ಲಖನೌ: ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು ಶನಿವಾರ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು UnUPyogi-ಅನುಪಯೋಗಿ (ನಿರುಪಯೋಗಿ) ಎಂದು ಜರಿದಿದ್ದಾರೆ. ಯೋಗಿ ಅವರ ಆಡಳಿತದಲ್ಲಿ ದಲಿತರು ಮತ್ತು ಮಹಿಳೆಯರ ಮೇಲೆ ನಡೆದಿರುವ ದಾಳಿಗಳನ್ನು ಉಲ್ಲೇಖಿಸಿ ಅಖಿಲೇಶ್ ವಾಗ್ದಾಳಿ ನಡೆಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಯೋಗಿ ಆದಿತ್ಯನಾಥ್ ಅವರನ್ನು UP+Yogi = UPYogi (ಉಪಯೋಗಿ) ಎಂದು ಶನಿವಾರ ಬಣ್ಣಿಸಿದ್ದರು. ಮೋದಿ ಅವರ ಬಣ್ಣನೆಯನ್ನು ಅಖಿಲೇಶ್ ಯಾದವ್ ವ್ಯಂಗ್ಯವಾಡಿದ್ದಾರೆ.
ಶಹಜಹಾನ್ಪುರದ ಸಾರ್ವಜನಿಕ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ, ‘ಉತ್ತರ ಪ್ರದೇಶದಲ್ಲಿ ಮಾಫಿಯಾಗಳನ್ನು ತೊಡೆದುಹಾಕಲಾಗಿದೆ. ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗಿದೆ,’ ಎಂದಿದ್ದರು. ಅಲ್ಲದೇ, ‘ಯುಪಿ + ಯೋಗಿ’ ತುಂಬಾ ಉಪಯೋಗಿ’ ಎಂದು ಹೇಳಿದ್ದರು.
ಇದಕ್ಕೆ ತಿರುಗೇಟು ನೀಡಿರುವ ಅಖಿಲೇಶ್, ‘ಹತ್ರಾಸ್ನ ಹೆಣ್ಣು ಮಗಳು, ಲಖಿಂಪುರದ ರೈತರು, ಗೋರಖ್ಪುರದ ವ್ಯಾಪಾರಿ, ಅಸುರಕ್ಷಿತ ಭಾವನೆಯಲ್ಲಿರುವ ಮಹಿಳೆಯರು, ನಿರುದ್ಯೋಗಿ ಯುವಕರು, ದಲಿತರು ಮತ್ತು ಹಿಂದುಳಿದ ವರ್ಗದವರು (ಜನರು) ಈಗಿನ ಸರ್ಕಾರ ನಿರುಪಯುಕ್ತವೆಂದು ಹೇಳುತ್ತಿದ್ದಾರೆ,’ ಎಂದು ಹೇಳಿದ್ದಾರೆ.
‘ಬಿಜೆಪಿಯನ್ನು ಇನ್ನು ಬಯಸುವುದಿಲ್ಲವೆಂದು ಉತ್ತರ ಪ್ರದೇಶವು ಹೇಳುತ್ತಿದೆ' ಎಂದೂ ಅಖಿಲೇಶ್ ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.