ಬೆಂಗಳೂರು: 'ಇಂದು ಸಂಪುಟದ ವಿಸ್ತರಣೆ ಆಗಿದೆ. ಮುಖ್ಯಮಂತ್ರಿಗಳು ಮತ್ತು ನಾನು ಪ್ರಮಾಣ ವಚನ ಸ್ವೀಕರಿಸಿದ ಮೇಲೆ ಅಂದಿನಿಂದ ಇಲ್ಲಿಯವರೆಗೆ ಅನೇಕ ಸಭೆಗಳನ್ನು ಕರೆದು ಅಧಿಕಾರಿಗಳೊಂದಿಗೆ ಚರ್ಚೆ ಮಾಡಿದ್ದು, ಜ್ವಲಂತ ಸಮಸ್ಯೆಗಳನ್ನು ಪರಿಹರಿಸಲು ಶ್ರಮವಹಿಸಿದ್ದೇವೆ' ಎಂದು ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಹೇಳಿದರು.
ವಿಧಾನಸೌಧದಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
'ಸಮ್ಮಿಶ್ರ ಸರ್ಕಾರ ಆರಂಭದಲ್ಲಿ ಯಾವುದೇ ತೀರ್ಮಾನ ಮಾಡಲು ಒಂದಿಷ್ಟು ಸಮಯ ಬೇಕು. ರಾಜ್ಯದ ಜನತೆಗೆ ನಾವು ಎರಡೂ ಪಕ್ಷದವರು ಒಂದು ಭರವಸೆಯ ಮಾತುಗಳನ್ನು ಆಡಿದ್ದೇವೆ. ರಾಜ್ಯದಲ್ಲಿ ಒಳ್ಳೆಯ ಆಡಳಿತ ಕೊಡುತ್ತೇವೆ ಎಂದು ಬದ್ಧತೆಯ ಮಾತುಗಳನ್ನು ಆಡಿದ್ದೇವೆ.
ದಕ್ಷಿಣ ಕನ್ನಡದಲ್ಲಿ ಅಧಿಕ ಮಳೆಯಿಂದಾಗ ಅನಾಹುತ, ಬೆಂಗಳೂರಿನಲ್ಲಿ ಪ್ರವಾಹದ ಭೀತಿಯ ಕುರಿತು ಕ್ರಮವಹಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇವೆ.
ಆಡಳಿತ ಯಾವತ್ತಿಗೂ ನಿಂತಿಲ್ಲ. ಸಂಪುಟ ವಿಸ್ತರಣೆಗೆ ನಾವು ಕಾಯಲು ಹೋಗಲಿಲ್ಲ. ತಕ್ಷಣ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ಕೊಡುವ ಮೂಲಕ ಆಡಳಿತ ಚುರುಕಾಗಿ ಕೆಲಸ ಮಾಡಲು ಕ್ರಮವಹಿಸಿದ್ದೇವೆ' ಎಂದರು.
‘ನೂತನ ಸಚಿವರ ಖಾತೆ ಹಂಚಿಕೆ ಬಾಕಿಯಿದ್ದು, ಶೀಘ್ರವಾಗಿ ಖಾತೆ ಹಂಚುವ ಕೆಲಸ ಮಾಡಲಾಗುತ್ತದೆ. ಅದಾದ ತಕ್ಷಣ ಎಲ್ಲರೂ ಅವರವರ ಜಿಲ್ಲೆಗಳಲ್ಲಿ, ಇಲಾಖೆಗಳಲ್ಲಿ ಕೆಲಸಗಳನ್ನು ಕೈಗೆತ್ತಿಕೊಳ್ಳಬೇಕು ಎಂದು ಹೇಳಿದ್ದೇವೆ’ ಎಂದು ತಿಳಿಸಿದರು.
‘ಅನೇಕ ಅನುಭವಿ ಮುಖಂಡರು ಇಂದು ಸಂಪುಟದಲ್ಲಿ ಇದ್ದಾರೆ. ಅನೇಕ ಹೊಸಬರು ಇದ್ದಾರೆ. ಅದರಲ್ಲಿಯೂ ಇದು ಸಮ್ಮಿಶ್ರಶ್ರಮ. ಮುಂದಿನ ದಿನಗಳಲ್ಲಿ ಒಳ್ಳೆಯ ಆಡಳಿತ ಕೊಡಲು ಬಯಸುತ್ತೇವೆ. ಕಾಂಗ್ರೆಸ್ ಪಕ್ಷದಲ್ಲಿ ಅನೇಕರಿಗೆ ಅವಕಾಶ ಕಲ್ಪಿಸಿಕೊಡಲು ಆಗಲಿಲ್ಲ. ಕೆಲವರು ಅಸಮಾಧಾನದಿಂದ ಇದ್ದಾರೆ. ನಾವು ನಮ್ಮ ಹಂತದಲ್ಲಿ, ಹೈಕಮಾಂಡ್ ಹಂತದಲ್ಲಿ ತಿಳಿಹೇಳುವ, ಸಮಾಧಾನಪಡಿಸುವ ಕೆಲಸ ಮಾಡುತ್ತೇವೆ. ಯಾವುದೇ ಗೊಂದಲಕ್ಕೆ ಅವಕಾಶಕೊಡುವುದಿಲ್ಲ. ನಮ್ಮೆಲ್ಲರಿಗೂ ಜವಾಬ್ದಾರಿ ಇದೆ. ಅದಕ್ಕಾಗಿ ನಾವು ಇನ್ನೂ ಆರು ಸ್ಥಾನಗಳನ್ನು ಕಾಂಗ್ರೆಸ್ ಪಕ್ಷದಿಂದ ಹಾಗೆಯೇ ಇಟ್ಟಿದ್ದೇವೆ. ಯಾರಿಗೆ ಪರಿಗಣಿಸಬಹುದು ಅನ್ನೋ ದೃಷ್ಟಿಯಿಂದ ಖಾಲಿ ಇಟ್ಟಿದ್ದೇವೆ. ಜೆಡಿಎಸ್ ಒಂದು ಸ್ಥಾನ ಖಾಲಿಯಿಟ್ಟಿದೆ’ ಎಂದು ಹೇಳಿದರು.
‘ಇಂಥ ಸಂದರ್ಭಗಳು ಒಂದೇ ಪಕ್ಷದ ಸರ್ಕಾರ ಇದ್ದಾಗಲೂ ನೋಡಿದ್ದೀರಿ. ಸಮ್ಮಿಶ್ರ ಇರುವ ಕಾರಣ ಹೆಚ್ಚು ಇರುಬಹುದು. ಆತಂಕ ಪಡಲು ಕಾರಣ ಇಲ್ಲ. ಮುಂದಿನ ದಿನಗಳಲ್ಲಿ ಒಳ್ಳೇ ಆಡಳಿತ ನಿರೀಕ್ಷೆ ಮಾಡಬಹುದು’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.