ADVERTISEMENT

ಅಪಹರಣಕಾರರಿಂದ ಬಾಲಕ ಪಾರು

​ಪ್ರಜಾವಾಣಿ ವಾರ್ತೆ
Published 25 ಮಾರ್ಚ್ 2012, 19:30 IST
Last Updated 25 ಮಾರ್ಚ್ 2012, 19:30 IST

ಬಳ್ಳಾರಿ: ಎಪಿಎಂಸಿ ಮಾಜಿ ಅಧ್ಯಕ್ಷ ಭಾಸ್ಕರ್ ರೆಡ್ಡಿ ಅವರ ಪುತ್ರ ರಾಕೇಶ್ (15) ಭಾನುವಾರ ಬೆಳಿಗ್ಗೆ ಅಪಹರಣಕ್ಕೆ ಒಳಗಾಗಿ ನಂತರ ಆಂಧ್ರಪ್ರದೇಶದ ಗುಂತಕಲ್‌ನಲ್ಲಿ ಅಪಹರಣಕಾರರಿಂದ ಪರಾರಿಯಾಗಿ ಬಂದ ಘಟನೆ ನಡೆದಿದೆ.
ನಗರದ ಗುರುಕುಲ ಪ್ರೌಢಶಾಲೆಯಲ್ಲಿ 9ನೇ ತರಗತಿಯಲ್ಲಿ ಓದುತ್ತಿರುವ ಈತ ಬೆಳಿಗ್ಗೆ ಸ್ಥಳೀಯ ಗಾಂಧಿನಗರದ ಲಿಂಗಣ್ಣ ಕಾಲೊನಿಯ ಬಳಿ ಇರುವ ಆಟದ ಮೈದಾನದಲ್ಲಿ ಕ್ರಿಕೆಟ್ ಆಡಿ ಮನೆಗೆ ವಾಪಸಾಗುತ್ತಿದ್ದ ಸಂದರ್ಭದಲ್ಲಿ ವಾಹನದಲ್ಲಿ ಬಂದ ಮೂವರು ಅಪರಿಚಿತರು ಅಪಹರಿಸಿ ಆಂಧ್ರಪ್ರದೇಶದ ಕಡೆ ಕರೆದೊಯ್ದರು. ಮಾರ್ಗದ ಮಧ್ಯೆ ವಾಹನ ಬದಲಾಯಿಸಿ ಇನ್ನೊಂದು ವಾಹನದಲ್ಲಿ ಗುಂತಕಲ್‌ಗೆ ಕರೆದೊಯ್ದರು. ತನ್ನ್ನೊಂದಿಗೆ ಇನ್ನೂ ಇಬ್ಬರು ಬಾಲಕರು ಇದ್ದುದಾಗಿ ಹೇಳುವ ರಾಕೇಶ, ಗುಂತಕಲ್‌ನಲ್ಲಿ ಸಾರಾಯಿ ಅಂಗಡಿ ಎದುರು ವಾಹನ ನಿಂತಾಗ ತಪ್ಪಿಸಿಕೊಂಡು ಪರಾರಿಯಾಗಿ ಬಂದಿದ್ದಾಗಿ ಬಳ್ಳಾರಿಯ ಗಾಂಧಿ ನಗರದ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾನೆ.

ಗುಂತಕಲ್‌ನಲ್ಲಿ ಆಟೋರಿಕ್ಷಾದವರ ಸಹಾಯದೊಂದಿಗೆ ಒನ್‌ಟೌನ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದ ಬಾಲಕನನ್ನು ಆತನ ತಂದೆ ಮತ್ತು ಇತರರು ಸಂಜೆ ಬಳ್ಳಾರಿಗೆ ಕರೆ ತಂದರು. ಅಪಹರಣಕಾರರು ಹಿಂದಿ ಭಾಷೆಯಲ್ಲಿ ಮಾತನಾಡುತ್ತಿದ್ದರು ಹಾಗೂ ಅವರ ವಾಹನ ಉತ್ತರ ಪ್ರದೇಶ ರಾಜ್ಯದ ನೋಂದಣಿ ಹೊಂದಿತ್ತು ಎಂದು ಬಾಲಕ ಹೇಳಿದ್ದಾನೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.