ್ಯಕ್ರಮ ನಡೆದ ಸ್ಥಳದ ವಿಧ್ವಂಸಕ ಕೃತ್ಯವನ್ನು ಖಂಡಿಸಿದ್ದಾರೆ.
36 ವರ್ಷದ ಹಾಸ್ಯನಟ, ಜನಪ್ರಿಯ ಹಿಂದಿ ಚಲನಚಿತ್ರ ಹಾಡಿನ ಸಾಹಿತ್ಯವನ್ನು ಮಾರ್ಪಡಿಸುವ ಮೂಲಕ ತಮ್ಮ ಕಾರ್ಯಕ್ರಮದಲ್ಲಿ ಶಿಂದೆ ಅವರ ರಾಜಕೀಯ ವೃತ್ತಿಜೀವನವನ್ನು ಟೀಕಿಸುವ ಮೂಲಕ ಮಹಾರಾಷ್ಟ್ರದಲ್ಲಿ ದೊಡ್ಡ ರಾಜಕೀಯ ಬಿರುಗಾಳಿಯನ್ನು ಎಬ್ಬಿಸಿದ್ದರು.
ಸೋಮವಾರ ತಡರಾತ್ರಿ ಎಕ್ಸ್ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, ನಾನು ಕ್ಷಮೆಯಾಚಿಸುವುದಿಲ್ಲ. ಬೆದರಿಕೆ ಹಾಕುತ್ತಿರುವ ಗುಂಪಿಗೆ ನಾನು ಹೆದರುವುದಿಲ್ಲ. ನಾನು ನನ್ನ ಹಾಸಿಗೆಯ ಕೆಳಗೆ ಅಡಗಿಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ. ಈ ಹಿಂದೆ ಅಜಿತ್ ಪವಾರ್ ಅವರು ಏಕನಾಥ್ ಶಿಂದೆ ಕುರಿತಂತೆ ಹೇಳಿದ್ದನ್ನೇ ಹೇಳಿದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ.
ಸೋಮವಾರ ಕಾಮ್ರಾ ಅವರ ಹಾಸ್ಯ ಕಾರ್ಯಕ್ರಮದ ತುಣುಕುಗಳು ಸೋರಿಕೆಯಾಗಿ ರಾಜಕೀಯ ವಿವಾದವನ್ನು ಹುಟ್ಟುಹಾಕಿತ್ತು. ಕಮ್ರಾ ಅವರು ತಮ್ಮ ಕೀಳು ಮಟ್ಟದ ಹಾಸ್ಯಕ್ಕೆ ಕ್ಷಮೆಯಾಚಿಸಬೇಕು ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಒತ್ತಾಯಿಸಿದ್ದರು. ಕಮ್ರಾ ಅವರನ್ನು ಸಿಪಿಐ(ಎಂ) ಮತ್ತು ಕಾಂಗ್ರೆಸ್ ಬೆಂಬಲಿಸಿದ್ದವು.
ಭಾನುವಾರ ರಾತ್ರಿ, ಶಿವಸೇನಾ ಸದಸ್ಯರು ಕಾಮ್ರಾ ಅವರ ಕಾರ್ಯಕ್ರಮ ನಡೆದ ಖಾರ್ನಲ್ಲಿರುವ ಹ್ಯಾಬಿಟೇಟ್ ಕಾಮಿಡಿ ಕ್ಲಬ್ ಮತ್ತು ಕ್ಲಬ್ ಇರುವ ಹೋಟೆಲ್ ಅನ್ನು ಹಾನಿಗೊಳಿಸಿದ್ದರು. ಸ್ಥಳದ ಧ್ವಂಸವು ಅರ್ಥಹೀನ ಎಂದು ಕಮ್ರಾ ಹೇಳಿದ್ದರು. ಅವರಿಗೆ ನೀಡುತ್ತಿದ್ದ ಬಟರ್ ಚಿಕನ್ ಇಷ್ಟವಾಗದ ಕಾರಣ ಟೊಮೆಟೊ ಸಾಗಿಸುತ್ತಿದ್ದ ಲಾರಿಯನ್ನು ಉರುಳಿಸಿದಂತೆ ಎಂದು ಅಣಕ ಮಾಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.