ಚನ್ನಮ್ಮನ ಕಿತ್ತೂರು: ‘ಅಧಿಕಾರಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೂಟು ನೆಕ್ಕಲು ಸಿದ್ಧವಾಗಿದ್ದಾರೆ’ ಎಂದು ಕೇಂದ್ರ ಕೌಶಲಾಭಿವೃದ್ಧಿ ಮತ್ತು ವಾಣಿಜ್ಯೋದ್ಯಮ ಸಚಿವ ಅನಂತಕುಮಾರ್ ಹೆಗಡೆ ಅವರು ಕೆಟ್ಟದಾಗಿ ಟೀಕಿಸಿದರು.
ಸ್ಥಳೀಯ ಕಲ್ಮಠದ ಮೈದಾನದಲ್ಲಿ ಶುಕ್ರವಾರ ನಡೆದ ನವ ಕರ್ನಾಟಕ ಪರಿವರ್ತನೆ ಯಾತ್ರೆಯಲ್ಲಿ ಮಾತನಾಡಿದ ಅವರು, ‘ರಾಜ್ಯ ದೇಶದ್ರೋಹಿಗಳ ಸುರಕ್ಷತೆ ವಲಯ ಆಗುತ್ತಿದೆ. 4.5 ಲಕ್ಷ ಜನ ಬಾಂಗ್ಲಾ ವಲಸಿಗರು ಇಲ್ಲಿ ಅಕ್ರಮವಾಗಿ ವಾಸವಾಗಿದ್ದಾರೆ. ಇದನ್ನು ಹಿರಿಯ ಪೊಲೀಸ್ ಅಧಿಕಾರಿಗಳೇ ಒಪ್ಪಿಕೊಳ್ಳುತ್ತಾರೆ’ ಎಂದರು.
‘ಸಿಎಂ ಸಿದ್ದರಾಮಯ್ಯ ಅವರಿಗೆ ಕಿತ್ತೂರು ಉತ್ಸವ ನೆನಪಾಗುವುದಿಲ್ಲ. ಕರ್ನಾಟಕದ ಏಕೀಕರಣಕ್ಕಾಗಿ ಹೋರಾಡಿದ ಆಲೂರು ವೆಂಕಟರಾವ್ ನೆನಪು ಆಗುವುದಿಲ್ಲ. ಅವರಿಗೆ ಟಿಪ್ಪು ನೆನಪಿಗೆ ಬರುತ್ತಾರೆ. ಮುಂದೊಂದು ದಿನ ಕಸಬ್, ಬಿನ್ ಲಾಡೆನ್ರಂತಹ ಉಗ್ರರ ಜಯಂತಿ ಮಾಡಬೇಕೆಂದು ಸಿದ್ದರಾಮಯ್ಯ ಹೇಳ್ತಾರೆ’ ಎಂದು ಟೀಕಾ ಪ್ರಹಾರ ನಡೆಸಿದರು.
‘ಕೇಂದ್ರ ಸರ್ಕಾರದವರು 2.40ಪೈಸೆಗೆ ಯುನಿಟ್ನಂತೆ ವಿದ್ಯುತ್ ಕೊಡುತ್ತದೆ ಎಂದರೂ ತೆಗೆದುಕೊಳ್ಳಲು ಈ ದೈನೇಸಿ ರಾಜ್ಯ ಸರ್ಕಾರಕ್ಕೆ ಆಗುತ್ತಿಲ್ಲ. ಅಲ್ಲಿಂದ ಪವರ್ ಬಂದರೆ ಇಲ್ಲಿ ಸಿದ್ದರಾಮಯ್ಯಗೆ ಶಾಕ್ ಹೊಡೆಯುತ್ತದೆ’ ಎಂದು ವ್ಯಂಗ್ಯವಾಡಿದರು.
‘ರಾಹುಲ್ ಗಾಂಧಿಗೆ ಪಪ್ಪು ಅನ್ನಬಾರದಂತೆ ಅದರ ಬದಲು ದಂಡಪಿಂಡ ಎಂದು ಕರೆಯಬೇಕಾ’ ಎಂದು ಅನಂತಕುಮಾರ್ ಹೆಗಡೆ ಪ್ರಶ್ನಿಸಿದರು.
‘ರಾಹುಲ್ ಗಾಂಧಿ ದೇಶದ ಪ್ರಧಾನಿಯಾದರೆ ಆತ್ಮಹತ್ಯೆ ಮಾಡಿಕೊಳ್ಳಲು ಸಮುದ್ರವೇ ಸಾಕಾಗಲ್ಲ’ ಎಂದು ಕಟುವಾಗಿ ವಾಗ್ದಾಳಿ ಮಾಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.