ಹೊಳೆನರಸೀಪುರ: ಪಟ್ಟಣದಲ್ಲಿ ಶುಕ್ರವಾರ ನಡೆದ ಲಕ್ಷ್ಮಿನರಸಿಂಹಸ್ವಾಮಿ ಬ್ರಹ್ಮರಥೋತ್ಸವದ ವೇಳೆ ಭಕ್ತರು ಏಕಾಏಕಿ ರಥ ಎಳೆದಿದ್ದರಿಂದ ಆಗಬಹುದಾದ ಅನಾಹುತವೊಂದು ತಪ್ಪಿದೆ. ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಮತ್ತು ಪತ್ನಿ ಚನ್ನಮ್ಮ ಅವರ ಮೇಲೆ ರಥ ಹರಿಯುವುದು ಕ್ಷಣಾರ್ಧದಲ್ಲಿ ತಪ್ಪಿದ್ದು, ಸ್ವಲ್ಪದರಲ್ಲೇ ಪಾರಾದರು.
ಕುಟುಂಬ ಸಮೇತ ರಥೋತ್ಸವಕ್ಕೆ ಬಂದಿದ್ದ ದೇವೇಗೌಡ ಅವರು ರಥ ಎಳೆಯಲು ಮುಂದಾದರು. ಉತ್ಸವ ಮೂರ್ತಿ ಪೂಜೆಯ ನಂತರ ರಥದತ್ತ ಹೆಜ್ಜೆ ಹಾಕಿದರು. ಈ ವೇಳೆ ನಗಾರಿ ಬಾರಿಸಿದ್ದರಿಂದ ಭಕ್ತರು ಒಮ್ಮೆಲೆ ರಥ ಎಳೆದರು. ಆಗ ತಳ್ಳಾಟ ನೂಕು–ನುಗ್ಗಲು ಉಂಟಾಯಿತು. ರಥ ಮುನ್ನುಗ್ಗುವುದನ್ನು ನೋಡಿದ ದೇವೇಗೌಡ ದಂಪತಿ ಗಲಿಬಿಲಿಗೊಂಡರು. ಇದನ್ನು ಗಮನಿಸಿದ ಪುತ್ರ ರೇವಣ್ಣ ತಕ್ಷಣ ರಥದ ಹಾದಿಯಲ್ಲಿ ನಡುವೆ ಬಂದು ಅವರನ್ನು ಪಕ್ಕಕ್ಕೆ ತಳ್ಳಿಕೊಂಡು ಹೋದರು. ಅರೇಕ್ಷಣದಲ್ಲಿ ರಥ ವೇಗದಲ್ಲಿ ಮುಂದಕ್ಕೆ ಸಾಗಿತು.
ಇದನ್ನು ಕಂಡ ಸಾರ್ವಜನಿಕರು ‘ದೇವರು ದೊಡ್ಡವನು’ ಎಂದು ನಿಟ್ಟುಸಿರು ಬಿಟ್ಟರು. ಪೊಲೀಸರು ರಥ ಎಳೆಯುವುದನ್ನು ನಿಲ್ಲಿಸುವಂತೆ ಸಿಟಿ ಊದುತ್ತಾ ನೀಡುತ್ತಿದ್ದ ಸೂಚನೆಯೂ ಗದ್ದಲದಲ್ಲಿ ಕೇಳದಾಗಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.