ADVERTISEMENT

ಕುಷ್ಠ ರೋಗ ಪೀಡಿತರಿಗೆ ಭಾರತವು ಆರ್ಥಿಕ ಭದ್ರತೆ ನೀಡಲಿ: ವಿಶ್ವ ಆರೋಗ್ಯ ಸಂಸ್ಥೆ

ಪಿಟಿಐ
Published 30 ಜನವರಿ 2021, 7:24 IST
Last Updated 30 ಜನವರಿ 2021, 7:24 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಕೇಂದ್ರ ಸರ್ಕಾರವು ಕುಷ್ಠರೋಗದಿಂದ ಬಳಲುತ್ತಿರುವ ಜನರಿಗೆ ಆರ್ಥಿಕ ಭದ್ರತೆ ನೀಡಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ಕೋವಿಡ್‌ನಿಂದಾಗಿ ಈ ಸಮುದಾಯವೂ ಬಹಳಷ್ಟು ತೊಂದರೆಗಳನ್ನು ಅನುಭವಿಸುತ್ತಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲ್ಯುಎಚ್‌ಒ) ಸೌಹಾರ್ದ ರಾಯಭಾರಿ ಯೋಹೆ ಸಸಕಾವಾ ಅವರು ಹೇಳಿದರು.

‘ಈ ರೀತಿಯ ಸಂದರ್ಭದಲ್ಲಿ ಕುಷ್ಠ ರೋಗಿಗಳನ್ನು ಸದಾ ನಿರ್ಲಕ್ಷ್ಯಿಸಲಾಗುತ್ತದೆ. ಅವರ ಯೋಗಕ್ಷೇಮವನ್ನು ವಿಚಾರಿಸಲು ಹೆಚ್ಚಿನವರು ಮುಂದೆ ಬರುವುದಿಲ್ಲ’ ಎಂದು ಅವರು ತಿಳಿಸಿದರು.

‘ಭಾರತ ಮತ್ತು ಇತರೆ ದೇಶಗಳಲ್ಲಿ ಕುಷ್ಠ ರೋಗ ಪೀಡಿತರು ಸಾಮಾನ್ಯವಾಗಿ ಆರ್ಥಿಕವಾಗಿ ದುರ್ಬಲರಾಗಿದ್ದಾರೆ. ಕೊರೊನಾ, ಲಾಕ್‌ಡೌನ್‌ನಿಂದಾಗಿ ಹಲವರು ತಮ್ಮ ಆದಾಯದ ಮೂಲಗಳನ್ನು ಕಳೆದುಕೊಂಡಿದ್ದಾರೆ. ಮೂಲಭೂತ ಅಗತ್ಯಗಳಿಗಾಗಿ ಪರದಾಡುತ್ತಿದ್ದಾರೆ. ಈ ರೀತಿಯ ಸಮಸ್ಯೆಯನ್ನು ಎದುರಿಸಲು ಭಾರತ ವಿಶೇಷ ಕ್ರಮಗಳನ್ನು ಕೈಗೊಳ್ಳಬೇಕು’ ಎಂದು ಅವರು ಸಲಹೆ ನೀಡಿದರು.

ADVERTISEMENT

‘‌ಕುಷ್ಠರೋಗವನ್ನು ನಿಯಂತ್ರಿಸುವಲ್ಲಿ ಭಾರತ ಸಫಲವಾಗಿರಬಹುದು. ಆದರೆ ಪರ್ವತ ಪ್ರದೇಶಗಳಲ್ಲಿ ಕುಷ್ಠ ರೋಗಕ್ಕೆ ತುತ್ತಾದವರನ್ನು ಪತ್ತೆ ಹಚ್ಚಲು ಭಾರತ ಇನ್ನಷ್ಟು ಪ್ರಯತ್ನಗಳನ್ನು ಮಾಡಬೇಕು. ಕುಷ್ಠ ರೋಗ ‍ಪೀಡಿತರನ್ನು ಭಾರತ ಸರ್ಕಾರ ಮುಖ್ಯ ವಾಹಿನಿಗೆ ಕರೆತರಬೇಕು’ ಎಂದು ಅವರು ಹೇಳಿದರು.

ಇಂದು ಜಗತ್ತಿನಲ್ಲೆಡೆ ವಿಶ್ವ ಕುಷ್ಠರೋಗ ದಿನವನ್ನು ಆಚರಿಸಲಾಗುತ್ತಿದೆ.

ವಿಶ್ವ ಆರೋಗ್ಯ ಸಂಸ್ಥೆಯ ಅಂಕಿಅಂಶದ ಪ್ರಕಾರ, ‘ವಿಶ್ವದಲ್ಲಿ ಅತಿ ಹೆಚ್ಚು ಕುಷ್ಠ ರೋಗ ಪ್ರಕರಣಗಳನ್ನು ಹೊಂದಿರುವ ದೇಶ ಭಾರತ. ಬ್ರೆಜಿಲ್‌ ಮತ್ತು ಇಂಡೊನೇಷಿಯಾ ದೇಶಗಳು ಕ್ರಮವಾಗಿ ಎರಡನೇ ಮತ್ತು ಮೂರನೇ ಸ್ಥಾನದಲ್ಲಿವೆ.

ಭಾರತದಲ್ಲಿ 2016ರಲ್ಲಿ ಹೊಸದಾಗಿ1,35,485 ಕುಷ್ಠ ರೋಗ ಪ್ರಕರಣಗಳು ವರದಿಯಾಗಿವೆ. ಇದು ವಿಶ್ವದ ಹೊಸ ಪ್ರಕರಣಗಳ ಪೈಕಿ ಶೇಕಡ 63 ರಷ್ಟು ಭಾಗವನ್ನು ಹೊಂದಿದೆ. ಜಗತ್ತಿನಲ್ಲಿ 2,14,783 ಹೊಸ ಕುಷ್ಠ ರೋಗ ಪ್ರಕರಣಗಳು ಬೆಳಕಿಗೆ ಬಂದಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.