ಬೆಂಗಳೂರು: `ವಿಧಾನಸಭೆಯಿಂದ ವಿಧಾನ ಪರಿಷತ್ತಿಗೆ ನಡೆದ ಚುನಾವಣೆಯಲ್ಲಿ ಅಡ್ಡಮತದಾನ ಮಾಡಿದ 12 ಮಂದಿ ಬಿಜೆಪಿ ಶಾಸಕರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಇಲ್ಲದಿದ್ದರೆ ಪಕ್ಷದ ವರ್ಚಸ್ಸಿಗೆ ದೊಡ್ಡ ಪೆಟ್ಟಾಗಲಿದೆ~ ಎಂದು ಪಕ್ಷದ ವಕ್ತಾರ ಸಿ.ಟಿ.ರವಿ ಹೇಳಿದ್ದಾರೆ.
`ಅಡ್ಡಮತದಾನ ಮಾಡಿದ್ದು ಯಾರು ಎಂಬುದು ಗೊತ್ತಾಗಿದೆ. ಇದರ ಪತ್ತೆಗೆ ಸಿಬಿಐ ತನಿಖೆ ಅಗತ್ಯ ಇಲ್ಲ. ಪಕ್ಷದ ಎಲ್ಲ ಮುಖಂಡರು ಈ ಕುರಿತು ಚರ್ಚಿಸಬೇಕು. ಈ ಪ್ರವೃತ್ತಿಗೆ ತಕ್ಷಣ ಕಡಿವಾಣ ಹಾಕದಿದ್ದರೆ ಕೊಳೆತ ಹಣ್ಣುಗಳ ಜತೆ ಒಳ್ಳೆಯ ಹಣ್ಣುಗಳೂ ಹಾಳಾಗುತ್ತವೆ~ ಎಂದು ರವಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
`ನನ್ನ ಜತೆ ಇದ್ದರೆ ಸಾಕು; ಏನು ಮಾಡಿದರೂ ಕ್ಷಮೆ ಎನ್ನುವ ನೀತಿಯನ್ನು ಪಕ್ಷದ ಪ್ರಮುಖ ನಾಯಕರು ಕೈಬಿಡಬೇಕು. ಪಕ್ಷಕ್ಕೆ ಮೋಸ ಮಾಡಿದವರು ಮುಂದಿನ ದಿನಗಳಲ್ಲಿ ಮುಖಂಡರನ್ನೂ ವಂಚಿಸುವರು. ಮುಖಂಡರು ಇದನ್ನು ಅರಿಯಬೇಕು~ ಎಂದರು.
ಅವಕಾಶವಾದಿಗಳ ಕೂಟ ರಚಿಸಿಕೊಂಡಿರುವ ಜೆಡಿಎಸ್ನ ಕುಮ್ಮಕ್ಕಿನಿಂದಾಗಿ ಕೆಲವರು ಅಡ್ಡಮತದಾನ ಮಾಡಿದ್ದಾರೆ. ಇದಕ್ಕೆ ತಕ್ಕ ಶಾಸ್ತಿ ಆಗಬೇಕು ಎಂದೂ ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.