ADVERTISEMENT

ಅಪಘಾತ: ಒಂದೇ ಕುಟುಂಬದ ಮೂವರ ದುರ್ಮರಣ

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2013, 20:23 IST
Last Updated 1 ಸೆಪ್ಟೆಂಬರ್ 2013, 20:23 IST

ಗುಬ್ಬಿ: ತಾಲ್ಲೂಕಿನ ದೊಡ್ಡಗುಣಿ ಕೆರೆ ಏರಿ ಮೇಲಿನ ತಿರುವಿನಲ್ಲಿ ಭಾನುವಾರ ಕೆಎಸ್‌ಆರ್‌ಟಿಸಿ ಬಸ್ ಮತ್ತು ಟಾಟಾ ಇಂಡಿಕಾ ಕಾರು ಮುಖಾಮುಖಿ ಡಿಕ್ಕಿ ಹೊಡೆದು ಒಂದೇ ಕುಟುಂಬದ ಮೂವರು ಮೃತಪಟ್ಟಿದ್ದಾರೆ.

ಬೆಂಗಳೂರಿನ ಕೆ.ಆರ್.ಪುರಂ ವಾಸಿಗಳಾದ ಯೋಗಾನಂದಮೂರ್ತಿ (45), ಪುತ್ರಿ ರಮ್ಯಾ (22) ಸ್ಥಳದಲ್ಲೇ ಮೃತಪಟ್ಟರೆ, ಕಾರಿನ ಚಾಲಕ ಶಂಕರೇಗೌಡ ತುಮಕೂರು ಜಿಲ್ಲಾ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಮತ್ತೊಬ್ಬ ಪುತ್ರಿ ದಿವ್ಯಾ ಗಾಯಗೊಂಡು ಬೆಂಗಳೂರಿನ ನಿಮ್ಹೋನ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ತಾಯಿ ಶಾಂತಮ್ಮ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಬೆಂಗಳೂರಿನ ಕಾರ್ಖಾನೆಯೊಂದರಲ್ಲಿ ನೌಕರಿಯಲ್ಲಿದ್ದ ಯೋಗಾನಂದಮೂರ್ತಿ  ತುರುವೇಕೆರೆ ತಾಲ್ಲೂಕಿನ ಅರಳುಗುಪ್ಪೆ ಹೊಸಹಳ್ಳಿಗೆ ತನ್ನ ದೊಡ್ಡಪ್ಪನ ತಿಥಿ ಕಾರ್ಯಕ್ಕೆಂದು  ಕುಟುಂಬದೊಂದಿಗೆ ತೆರಳುತ್ತಿದ್ದರು. ಬಸ್ ಹೊಸದುರ್ಗದಿಂದ ಬೆಂಗಳೂರಿಗೆ ತೆರಳುತ್ತಿತ್ತು.. ಗುಬ್ಬಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಬಾರದ ಆಂಬುಲೆನ್ಸ್: ಅಪಘಾತ ನಡೆದ ತಕ್ಷಣ ದೂರವಾಣಿ ಕರೆ ಮಾಡಿದರೂ; 108 ಆಂಬುಲೆನ್ಸ್ ನಿಗದಿತ ಸಮಯಕ್ಕೆ ಬಂದಿಲ್ಲ. ಅದೇ ಮಾರ್ಗದಲ್ಲಿ ತೆರಳುತ್ತಿದ್ದ ಶಿವಮೊಗ್ಗದ ಖಾಸಗಿ ವಾಹನ ಆಶ್ರಯಿಸಿ ತೀವ್ರ ಗಾಯಗೊಂಡವರನ್ನು ತಾಲ್ಲೂಕು ಆಸ್ಪತ್ರೆಗೆ ಸಾಗಿಸಲಾಯಿತು.

ತುರ್ತು ಕರೆ ಆಲಿಸಿ ಗುಬ್ಬಿ ಆಸ್ಪತ್ರೆಯಿಂದ ಅಪಘಾತ ಸ್ಥಳಕ್ಕೆ ಹೊರಟಿದ್ದ ಆಂಬುಲೆನ್ಸ್ ತಾಂತ್ರಿಕ ದೋಷದಿಂದ ಪಟ್ಟಣದ ಸಿಐಟಿ ಕಾಲೇಜು ಸಮೀಪ ಕೆಟ್ಟು ನಿಂತಿದೆ. ಆ ನಂತರ ತಾಲ್ಲೂಕಿನ ಚೇಳೂರು ಆಸ್ಪತ್ರೆಯ ಆಂಬುಲೆನ್ಸ್‌ಗೆ ದೂರವಾಣಿ ಕರೆ ಮಾಡಿ ಸ್ಥಳಕ್ಕೆ ಕರೆಸಲಾಗಿದೆ. ಚೇಳೂರು ದೂರವಾದ್ದರಿಂದ ಒಂದು ಗಂಟೆ ತಡವಾಗಿ ಆಂಬುಲೆನ್ಸ್ ಆಗಮಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.