ಹುಬ್ಬಳ್ಳಿ: ಸಲ್ಲೇಖನ ವ್ರತದ ಮೂಲಕ ಸೋಮವಾರ ಸಮಾಧಿ ಮರಣ ಹೊಂದಿದ ದಿಗಂಬರ ಮುನಿ ಅಮೃತಸೇನ ಮಹಾರಾಜರ (78) ಅಂತ್ಯಕ್ರಿಯೆ ಜೈನ ಧರ್ಮದ ವಿಧಿ–ವಿಧಾನಗಳೊಂದಿಗೆ ಕಲಘಟಗಿ ತಾಲ್ಲೂಕಿನ ದಾಸ್ತಿಕೊಪ್ಪ ಗ್ರಾಮದಲ್ಲಿ ಮಂಗಳವಾರ ನೆರವೇರಿತು.
ಕರ್ನಾಟಕ ಮತ್ತು ಮಹಾರಾಷ್ಟ್ರದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ 5000ಕ್ಕೂ ಹೆಚ್ಚು ಜೈನ ಬಂಧುಗಳು ಅಮೃತಸೇನರ ಅಂತಿಮ ದರ್ಶನ ಪಡೆದರು. 2014ರ ಜನವರಿ 9ರಂದು ಧಾರವಾಡದ ಜೈನ ಮಂದಿರಲ್ಲಿ ನಿಯಮ ಸಲ್ಲೇಖನ ವ್ರತ ಆರಂಭಿಸಿದ್ದ ಅಮೃತಸೇನರು, ಸೋಮವಾರ ಸಂಜೆ ಯಮ ಸಲ್ಲೇಖನ ವ್ರತ ಕೈಗೊಂಡಿದ್ದರು.
ನಿಜಾನಂದ ಮುನಿ, ವರೂರಿನ ಧರ್ಮಸೇನ ಭಟ್ಟಾರಕ, ನಾಂದಣಿ ಮಠದ ಜಿನಸೇನ ಭಟ್ಟಾರಕ, ಸೋಂದಾ ಮಠದ ಭಟ್ಟಾಕಲಂಕ ಭಟ್ಟಾರಕ, ವೀರಮತಿ ಮಾತಾಜಿ ಸೇರಿದಂತೆ ಸಮಾಜದ ಪ್ರಮುಖರು ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದರು.
1936ರ ಸೆಪ್ಟೆಂಬರ್ 11ರಂದು ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯ ಶಿರೋಳ ತಾಲ್ಲೂಕಿನ ನಾಂದಣಿಯಲ್ಲಿ ಜನಿಸಿದ್ದ ಅಮೃತಸೇನರು ವಿವಾಹಿತರಾಗಿದ್ದು, ಇಬ್ಬರು ಮಕ್ಕಳಿದ್ದಾರೆ.
ಆತ್ಮ ಕಲ್ಯಾಣಕ್ಕಾಗಿ 1975ರಲ್ಲಿ ಸುಬಲ ಸಾಗರ ಮುನಿಗಳಿಂದ ಬ್ರಹ್ಮಚರ್ಯ ಸ್ವೀಕರಿಸಿದ್ದ ಅವರು, 1987ರಲ್ಲಿ ಚುಲುಕ್ ದೀಕ್ಷೆ, 1988ರಲ್ಲಿ ಸಿದ್ಧಸೇನ ಮಹಾರಾಜರಿಂದ ಮುನಿ ದೀಕ್ಷೆ ಪಡೆದಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.