ಅರವಿಂದ ಕೇಜ್ರಿವಾಲ್
ನವದೆಹಲಿ: ವಿಧಾನಸಭಾ ಚುನಾವಣೆಯಲ್ಲಿ ಹಣ ಮತ್ತು ಉಡುಗೊರೆಗಳಿಗೆ ನಿಮ್ಮ ಮತಗಳನ್ನು ಮಾರಿಕೊಳ್ಳಬೇಡಿ ಎಂದು ದೆಹಲಿ ಮತದಾರರಿಗೆ ಮಾಜಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಮನವಿ ಮಾಡಿದ್ದಾರೆ.
ಮತದಾರರಿಗೆ ಚಿನ್ನದ ಸರ, ಸೀರೆ, ಶೂಗಳು ಮತ್ತು ಹಣವನ್ನು ನೀಡುವ ಮೂಲಕ ಬಿಜೆಪಿ ಆಮಿಷ ಒಡ್ಡುತ್ತಿದೆ ಎಂದು ಆರೋಪಿಸಿದ್ದಾರೆ.
‘ಬಿಜೆಪಿಯವರು ಕೊಡುತ್ತಿರುವುದು ನಿಮ್ಮ ಹಣ ಸ್ವೀಕರಿಸಿ, ಆದರೆ, ನಿಮ್ಮ ಮತವನ್ನು ₹1,100 ಅಥವಾ ಸೀರೆಗೆ ಮಾರಿಕೊಳ್ಳಬೇಡಿ. ಹಾಗೆ ಮಾಡಿದರೆ, ನಿಮ್ಮ ಮತಕ್ಕೆ ಮೌಲ್ಯವೇ ಇರುವುದಿಲ್ಲ’ಎಂದು ವಿಡಿಯೊ ಸಂದೇಶದ ಮೂಲಕ ಮತದಾರರನ್ನು ಒತ್ತಾಯಿಸಿದ್ದಾರೆ.
ಮತದಾನದ ಹಕ್ಕನ್ನು ಸುರಕ್ಷಿತವಾಗಿರಿಸಲು ಬಿ.ಆರ್. ಅಂಬೇಡ್ಕರ್ ಅವರು ಮಾಡಿರುವ ತ್ಯಾಗವನ್ನು ಕೇಜ್ರಿವಾಲ್, ಮತದಾರರಿಗೆ ನೆನಪಿಸಿದರು.
‘ನಿಮ್ಮ ಮತಗಳನ್ನು ಕೊಂಡುಕೊಳ್ಳಬಹುದಾದರೆ ಅಲ್ಲಿಗೆ ನಮ್ಮ ಪ್ರಜಾಪ್ರಭುತ್ವ ಅಂತ್ಯವಾಗುತ್ತದೆ. ಸಂಪತ್ತಿನ ಆಧಿಪತ್ಯ ಮಾತ್ರ ಉಳಿಯಲಿದೆ. ಹಣ ಕೊಡುವವರನ್ನು ಬಿಟ್ಟು ಬೇರೆ ಯಾರಿಗಾದರೂ ಮತ ಹಾಕಿ’ ಎಂದು ಮನವಿ ಮಾಡಿದ್ದಾರೆ.
ಮತದಾರರಿಗೆ ಬೆದರಿಕೆವೊಡ್ಡುವ ಆತಂಕವನ್ನೂ ಕೇಜ್ರಿವಾಲ್ ವ್ಯಕ್ತಪಡಿಸಿದ್ದಾರೆ.
ಸತತ ಮೂರನೇ ಬಾರಿಗೆ ಅಧಿಕಾರಕ್ಕೆ ಬರಲು ಎಎಪಿ ಶತಾಯಗತಾಯ ಪ್ರಯತ್ನಿಸುತ್ತಿದ್ದರೆ, 25 ವರ್ಷಗಳ ಬಳಿಕ ಅಧಿಕಾರದ ಚುಕ್ಕಾಣಿ ಹಿಡಿಯಲು ಬಿಜೆಪಿ ಪ್ರಯತ್ನಿಸುತ್ತಿದೆ.
70 ಸದಸ್ಯ ಬಲದ ದೆಹಲಿ ವಿಧಾನಸಭೆಗೆ ಫೆಬ್ರುವರಿ 5ರಂದು ಮತದಾನ ನಡೆಯಲಿದ್ದು, ಫೆಬ್ರುವರಿ 8ರಂದು ಫಲಿತಾಂಶ ಹೊರಬೀಳಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.