ಗುವಾಹಟಿ: ಗಾಯಕ ಜುಬೀನ್ ಗರ್ಗ್ ಅವರ ಮರಣೋತ್ತರ ಪರೀಕ್ಷೆಯ ವರದಿಯ ಕುರಿತು ಚರ್ಚಿಸಲು ನಾಗರಿಕ ಸಮಾಜದ ಪ್ರಮುಖರನ್ನು ಆಹ್ವಾನಿಸಲಾಗಿದೆ ಎಂದು ಅಸ್ಸಾಂ ಪೊಲೀಸರು ಸೋಮವಾರ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಸಿಐಡಿಯ ವಿಶೇಷ ಡಿಜಿಪಿ ಮುನ್ನಾ ಪ್ರಸಾದ್ ಗುಪ್ತಾ ಅವರು, ‘ವರದಿಯನ್ನು ಸಾರ್ವಜನಿಕರಿಗೆ ಬಹಿರಂಗ ಮಾಡುವುದಿಲ್ಲ. ಆದರೆ ಅಕ್ಟೋಬರ್ 14ರಂದು ಸಂಜೆ 4 ಗಂಟೆಗೆ ಪ್ರಮುಖರೊಂದಿಗೆ ಸಭೆ ನಡೆಸಿ ಚರ್ಚಿಸಲಾಗುವುದು’ ಎಂದು ತಿಳಿಸಿದರು. ಆಹ್ವಾನಿತರು ಯಾರು ಎಂಬ ಬಗ್ಗೆ ಅವರು ಯಾವುದೇ ಮಾಹಿತಿ ನೀಡಿಲ್ಲ.
ಸಿಂಗಪುರದಲ್ಲಿ ಅಯೋಜಿಸಲಾಗಿದ್ದ ಈಶಾನ್ಯ ಭಾರತ ಉತ್ಸವದಲ್ಲಿ ಪಾಲ್ಗೊಳ್ಳಲು ಜುಬೀನ್ ತೆರಳಿದ್ದರು. ಅಲ್ಲಿ ಸಮುದ್ರದಲ್ಲಿ ಈಜುತ್ತಿದ್ದ ವೇಳೆ ಸೆಪ್ಟೆಂಬರ್ 19ರಂದು ಜುಬೀನ್ ಮೃತಪಟ್ಟಿದ್ದರು. ಸಿಐಡಿಯ ವಿಶೇಷ ತನಿಖಾ ತಂಡವು ಪ್ರಕರಣದ ತನಿಖೆ ನಡೆಸುತ್ತಿದೆ.
ವಿಚಾರಣೆಗೆ ಎನ್ಆರ್ಐಗಳು ಹಾಜರು
ಜುಬೀನ್ ಗರ್ಗ್ ಅವರ ನಿಧನಕ್ಕೆ ಸಾಕ್ಷಿಯಾಗಿದ್ದ ಸಿಂಗಪುದಲ್ಲಿ ನೆಲಸಿದ್ದ ಅಸ್ಸಾಂ ಮೂಲದ ಮೂವರು ಸೋಮವಾರ ಗುವಾಹಟಿಗೆ ಬಂದು ಪೊಲೀಸರ ಎದುರು ಹಾಜರಾಗಿ ವಿಚಾರಣೆ ಎದುರಿಸಿದರು ಎಂದು ಉನ್ನತ ಅಧಿಕಾರಿಯೊಬ್ಬರು ತಿಳಿಸಿದರು.
ಮುಂದಿನ ಎರಡು ದಿನಗಳಲ್ಲಿ ಮತ್ತಷ್ಟು ಅನಿವಾಸಿ ಭಾರತೀಯರು (ಎನ್ಆರ್ಐ) ಇಲ್ಲಿಗೆ ಬಂದು ಪೊಲೀಸರ ಎದುರು ಹೇಳಿಕೆ ದಾಖಲಿಸಲಿದ್ದಾರೆ ಎಂದು ತಿಳಿಸಿದರು.
ಜಿಯೊಲಾಂಗ್ಸತ್ ನರ್ಜರಿ ಪರೀಕ್ಷಿತ್ ಶರ್ಮಾ ಮತ್ತು ಸಿದ್ಧಾರ್ಥ ಬೋರಾ ಅವರು ಸೋಮವಾರ ಬೆಳಿಗ್ಗೆ ಸಿಐಡಿ ಮುಖ್ಯ ಕಚೇರಿಗೆ ಬಂದು ವಿಚಾರಣೆ ಎದುರಿಸಿದರು ಎಂದು ಸಿಐಡಿ ವಿಶೇಷ ಡಿಜಿಪಿ ಮುನ್ನಾ ಪ್ರಸಾದ್ ಗುಪ್ತಾ ತಿಳಿಸಿದರು.
ಸಿಂಗಪುರದ ಅಸ್ಸಾಂ ಅಸೋಸಿಯೇಷನ್ಗೆ ಸಂಬಂಧಿಸಿದ 10 ಜನರಿಗೆ ಪೊಲೀಸರು ಸಮನ್ಸ್ ಜಾರಿ ಮಾಡಿ ಅಕ್ಟೋಬರ್ 6ರ ಒಳಗಾಗಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.