ಬಾಗಲಕೋಟೆ: ‘ಶಿವಯೋಗ ಮಂದಿರ ಒಂದು ರಾಜಕೀಯೇತರ ಸಂಸ್ಥೆಯಾಗಿದೆ. ಇಲ್ಲಿಗೆ ಯಾರೂ ಬೇಕಾದರೂ ಭೇಟಿ ಮಾಡಬಹುದು. ಈ ಹಿಂದೆ ರಾಜಕೀಯ ಮುಖಂಡರಾದ ಸೋನಿಯಾ ಗಾಂಧಿ, ಎಲ್.ಕೆ. ಅಡ್ವಾಣಿ ಭೇಟಿ ನೀಡಿದ್ದರು. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ಭೇಟಿಯ ಹಿಂದೆ ಯಾವುದೇ ರಾಜಕೀಯ ಇಲ್ಲ’ ಎಂದು ಶಿವಯೋಗ ಮಂದಿರದ ಅಧ್ಯಕ್ಷ ಸಂಗನಬಸವ ಸ್ವಾಮೀಜಿ ಹೇಳಿದರು.
ಮಂಗಳವಾರ ಶಿವಯೋಗ ಮಂದಿರಕ್ಕೆ ಅಮಿತ್ ಶಾ ಅವರು ಭೇಟಿ ನೀಡುತ್ತಿರುವ ವಿಚಾರಕ್ಕೆ ಸಂಬಂಧಿಸಿ ಅವರು ಮಾತನಾಡಿದರು.
‘ರಾಜಕೀಯ ಲಾಭ ಪಡೆಯುವುದು ‘ಶಾ’ ಅವರ ಉದ್ದೇಶವೂ ಆಗಿರಬಹುದು. ಆದರೆ ಶಿವಯೋಗ ಮಂದಿರ ಸ್ವಾಮೀಜಿಗಳನ್ನ ತಯಾರಿಸುವ ಸಂಸ್ಥೆಯಾಗಿದೆ. ಇಲ್ಲಿ ಎಲ್ಲಾ ಪಕ್ಷಗಳಿಗೂ ಮುಕ್ತ ಅವಕಾಶ ಇದೆ. ಮುಂದಿನ ದಿನಗಳಲ್ಲಿ ರಾಹುಲ್ ಗಾಂಧಿ ಅವರೂ ಇಲ್ಲಿಗೆ ಬರಬಹುದು’ ಎಂದರು.
‘ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ಮಾನ್ಯತೆ ನೀಡಬಾರದು ಎಂದು ಅಮಿತ್ ಶಾ ಅವರಿಗೆ ಮನವಿ ಮಾಡಲಿದ್ದೇವೆ’ ಎಂದು ತಿಳಿಸಿದರು.
ಪ್ರತ್ಯೇಕ ಲಿಂಗಾಯತ ಧರ್ಮ ಹೋರಾಟಕ್ಕೆ ನಿಂತವರೆಲ್ಲರೂ ಲಿಂಗಧಾರಣೆ ಮಾಡಿಲ್ಲ. ಲಿಂಗಧಾರಣೆ ಅಂದರೆ ಏನು ಎನ್ನುವುದು ಗೊತ್ತಿಲ್ಲದವರು ಪ್ರತ್ಯೇಕ ಲಿಂಗಾಯತ ಧರ್ಮ ಮಾನ್ಯತೆ ಕೇಳುತ್ತಿದ್ದಾರೆ ಎಂದರು.
ಲಿಂಗಧಾರಣೆ ಮಾಡದವರಿಂದ ಬಸವಣ್ಣನವರ ಉಪದೇಶ ಕೇಳಬೇಕಾಗಿಲ್ಲ ನಾವು ಶೋಷಣೆಯ ವಿರುದ್ಧ ಇದ್ದವರು ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಇಂತಹ ನಿರ್ಧಾರ ತೆಗೆದುಕೊಂಡಿದ್ದು ತಪ್ಪು, ಚುನಾವಣೆಯ ಹೊಸ್ತಿಲಲ್ಲಿ ಧರ್ಮ ಒಡೆಯುವ ಕೆಲಸ ಮಾಡಬಾರದಿತ್ತು ಎಂದು ವಾಗ್ದಾಳಿ ನಡೆಸಿದರು.
ಅಮಿತ್ ಶಾ ಅವರೊಂದಿಗೆ ನಿಗದಿಯಾಗಿರುವ ಸಭೆಯಲ್ಲಿ ಪಂಚಪೀಠಾಧೀಶರು ಸೇರಿದಂತೆ ನೂರಾರು ಸ್ವಾಮೀಜಿಗಳು ಭಾಗಿಯಾಗಲಿದ್ದಾರೆ.
ಸಂಜೆ 5 ಗಂಟೆಗೆ ಸ್ವಾಮೀಜಿಗಳ ಜೊತೆ ಅಮಿತ್ ಶಾ ಸಂವಾದದಲ್ಲಿ ನಡೆಸಲಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.