ADVERTISEMENT

ಯುವಕರು ಅಭಿವೃದ್ಧಿ ಹೊಂದಿದ ಭಾರತದ ಫಲಾನುಭವಿಗಳು: ಮೋದಿ

ಪಿಟಿಐ
Published 25 ಜನವರಿ 2023, 15:28 IST
Last Updated 25 ಜನವರಿ 2023, 15:28 IST
ಮೋದಿ
ಮೋದಿ   

ನವದೆಹಲಿ : ಯುವಕರು ಅಭಿವೃದ್ಧಿ ಹೊಂದಿದ ಭಾರತದ ಫಲಾನುಭವಿಗಳಾಗಲಿದ್ದಾರೆ ಮತ್ತು ಅದನ್ನು ನಿರ್ಮಿಸುವ ದೊಡ್ಡ ಜವಾಬ್ದಾರಿ ಅವರ ಹೆಗಲ ಮೇಲೆ ಇರುತ್ತದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಬುಧವಾರ ಹೇಳಿದರು.

ಗಣರಾಜ್ಯೋತ್ಸವ ಪರೇಡ್‌ನ ಭಾಗವಾಗಲಿರುವ ನ್ಯಾಷನಲ್ ಕೆಡೆಟ್ ಕೋರ್‌ (ಎನ್‌ಸಿಸಿ) ಕೆಡೆಟ್‌ಗಳು ಮತ್ತು ರಾಷ್ಟ್ರೀಯ ಸೇವಾ ಯೋಜನೆ (ಎನ್‌ಎಸ್‌ಎಸ್) ಸ್ವಯಂಸೇವಕರನ್ನು ಉದ್ದೇಶಿಸಿ ಮಾತನಾಡಿದ ಅವರು, ಪ್ರಸ್ತುತ ನಡೆಯುತ್ತಿರುವ ಅಮೃತ ಕಾಲದಲ್ಲಿ ದೇಶದ ಆಕಾಂಕ್ಷೆ ಮತ್ತು ಕನಸುಗಳನ್ನು ಯುವಕರು ಪ್ರತಿನಿಧಿಸುತ್ತಾರೆ ಎಂದರು.

ಬಾಹ್ಯಾಕಾಶದಿಂದ ಪರಿಸರದವರೆಗಿನ ಕ್ಷೇತ್ರಗಳಲ್ಲಿ ಭಾರತವು ಇಡೀ ವಿಶ್ವದ ಭವಿಷ್ಯಕ್ಕಾಗಿ ಕಾರ್ಯ ನಿರ್ವಹಿಸುತ್ತಿರುವುದರಿಂದ ದೇಶದಲ್ಲಿ ಯುವಕರಿಗೆ ಸಾಕಷ್ಟು ಅವಕಾಶಗಳಿವೆ. ವಿವಿಧ ಕಾರ್ಯಕ್ರಮಗಳಲ್ಲಿ ಯುವಕರು ಹೆಚ್ಚಾಗಿ ಪಾಲ್ಗೊಳ್ಳುವುದನ್ನು ಪ್ರೋತ್ಸಾಹಿಸಲಾಗುತ್ತಿದೆ. ರಾಷ್ಟ್ರೀಯ ಗುರಿಗಳೊಂದಿಗೆ ಯುವಪೀಳಿಗೆಯನ್ನು ಎನ್‌ಸಿಸಿ ಮತ್ತು ಎನ್‌ಎಸ್‌ಎಸ್ ಜೋಡಿಸುತ್ತದೆ, ಅವರ ಚಟುವಟಿಕೆಗಳನ್ನು ಉತ್ತೇಜಿಸಲು ಮತ್ತು ವಿಸ್ತರಿಸಲು ಸರ್ಕಾರ ಕೆಲಸ ಮಾಡುತ್ತಿದೆ ಎಂದರು.

ADVERTISEMENT

ಗಡಿ ಮತ್ತು ಕರಾವಳಿ ಪ್ರದೇಶಗಳಲ್ಲಿ ವಿಭಿನ್ನ ಸವಾಲುಗಳು ಎದುರಾಗುತ್ತವೆ. ಅದಕ್ಕಾಗಿ ವಿಶೇಷ ತರಬೇತಿಯನ್ನು ನೀಡಲಾಗುತ್ತಿದ್ದು, ಅಗತ್ಯವಿದ್ದರೆ ಯುವಕರು ‘ಮೊದಲ ಪ್ರತಿಸ್ಪಂದಕರು’ (ಫಸ್ಟ್‌ ರೆಸ್ಪಾಂಡರ್ಸ್‌) ಪಾತ್ರವನ್ನು ವಹಿಸಬಹುದು. ಗಡಿ ಪ್ರದೇಶಗಳನ್ನು ಬಲಿಷ್ಠಗೊಳಿಸಲು ಸರ್ಕಾರ ಅಲ್ಲಿ ಕೆಲ ಅಗತ್ಯ ಸೌಕರ್ಯಗಳನ್ನು ಒದಗಿಸಲಾಗಿತ್ತಿದೆ. ಯುವ ಜನತೆಯನ್ನು ಸಬಲೀಕರಣಗೊಳಿಸುವುದು, ಶಿಕ್ಷಣ ಮತ್ತು ಉದ್ಯೋಗಕ್ಕಾಗಿ ಉತ್ತಮ ಮಾರ್ಗಗಳನ್ನು ಸೃಷ್ಟಿಸುವುದು ಸರ್ಕಾರದ ಉದ್ದೇಶವಾಗಿದೆ. ಟೀಮ್ ಸ್ಪಿರಿಟ್‌ನೊಂದಿಗೆ ಎಲ್ಲರೂ ಸೇರಿ ಕೆಲಸ ಮಾಡೋಣ ಎಂದು ಕರೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.