ADVERTISEMENT

ಆರ್ಥಿಕ ಸಂಕಷ್ಟ: ದೈವೇಚ್ಛೆ ಅಲ್ಲ, ಸರ್ಕಾರದ ನೀತಿಗಳ ಫಲ: ಸಿಪಿಐ ವಾಗ್ದಾಳಿ

ಪಿಟಿಐ
Published 5 ಫೆಬ್ರುವರಿ 2021, 9:25 IST
Last Updated 5 ಫೆಬ್ರುವರಿ 2021, 9:25 IST
ಕಲಾಪದ ಪ್ರಾತಿನಿಧಿಕ ಚಿತ್ರ
ಕಲಾಪದ ಪ್ರಾತಿನಿಧಿಕ ಚಿತ್ರ   

ನವದೆಹಲಿ: ದೇಶ ಎದುರಿಸುತ್ತಿರುವ ಆರ್ಥಿಕ ಸಂಕಷ್ಟ ದೈವೇಚ್ಚೆ ಅಲ್ಲ. ಸರ್ಕಾರ ಜಾರಿಗೊಳಿಸಿರುವ ನೀತಿಗಳೇ ಇದಕ್ಕೆ ಕಾರಣ ಎಂದು ಸಿಪಿಐನ ರಾಜ್ಯಸಭಾ ಸದಸ್ಯ ವಿನಯ್‌ ವಿಶ್ವಂ ಕೇಂದ್ರ ಸರ್ಕಾರದ ವಿರುದ್ದ ಶುಕ್ರವಾರ ವಾಗ್ದಾಳಿ ನಡೆಸಿದರು.

ರಾಷ್ಟ್ರಪತಿಗಳ ಭಾಷಣಕ್ಕೆ ವಂದಿಸುವ ನಿರ್ಣಯದ ಮೇಲಿನ ಚರ್ಚೆ ವೇಳೆ ಮಾತನಾಡಿದ ಅವರು, ‘ಈ ಸಂಕಷ್ಟ ದೈವೇಚ್ಛೆ ಎಂದು ಹಣಕಾಸು ಸಚಿವೆ ಹೇಳಿದರು. ಅದು ಹೇಗೆ ಇದು ದೈವೇಚ್ಛೆಯಾಗುತ್ತದೆ’ ಎಂದು ಪ್ರಶ್ನಿಸಿದ ಅವರು, ‘ಕೋವಿಡ್‌ ಪಿಡುಗು ದೇಶದಲ್ಲಿ ವ್ಯಾಪಕವಾಗುವ ಮುನ್ನವೇ ದೇಶದ ಆರ್ಥಿಕ ಸ್ಥಿತಿ ಅಧೋಗತಿಗೆ ಇಳಿದಿತ್ತು’ ಎಂದರು.

‘₹ 20 ಲಕ್ಷ ಕೋಟಿ ಆರ್ಥಿಕ ಪ್ಯಾಕೇಜ್‌ ಘೋಷಿಸಿದ್ದಾಗಿ ಸರ್ಕಾರ ಬಡಾಯಿ ಕೊಚ್ಚಿಕೊಂಡಿತ್ತು. ಕೇವಲ ₹ 2 ಲಕ್ಷ ಕೋಟಿ ಮೊತ್ತದ ನೆರವು ಮಾತ್ರ ಜನರಿಗೆ ತಲುಪಿದೆ’ ಎಂದು ಟೀಕಿಸಿದ ಅವರು, ‘ರಾಷ್ಟ್ರಪತಿಗಳ ಭಾಷಣಕ್ಕೆ ವಂದಿಸುವ ನಿರ್ಣಯಕ್ಕೆ ತಮ್ಮ ಬೆಂಬಲ ಇಲ್ಲ’ ಎಂದರು.

‘ದೇಶದಲ್ಲಿ ಉದ್ಯೋಗ ಸಿಗದೇ ಯುವ ಸಮುದಾಯ ಸಂಕಷ್ಟದಲ್ಲಿದೆ. ಅವರ ನೆರವಿಗಾಗಿ ನರೇಗಾ ಮಾದರಿಯಲ್ಲಿ ಉದ್ಯೋಗ ಯೋಜನೆಯೊಂದನ್ನು ಆರಂಭಿಸಬೇಕು’ ಎಂದೂ ಅವರು ಸರ್ಕಾರವನ್ನು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.