ಬಾಗಲಕೋಟೆ:‘ಮಂಗಳಮುಖಿಯರು ಹಾಗೂ ಲಿಂಗಪರಿವರ್ತಿತರನ್ನು ಕುಟುಂಬದವರೇ ಸ್ವೀಕರಿಸುವ ಹಾಗೂ ಸಮಾಜ ಒಪ್ಪಿಕೊಳ್ಳುವ ವಾತಾವರಣ ನಿರ್ಮಾಣವಾದಲ್ಲಿ ಅವರು ಮನೆ ಬಿಟ್ಟು ಹೋಗಿ ಭಿಕ್ಷಾಟನೆ, ಲೈಂಗಿಕ ವೃತ್ತಿಗೆ ಇಳಿಯುವಅನಿವಾರ್ಯ ಬರುವುದಿಲ್ಲ’ ಎಂದು ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷೆ ಮಂಜಮ್ಮ ಜೋಗತಿ ಅಭಿಪ್ರಾಯಪಟ್ಟರು.
ಬೆಂಗಳೂರಿನ ಪಯಣ ಸಂಸ್ಥೆ ಬುಧವಾರ ಇಲ್ಲಿ ಆಯೋಜಿಸಿದ್ದ ಎರಡು ದಿನಗಳ ರಾಜ್ಯಮಟ್ಟದ ಜೋಗಪ್ಪ ಸಾಂಸ್ಕೃತಿಕ ಹಬ್ಬಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
‘ಈ ಸಮುದಾಯದಲ್ಲಿ ಹುಟ್ಟಿದ ಕಾರಣಕ್ಕೆ ಸರ್ಕಾರ ನನ್ನನ್ನು ಗುರುತಿಸಿದೆ. ಅಕಾಡೆಮಿಯ ಅಧ್ಯಕ್ಷ ಸ್ಥಾನದಂತಹ ಮಹತ್ವದ ಜವಾಬ್ದಾರಿ ಕೊಟ್ಟಿದೆ. ಸಮಾಜದ ಎಲ್ಲ ಸ್ಥರಗಳಲ್ಲಿಯೂ ಈ ಕೆಲಸ ಆಗಬೇಕಿದೆ. ನಮಗೆ ಅನುಕಂಪ ಬೇಡ. ಅವಕಾಶ ಕೊಡಿ’ ಎಂದು ಮನವಿ ಮಾಡಿದರು.
ಗೌರವದಿಂದ ವರ್ತಿಸಿ:‘ಲೈಂಗಿಕ ಅಲ್ಪಸಂಖ್ಯಾತರಾದ ನಾವು ಹೆಣ್ಣು ಮಕ್ಕಳ ಬಟ್ಟೆ ತೊಡುತ್ತೇವೆ. ಹೀಗಾಗಿ ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರಂತೆಯೇ ಗೌರವದಿಂದ ನಡೆದುಕೊಳ್ಳಬೇಕು. ಭಿಕ್ಷೆ ಬೇಡುವಾಗ ಹಣ ಕೊಡದಿದ್ದರೆ ಶಪಿಸಬಾರದು. ಅಸಭ್ಯವಾಗಿ ವರ್ತಿಸಬಾರದು’ ಎಂದು ಕಿವಿಮಾತು ಹೇಳಿದರು.
ಸಮಾರಂಭದಲ್ಲಿ ಮಾನವ ಹಕ್ಕು ಹೋರಾಟಗಾರ್ತಿ ಎ.ರೇವತಿ ತಮ್ಮ ಬದುಕು ಬಯಲು ಕೃತಿ ಆಧಾರಿತ ‘ನನ್ನ ಧ್ವನಿ’ ಏಕ ವ್ಯಕ್ತಿ ನಾಟಕ ಪ್ರದರ್ಶಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.