ADVERTISEMENT

ಉತ್ತರ ಪ್ರದೇಶ: ಜನಸಂಖ್ಯಾ ನಿಯಂತ್ರಣ ನೀತಿ ಪ್ರಕಟಿಸಿದ ಯೋಗಿ ಆದಿತ್ಯನಾಥ

ಪಿಟಿಐ
Published 11 ಜುಲೈ 2021, 18:39 IST
Last Updated 11 ಜುಲೈ 2021, 18:39 IST
ಯೋಗಿ ಆದಿತ್ಯನಾಥ್: ಸಂಗ್ರಹ ಚಿತ್ರ
ಯೋಗಿ ಆದಿತ್ಯನಾಥ್: ಸಂಗ್ರಹ ಚಿತ್ರ   

ಲಖನೌ: ಬೆಳೆಯುತ್ತಿರುವ ಜನಸಂಖ್ಯೆಯು ಅಭಿವೃದ್ಧಿಗೆ ಅಡ್ಡಿ ಎಂದು ಕರೆದಿರುವ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಜನಸಂಖ್ಯಾ ನಿಯಂತ್ರಣಕ್ಕೆ ಯೋಜನೆಯನ್ನು ಪ್ರಕಟಿಸಿದ್ದಾರೆ. ಉತ್ತರ ಪ್ರದೇಶದಲ್ಲಿ ಜನಸಂಖ್ಯೆಯನ್ನು ಸ್ಥಿರಗೊಳಿಸುವ ಮತ್ತು ತಾಯಿ ಹಾಗೂ ಶಿಶು ಮರಣವನ್ನು ತಡೆಯುವ ಉದ್ದೇಶದ ನೀತಿಯನ್ನು ಅನಾವರಣಗೊಳಿಸಿದ್ದಾರೆ. ಇದಕ್ಕೆ ಕಾಲಮಿತಿಯನ್ನೂ ನಿಗದಿಪಡಿಸಿದ್ದಾರೆ.

ಉತ್ತರ ಪ್ರದೇಶ ಜನಸಂಖ್ಯಾ ನೀತಿ 2021-2030 ಅನ್ನುವಿಶ್ವ ಜನಸಂಖ್ಯಾ ದಿನದಂದು ಪ್ರಕಟಿಸಲಾಗಿದೆ. ಫಲವತ್ತತೆ ಪ್ರಮಾಣವನ್ನು 2026ರ ವೇಳೆಗೆ 2.1ಕ್ಕೆ ಮತ್ತು 2030ರ ವೇಳೆಗೆ 1.9ಕ್ಕೆ ಇಳಿಸುವ ಗುರಿಯನ್ನು ನೀತಿಯು ಹೊಂದಿದೆ.

ಜನಸಂಖ್ಯೆ ನಿಯಂತ್ರಣದ ಕರಡು ಮಸೂದೆಯನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸಿದ್ದ ಉತ್ತರ ಪ್ರದೇಶದ ಕಾನೂನು ಆಯೋಗ, ಜುಲೈ 19ರೊಳಗೆ ಸಾರ್ವಜನಿಕರಿಂದ ಸಲಹೆಗಳನ್ನು ಆಹ್ವಾನಿಸಿತ್ತು. ಇದರ ಪ್ರಕಾರ, ಉತ್ತರ ಪ್ರದೇಶದಲ್ಲಿ ಎರಡು ಮಕ್ಕಳಿಗಿಂತ ಹೆಚ್ಚು ಮಕ್ಕಳನ್ನು ಹೊಂದಿರುವ ಜನರು ಸ್ಥಳೀಯ ಸಂಸ್ಥೆ ಚುನಾವಣೆಗೆ ಸ್ಪರ್ಧಿಸುವುದನ್ನು ನಿರ್ಬಂಧಿಸಲಾಗಿದೆ.

ಸರ್ಕಾರಿ ಉದ್ಯೋಗಗಳಿಗೆ ಅರ್ಜಿ ಸಲ್ಲಿಸುವುದು ಅಥವಾ ಯಾವುದೇ ರೀತಿಯ ಸಬ್ಸಿಡಿ ಪಡೆಯುವುದನ್ನೂ ಇದು ನಿರ್ಬಂಧಿಸುತ್ತದೆ. ಜತೆಗೆ ಸರ್ಕಾರಿ ಉದ್ಯೋಗಗಳಲ್ಲಿ ಬಡ್ತಿ ನೀಡುವುದನ್ನು ನಿಷೇಧಿಸುವ ಪ್ರಸ್ತಾವ ಇರಿಸಿದೆ. ಎರಡು ಮಕ್ಕಳಿಗೆ ತಮ್ಮ ಕುಟುಂಬವನ್ನು ಸೀಮಿತಗೊಳಿಸುವ ದಂಪತಿಗೆ ಪ್ರೋತ್ಸಾಹ ಧನ ನೀಡುವ ಉದ್ದೇಶವನ್ನು ಹೊಂದಲಾಗಿದೆ.

‘ಈ ದಿಕ್ಕಿನಲ್ಲಿ ಪ್ರಯತ್ನಗಳನ್ನು ಮಾಡಿದ ದೇಶಗಳು ಮತ್ತು ರಾಜ್ಯಗಳು ಸಕಾರಾತ್ಮಕ ಫಲಿತಾಂಶಗಳನ್ನು ಕಂಡಿವೆ. ಆದಾಗ್ಯೂ, ಹೆಚ್ಚಿನ ಪ್ರಯತ್ನಗಳು ಬೇಕು’ ಎಂದು ಯೋಗಿ ಅವರು ಹೇಳಿದ್ದು, ಉತ್ತರ ಪ್ರದೇಶ ಸರ್ಕಾರವು ಸಮಾಜದ ಎಲ್ಲಾ ವರ್ಗಗಳನ್ನು ಗಮನದಲ್ಲಿಟ್ಟುಕೊಂಡು ಈ ನೀತಿಯನ್ನು ಜಾರಿಗೆ ತರುತ್ತಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.