ಕಾರವಾರ: ಮೀನುಗಾರಿಕೆ ನಡೆಸಿ ತಮಿಳುನಾಡಿಗೆ ಮಂಗಳವಾರ ವಾಪಸಾಗುತ್ತಿದ್ದ ಎರಡು ಮೀನುಗಾರಿಕಾ ದೋಣಿಗಳು ಕಡಲ ಕಿನಾರೆಯಿಂದ ಸುಮಾರು 21 ನಾಟಿಕಲ್ ಮೈಲು (ಸುಮಾರು 39 ಕಿ.ಮೀ) ದೂರದಲ್ಲಿ ಅರಬ್ಬಿ ಸಮುದ್ರದಲ್ಲಿ ಭಾಗಶಃ ಮುಳುಗಡೆಯಾಗಿವೆ.
ದೋಣಿಗಳನ್ನು ತಮಿಳುನಾಡಿನ ಮೀನುಗಾರರಿಗೆ ಸೇರಿದ ‘ಏಂಜೆಲ್ 1’ ಮತ್ತು ‘ಏಂಜೆಲ್ 2’ ಎಂದು ಗುರುತಿಸಲಾಗಿದೆ. ಅವುಗಳಲ್ಲಿ 20ಕ್ಕೂ ಹೆಚ್ಚು ಮೀನುಗಾರರು ಇದ್ದಿರಬಹುದು. ಬೃಹತ್ ಅಲೆಗಳ ಹೊಡೆತಕ್ಕೆ ಸಿಲುಕಿ ದೋಣಿಗಳಿಗೆ ಹಾನಿಯಾಗಿರುವ ಕಾರಣ ಅವಘಡ ನಡೆದಿರಬಹುದು ಎಂದು ಸ್ಥಳೀಯರು ಹೇಳಿದ್ದಾರೆ.
ಈ ಬಗ್ಗೆ ‘ಪ್ರಜಾವಾಣಿ’ ಜತೆ ಮಾತನಾಡಿದ ಮೀನುಗಾರಿಕಾ ಇಲಾಖೆ ಉಪ ನಿರ್ದೇಶಕ ಸಂತೋಷ್ ಕೊಪ್ಪದ, ‘ದೋಣಿಗಳು ಭಾಗಶಃ ಮುಳುಗಿರುವ ಬಗ್ಗೆ ಮಾಹಿತಿ ದೊರೆತಿದೆ. ತಕ್ಷಣ ಕರಾವಳಿ ರಕ್ಷಣಾ ಪಡೆಯವರಿಗೆ ಮಾಹಿತಿ ನೀಡಲಾಗಿದ್ದು, ರಕ್ಷಣಾ ಕಾರ್ಯಾಚರಣೆ ಕೈಗೊಂಡಿದ್ದಾರೆ. ಸ್ಥಳೀಯ ಮೀನುಗಾರರೂ ಸಂಕಷ್ಟದಲ್ಲಿರುವವರ ರಕ್ಷಣೆಗೆ ಧಾವಿಸಿದ್ದಾರೆ. ಸಂಪೂರ್ಣ ಮಾಹಿತಿ ಇನ್ನಷ್ಟೇ ಸಿಗಬೇಕಿದೆ’ ಎಂದು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.