ADVERTISEMENT

ಉತ್ತರ ಪ್ರದೇಶ: ಸಚಿವ ರಾಜ್‌ಭರ್‌ ವಜಾ

​ಪ್ರಜಾವಾಣಿ ವಾರ್ತೆ
Published 20 ಮೇ 2019, 16:54 IST
Last Updated 20 ಮೇ 2019, 16:54 IST
ರಾಜ್‌ಭರ್‌
ರಾಜ್‌ಭರ್‌   

ಲಖನೌ: ಸುಹೆಲ್‌ದೇವ್‌ ಭಾರತೀಯ ಸಮಾಜ ಪಾರ್ಟಿ (ಎಸ್‌ಬಿಎಸ್‌ಪಿ) ಅಧ್ಯಕ್ಷ ಓಂ ಪ್ರಕಾಶ್‌ ರಾಜ್‌ಭರ್‌ ಅವರನ್ನು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಸಂಪುಟದಿಂದ ವಜಾ ಮಾಡಿದ್ದಾರೆ. ಎನ್‌ಡಿಎ ಮೈತ್ರಿಕೂಟದ ಭಾಗವಾಗಿದ್ದ ಎಸ್‌ಬಿಎಸ್‌ಪಿ, ಲೋಕಸಭಾ ಚುನಾವಣೆಯಲ್ಲಿ ಪ್ರತ್ಯೇಕವಾಗಿಯೇ ಸ್ಪರ್ಧಿಸಿತ್ತು.

ಮುಖ್ಯಮಂತ್ರಿಯವರ ಶಿಫಾರಸಿನ ಅನ್ವಯ ರಾಜ್ಯಪಾಲರು ರಾಜ್‌ಭರ್‌ ಅವರನ್ನು ವಜಾ ಮಾಡಿದ್ದಾರೆ. ಮುಖ್ಯಮಂತ್ರಿ ಕ್ರಮಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ರಾಜ್‌ಭರ್ ಅವರು, ‘ಬಿಜೆಪಿಯು ಹಿಂದುಳಿದ ವರ್ಗ ಮತ್ತು ಪರಿಶಿಷ್ಟ ಜಾತಿ, ಪಂಗಡಗಳ ವಿರೋಧಿ ನಿಲುವು ಹೊಂದಿದೆ’ ಎಂದು ಆರೋಪಿಸಿದ್ದಾರೆ.

‘ಪರಿಶಿಷ್ಟರು, ಹಿಂದುಳಿದ ವರ್ಗದವರಿಗೆ ಆಗುತ್ತಿದ್ದ ತಾರತಮ್ಯ ಧೋರಣೆಯನ್ನು ಖಂಡಿಸಿದ ಕಾರಣಕ್ಕಾಗಿಯೇ ನನ್ನನ್ನು ಬಿಜೆಪಿ ನೇತೃತ್ವದ ಸರ್ಕಾರದಿಂದ ವಜಾ ಮಾಡಲಾಗಿದೆ. ಈ ವರ್ಗದ ಪರ ನನ್ನ ಹೋರಾಟ ಮುಂದುವರಿಸಲಿದ್ದೇನೆ’ ಎಂದು ಪ್ರತಿಕ್ರಿಯಿಸಿದರು.

ADVERTISEMENT

‘ರಾಜ್‌ಭರ್‌ ಕೆಲ ತಿಂಗಳಿನಿಂದ ಸರ್ಕಾರವನ್ನು ಟೀಕಿಸುತ್ತಿದ್ದರು. ತಮ್ಮ ಧೋರಣೆ ತಿದ್ದಿಕೊಳ್ಳುವರು ಎಂದು ನಾವು ಭಾವಿಸಿದ್ದೆವು. ಆದರೆ, ಹಾಗಾಗಲಿಲ್ಲ’ ಎಂದು ಬಿಜೆಪಿ ಮೂಲಗಳು ತಿಳಿಸಿವೆ. ಬಿಜೆಪಿ ವಿರುದ್ಧ ಬಳಸಿದ ಆಕ್ಷೇಪಾರ್ಹ ಪದಕ್ಕಾಗಿ ಇವರ ವಿರುದ್ಧ ಪ್ರಕರಣವನ್ನು ದಾಖಲಿಸಲಾಗಿದೆ.

ನಾನು ಈಗಾಗಲೇ ಸಚಿವ ಸಂಪುಟಕ್ಕೆ ರಾಜೀನಾಮೆ ನೀಡಿದ್ದೇನೆ. ಹೀಗಾಗಿ, ವಜಾ ಮಾಡುವ ಕ್ರಮ ಅರ್ಥವಿಲ್ಲದ್ದು. ರಾಜ್‌ಭರ್‌ ಅವರ ಹಲವು ಬೆಂಬಲಿಗರನ್ನು ವಿವಿಧ ನಿಗಮಗಳ ಮುಖ್ಯಸ್ಥರಾಗಿ ನೇಮಿಸಿದ್ದು, ರಾಜ್ಯ ಸಚಿವರ ಸ್ಥಾನಮಾನವನ್ನು ನೀಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.