ಡೆಹ್ರಾಡೂನ್: ಭಯೋತ್ಪಾದಕರನ್ನು ಬಗ್ಗುಬಡಿಯಲು ಅಗತ್ಯಬಿದ್ದರೆ ಮತ್ತೊಂದು ನಿರ್ದಿಷ್ಟ ದಾಳಿಯನ್ನು ನಡೆಸಲು ಹಿಂದಡಿಯಿಡುವುದಿಲ್ಲ ಎಂದು ಸೇನಾ ಉಪಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ದೇವರಾಜ್ ಆನ್ಬು ತಿಳಿಸಿದ್ದಾರೆ.
ಭಾರತೀಯ ಸೇನಾ ಅಕಾಡೆಮಿಯ ನಿರ್ಗಮನ ಪಥಸಂಚಲನದಲ್ಲಿ ಭಾಗವಹಿಸಿ ಮಾತನಾಡಿದ ಅವರು, ’ಗಡಿಭಾಗದಲ್ಲಿ ನೆಲೆಯೂರಿದ್ದ ಉಗ್ರರನ್ನು ಬಗ್ಗುಬಡಿಯಲು ನಿರ್ದಿಷ್ಟ ದಾಳಿ ನಡೆಸುವ ಮೂಲಕ ನಮ್ಮ ಶಕ್ತಿ ಪ್ರದರ್ಶಿಸಿದ್ದೆವು, ಅಗತ್ಯಬಿದ್ದರೆ ಮತ್ತೊಮ್ಮೆ ಅಂತಹ ದಾಳಿ ನಡೆಸಲು ಹಿಂದೇಟು ಹಾಕುವುದಿಲ್ಲ‘ ಎಂದರು.
ಪಾಕ್ ಕೈವಾಡದ ಬಗ್ಗೆ ಜಗತ್ತಿಗೆ ಗೊತ್ತಿದೆ–ರಾವತ್: ’2008ರಲ್ಲಿ ಮುಂಬೈನ ಮೇಲೆ ನಡೆದ ದಾಳಿಗೆ ಸಂಬಂಧಿಸಿದಂತೆ, ಪಾಕಿಸ್ತಾನದ ಕೈವಾಡವಿರುವ ಬಗ್ಗೆ ಇಡೀ ಜಗತ್ತಿಗೆ ತಿಳಿದಿದೆ‘ ಎಂದು ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ತಿಳಿಸಿದರು.
2008ರ ಮುಂಬೈ ದಾಳಿಯೂ ’ಭಯೋತ್ಪಾದಕ ಕೃತ್ಯ‘ ಎಂದು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಅವರು ಇತ್ತೀಚಿಗೆ ನೀಡಿದ ಸಂದರ್ಶನವೊಂದರಲ್ಲಿ ತಿಳಿಸಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ರಾವತ್, ’ಈ ದಾಳಿಯ ಹಿಂದೆ ಯಾರ ಕೈವಾಡವಿತ್ತು ಎಂಬುದುಅಂತರರಾಷ್ಟ್ರೀಯ ಸಮುದಾಯಕ್ಕೆ ಗೊತ್ತಿದೆ. ಯಾರು ದಾಳಿ ನಡೆಸಿದ್ದಾರೆನಮಗೂ ಗೊತ್ತಿದೆ, ಈ ಬಗ್ಗೆ ಹೆಚ್ಚಿನ ಹೇಳಿಕೆ ನೀಡಬೇಕಾದ ಅಗತ್ಯವಿಲ್ಲ‘ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.