ADVERTISEMENT

ಅದಿರು ನಾಪತ್ತೆ ಪ್ರಕರಣ: ಅಧಿಕಾರಿಗೆ ನೋಟಿಸ್

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2011, 19:30 IST
Last Updated 12 ಫೆಬ್ರುವರಿ 2011, 19:30 IST

ಕಾರವಾರ: ಇಲ್ಲಿನ ಬೈತಖೋಲ ಬಂದರಿನಿಂದ ಅದಿರು ಕಳ್ಳತನವಾಗಿರುವ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಗರಠಾಣೆಯಲ್ಲಿ ದಾಖಲಾದ ಮೊಕದ್ದಮೆ ಸಂಖ್ಯೆ 154/10 ಕಲಂ 409, 379ಕ್ಕೆ ಸಂಬಂಧಿಸಿದಂತೆ ಸಿಐಡಿ ತಂಡವು ಶನಿವಾರದಿಂದ ತನಿಖೆ ಆರಂಭಿಸಿದೆ. 

ಸಿಐಡಿ ಆರ್ಥಿಕ ಅಪರಾಧಗಳ ವಿಭಾಗದ ಪೊಲೀಸ್ ಉಪಾಧೀಕ್ಷಕ ಎನ್. ಮೋಹನ್‌ರಾವ್ ನೇತೃತ್ವ ತಂಡ ಶುಕ್ರವಾರವೇ ನಗರಕ್ಕೆ ಆಗಮಿಸಿ ತನಿಖೆಗೆ ಸಹಕಾರ ಹಾಗೂ ಅಗತ್ಯ ಮಾಹಿತಿಗಾಗಿ ಬಂದರು ಅಧಿಕಾರಿ ಕ್ಯಾಪ್ಟನ್ ಸಿ. ಸ್ವಾಮಿ ಅವರನ್ನು ದೂರವಾಣಿಯಲ್ಲಿ ಸಂಪರ್ಕಿಸಿ ವಿಷಯ ತಿಳಿಸಿತ್ತು.

ಅಂದು ಸಂಜೆ 4 ಗಂಟೆಗೆ ಸಿಐಡಿ ತಂಡ ಬಂದರು ಕಚೇರಿಗೆ ಹೋದಾಗ ಬಂದರು ಅಧಿಕಾರಿ ಕ್ಯಾಪ್ಟನ್ ಸಿ. ಸ್ವಾಮಿ ಕಚೇರಿಯಲ್ಲಿರಲಿಲ್ಲ. ಬಂದರು ಅಧಿಕಾರಿ ಸ್ವಾಮಿ ಶನಿವಾರವೂ ಸಿಐಡಿ ತಂಡದ ಎದುರು ಹಾಜರಾಗಲಿಲ್ಲ.

ADVERTISEMENT

ಈ ಹಿನ್ನೆಲೆಯಲ್ಲಿ ಎನ್.ಮೋಹನರಾವ್ ಬಂದರು ಅಧಿಕಾರಿ ಸ್ವಾಮಿ ಅವರಿಗೆ ನೋಟಿಸ್ ಜಾರಿ ಮಾಡಿದ್ದಾರೆ. ಕಾರವಾರ ನಗರಠಾಣೆಯಲ್ಲಿ ದಾಖಲಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಕೈಗೊಳ್ಳಲಾಗಿದ್ದು ನಾನು ಮತ್ತು ಕಾರವಾರ ನಗರ ಪೊಲೀಸ್ ವೃತ್ತ ನಿರೀಕ್ಷಕ ಅಂಥೋನಿ ಜಾನ್ ಜೆ.ಕೆ. ನಿಮ್ಮನ್ನು ದೂರವಾಣಿ ಮೂಲಕ ಸಂಪರ್ಕಿಸಿದಾಗ ಕಚೇರಿಯಲ್ಲಿ ಹಾಜರಿರುವುದಾಗಿ ತಿಳಿಸಿದ್ದೀರಿ. ನಾವು ಸಂಜೆ 4 ಗಂಟೆ ಸುಮಾರಿಗೆ ಬಂದರು ಕಚೇರಿಗೆ ಬಂದಾಗ ನೀವು ಅಲ್ಲಿರಲಿಲ್ಲ ಎಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ. 

ಈ ನೋಟಿಸ್‌ನ್ನು ಸ್ವೀಕರಿಸಿ ಸಂಬಂಧಿಸಿದ ದಾಖಲಾತಿಗಳೊಂದಿಗೆ ಫೆ.15ರೊಳಗೆ ಸಿಐಡಿ ತಂಡದ ಮುಂದೆ ಹಾಜರಾಗಿ ತನಿಖೆಗೆ ಸಹಕರಿಸಬೇಕು. ಒಂದು ವೇಳೆ ಬರದೇ ಇದ್ದಲ್ಲಿ ನಿಮ್ಮ ಬಳಿ ಯಾವುದೇ ದಾಖಲಾತಿಗಳು ಇರುವುದಿಲ್ಲ, ಸಿಐಡಿಗೆ ಮಾಹಿತಿ ನೀಡಲು ಇಚ್ಚಿಸುವುದಿಲ್ಲ ಎಂದು ಪರಿಗಣಿಸಿ ತಮ್ಮ ಮೇಲೆ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ನೋಟಿಸ್‌ನಲ್ಲಿ ವಿವರಿಸಲಾಗಿದೆ.

ಬೈತಖೋಲದಲ್ಲಿರುವ ಬಂದರು ಕಚೇರಿಗೆ ಬೆಳಿಗ್ಗೆ ಆಗಮಿಸಿದ ತಂಡ ಬಂದರು ಅಧಿಕಾರಿ ಕೋಣೆಯಲ್ಲಿರುವ ದಾಖಲೆಪತ್ರಗಳನ್ನು ಪರಿಶೀಲಿಸಿತು. ತನಿಖೆ ಅಗತ್ಯವಿರುವ ಮಾಹಿತಿಯನ್ನು ಕಲೆಹಾಕಿದೆ ಎಂದು ಗೊತ್ತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.