ADVERTISEMENT

ಅರ್ಚಕ ನರಸರಾಜ ಭಟ್ಟ ವಿರುದ್ಧ ಪ್ರಕರಣ ದಾಖಲು

ಮೇಲುಕೋಟೆ ದೇವಸ್ಥಾನದ ರತ್ನಾಂಗಿ ಆಭರಣ ಅವ್ಯವಹಾರ

​ಪ್ರಜಾವಾಣಿ ವಾರ್ತೆ
Published 18 ಜುಲೈ 2013, 19:59 IST
Last Updated 18 ಜುಲೈ 2013, 19:59 IST
ಅರ್ಚಕ ನರಸರಾಜ ಭಟ್ಟ ವಿರುದ್ಧ ಪ್ರಕರಣ ದಾಖಲು
ಅರ್ಚಕ ನರಸರಾಜ ಭಟ್ಟ ವಿರುದ್ಧ ಪ್ರಕರಣ ದಾಖಲು   

ಪಾಂಡವಪುರ: ಮೇಲುಕೋಟೆಯ ಚಲುವರಾಯಸ್ವಾಮಿ ದೇವಸ್ಥಾನದಲ್ಲಿನ ರತ್ನಾಂಗಿ ಆಭರಣದ ಅವ್ಯವಹಾರದಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ಅರ್ಚಕ ನರಸರಾಜ ಭಟ್ಟ ವಿರುದ್ಧ ಮೇಲುಕೋಟೆ ಪೊಲೀಸ್ ಠಾಣೆಯಲ್ಲಿ ಬುಧವಾರ ರಾತ್ರಿ  ಕ್ರಿಮಿನಲ್ ಪ್ರಕರಣ ದಾಖಲಾಗಿದ್ದು, ಆರೋಪಿ ತಲೆಮರೆಸಿಕೊಂಡಿದ್ದಾನೆ.

ಸದನದಲ್ಲಿ ಪ್ರಕರಣ ಪ್ರತಿಧ್ವನಿಸಿ, ಮುಜರಾಯಿ ಸಚಿವ ಪ್ರಕಾಶ್ ಹುಕ್ಕೇರಿ ಅವರು `ಆರೋಪಿ ನರಸರಾಜ ಭಟ್ಟರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು' ಎಂದು ಪ್ರಕಟಿಸಿದ ಹಿನ್ನೆಲೆಯಲ್ಲಿ ಮಂಡ್ಯ ಜಿಲ್ಲಾಧಿಕಾರಿ ಬಿ.ಎನ್. ಕೃಷ್ಣಯ್ಯ ಅವರ ಸೂಚನೆ ಮೇರೆಗೆ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ವೇಣುಗೋಪಾಲ್ ಅವರು ನರಸರಾಜ ಭಟ್ಟ ವಿರುದ್ಧ ಮೇಲುಕೋಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಅದರಂತೆ ಅರ್ಚಕರ ವಿರುದ್ಧ ಭಾರತೀಯ ದಂಡ ಸಂಹಿತೆ ಸೆಕ್ಷನ್ 406 (ನಂಬಿಕೆ ದ್ರೋಹ), 408 (ಕರ್ತವ್ಯದಲ್ಲಿ ವಂಚನೆ), 420 (ಮೋಸ)ರ ಅಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. 

ಅರ್ಚಕ ಪರಾರಿ: ಠಾಣೆಯಲ್ಲಿ ಪ್ರಕರಣ ದಾಖಲಾಗುತ್ತಿರುವ ವಿಷಯ ತಿಳಿದ ತಕ್ಷಣ ನರಸರಾಜ ಭಟ್ಟ ಪರಾರಿಯಾಗಿದ್ದಾನೆ. ಎಸ್‌ಐ ಅಶೋಕ್ ಮತ್ತು ತಂಡ ಬುಧವಾರ ತಡರಾತ್ರಿಯಲ್ಲಿಯೇ ಅರ್ಚಕರ ಮನೆಯ ಶೋಧ ನಡೆಸಿದರಾದರೂ  ಸುಳಿವು ಸಿಗಲಿಲ್ಲ. ಅರ್ಚಕನ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಅಶೋಕ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT