ADVERTISEMENT

ಆಶಾ ಕಾರ್ಯಕರ್ತೆಯರ ನೆರವು

ಚುನಾವಣೆ ಅಕ್ರಮ, ಹಣ ಹಂಚಿಕೆ ಮಾಹಿತಿ

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2014, 19:30 IST
Last Updated 10 ಮಾರ್ಚ್ 2014, 19:30 IST

ಬಳ್ಳಾರಿ:  ಈ ಬಾರಿಯ ಲೋಕ­ಸಭೆ ಚುನಾ­ವಣೆಯಲ್ಲಿ ಸ್ಪರ್ಧಿ­ಸುವ ಅಭ್ಯರ್ಥಿಗಳು ನಡೆ­ಸುವ ಸಭೆ, ಸಮಾರಂಭ, ಮನೆ­ಮನೆ ಪ್ರಚಾರ,  ಹಣ, ಹೆಂಡ, ಉಡು­ಗೊರೆ ಹಂಚಿಕೆ ಕುರಿತು ಮಾಹಿತಿ ಸಂಗ್ರಹಿಸಲು ಆಯಾ ಕ್ಷೇತ್ರ ವ್ಯಾಪ್ತಿಯಲ್ಲಿ ಕಾರ್ಯ ನಿರ್ವ­ಹಿಸುವ ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆ­ಯರ ನೆರವು ಪಡೆಯಲು ಚುನಾ­ವಣಾ ಆಯೋಗ ನಿರ್ಧರಿಸಿದೆ.

ವಿಶೇಷವಾಗಿ ಗ್ರಾಮೀಣ ಪ್ರದೇಶ­­­ಗಳಲ್ಲಿ ಪ್ರಚಾರ ನಡೆ­ಸುವ ಅಭ್ಯರ್ಥಿಗಳು, ಕಾರ್ಯ­ಕರ್ತರು, ಬೆಂಬಲಿಗರು ಮತ­ದಾರ­­ರಿಗೆ ಒಡ್ಡುವ ಆಮಿಷ ಕುರಿತು ತಕ್ಷಣ ಮಾಹಿತಿ ಒದಗಿ­ಸಲು ಅನುಕೂಲವಾಗುವಂತೆ ಈ ಕಾರ್ಯಕರ್ತೆಯರಿಗೆ ಸಿಯುಜಿ (ಕ್ಲೋಸ್ ಯೂಸರ್‌ ಗ್ರೂಪ್‌) ವ್ಯವಸ್ಥೆಯ ಮೊಬೈಲ್‌ ಸಿಮ್‌ ಕಾರ್ಡ್‌ ವಿತ­ರಿಸಲು ಕ್ರಮ ಕೈಗೊಳ್ಳ­ಲಾಗಿದೆ.

ಈಗಾಗಲೇ ಬಿಎಸ್‌­ಎನ್­ಎಲ್‌ ಜತೆ  ಈ ಕುರಿತು ಮಾತು­ಕತೆ ನಡೆಸಲಾಗಿದ್ದು, ಒಟ್ಟು 760 ಸಿಮ್‌ ಕಾರ್ಡ್‌ ಪೂರೈಸುವಂತೆ ಕೋರಲಾಗಿದೆ ಎಂದು ಚುನಾವಣಾಧಿಕಾರಿ ಆಗಿ­ರುವ ಜಿಲ್ಲಾಧಿಕಾರಿ ಎ.ಎ. ಬಿಸ್ವಾಸ್‌ ‘ಪ್ರಜಾವಾಣಿ’ಗೆ ತಿಳಿಸಿ­ದ್ದಾರೆ.

ಇದೇ ಮೊದಲ ಬಾರಿಗೆ ವಿಶಿಷ್ಟ ಸೇವೆಗೆ ನಿಯುಕ್ತಿ ಹೊಂದು­­ತ್ತಿ­ರುವ ಈ ಕಾರ್ಯ­ಕರ್ತೆಯರಿಗೆ ಸೂಕ್ತ ರೀತಿಯ ಗೌರವಧನವನ್ನೂ ನೀಡುವ ನಿಟ್ಟಿನಲ್ಲಿ ಚಿಂತನೆ ನಡೆದಿದ್ದು, ಸರ್ಕಾರಕ್ಕೆ ಪ್ರಸ್ತಾ­ವನೆಯನ್ನೂ ಸಲ್ಲಿಸಲಾಗಿದೆ. ಕೇವಲ ಮಾಹಿ­ತಿ­ದಾರರಾಗಿ ಸೇವೆ ಸಲ್ಲಿಸುವ ಈ ಸಿಬ್ಬಂದಿಯು ತಮಗೆ ನೀಡಿ­ರುವ ಸಿಮ್ ಕಾರ್ಡ್‌ ಮೂಲಕ ಮಾದರಿ ನೀತಿ ಸಂಹಿತೆ ಮುಖ್ಯಸ್ಥರಿಗೆ ತಕ್ಷಣವೇ ಕರೆ ಮಾಡಿ ಅಥವಾ ಸಂದೇಶ (ಎಸ್‌ಎಂಎಸ್‌) ರವಾನಿಸುವ ಮೂಲಕ ಅಕ್ರಮ ತಡೆಗೆ ನೆರ­ವಾಗಲಿದ್ದಾರೆ ಎಂದು ಅವರು ಹೇಳಿದ್ದಾರೆ.

ಅಲ್ಲದೆ, ಗ್ರಾಮ ಪಂಚಾಯ್ತಿ­ಗಳ ಅಭಿ­ವೃದ್ಧಿ ಅಧಿಕಾರಿಗಳು, ಬಿಲ್‌ ಕಲೆಕ್ಟರ್‌ಗಳು, ಗ್ರಾಮ ಸೇವಕ­ರನ್ನೂ ಚುನಾವಣೆ ಕಾರ್ಯಕ್ಕೆ ಬಳಸಿಕೊಳ್ಳ­ಲಾಗು­ತ್ತಿದ್ದು, ಆಯಾ ಪಂಚಾಯ್ತಿ ವ್ಯಾಪ್ತಿ­­ಯಲ್ಲಿ ನಡೆಯುವ ಪ್ರಚಾರ ಕಾರ್ಯ, ರಾಜಕೀಯ ಸಭೆ, ಸಮಾರಂಭಗಳನ್ನು ಕ್ಯಾಮೆರಾ ಮೂಲಕ ಚಿತ್ರೀಕರಿ­ಸು­ವಂತೆ ಸೂಚಿಸ­ಲಾಗಿದೆ ಎಂದು ಅವರು ವಿವರ ನೀಡಿ­ದ್ದಾರೆ.

ಕಟ್ಟುನಿಟ್ಟಿನ ಕ್ರಮ: ಅಭ್ಯರ್ಥಿಗಳ ಖರ್ಚು, ವೆಚ್ಚವನ್ನು ಕರಾರುವಾಕ್ಕಾಗಿ ಲೆಕ್ಕ ಹಾಕುವ ಹಿನ್ನೆಲೆಯಲ್ಲಿ  ಆಯೋಗವು ಕೆಲವು ವಿಶಿಷ್ಟ ಕ್ರಮ ಜಾರಿಗೊಳಿಸಿದ್ದು, ವಸತಿ­ಗೃಹಗಳ ಮಾಲೀಕರಿಗೆ ದಿನ­ನಿತ್ಯದ ವಹಿವಾಟು, ಗ್ರಾಹಕರ ವಿವರವನ್ನು ಒದಗಿಸುವಂತೆ ಆದೇಶಿಸಲಾಗಿದೆ. ಬೇರೆ­ಯವರ ಹೆಸರಿನಲ್ಲಿ ಕೊಠಡಿ ಪಡೆಯುವುದನ್ನು ನಿಯಂತ್ರಿ­ಸಲು ಈ ಮಾರ್ಗ ಅನುಸರಿಸ­ಲಾಗುತ್ತಿದೆ.

ಹೋಟೆಲ್‌, ಬಾರ್, ರೆಸ್ಟೋ­ರಂಟ್‌, ಖಾನಾವಳಿ­ಗಳ­ಲ್ಲಿನ ವಹಿವಾಟಿನ ಕುರಿತೂ ವಿವರ ಕೋರಲಾಗಿದೆ. ಕಿರಾಣಿ ಅಂಗಡಿ, ಶಾಪಿಂಗ್‌ ಮಾಲ್‌, ಎಲೆಕ್ಟ್ರಾನಿಕ್‌ ವಸ್ತು, ಚಿನ್ನಾ­ಭರಣ ವ್ಯಾಪಾರಿಗಳೂ ಅಧಿಕ ಪ್ರಮಾಣದ ಮಾರಾಟದ ಮಾಹಿತಿ ನೀಡಬೇಕಾಗುತ್ತದೆ.

ಅಂಚೆ ಇಲಾಖೆ ಮೂಲಕ ಕಳುಹಿಸುವ ‘ಮನಿ ಆರ್ಡರ್‌’ ಪ್ರಕ್ರಿಯೆಯ ಮೇಲೂ ‘ಹದ್ದಿನ­ಕಣ್ಣು’ ಇರಿಸಲು ನಿರ್ಧರಿಸ­ಲಾಗಿದ್ದು, ಒಂದೇ ಬಾರಿ ಹೆಚ್ಚು ವಿಳಾಸಗಳಿಗೆ ಹಣ ಕಳಹಿಸಿ­ದಲ್ಲಿ ಆ ಕುರಿತ ಮಾಹಿತಿ ಒದಗಿಸುವಂತೆ ಸೂಚಿಸ­ಲಾಗಿದೆ.

ಕೊರಿಯರ್‌ ಮೂಲಕ ಹಣ ಹಾಗೂ ವಸ್ತುಗಳನ್ನು ಕಳು­ಹಿಸುವ ಸಾಧ್ಯತೆಗಳೂ ಇರುವು­ದರಿಂದ ಸಂಬಂಧಿಸಿ­ದವರಿಗೆ ತಕ್ಷಣಕ್ಕೆ ವಿವರ ಒದಗಿಸುವಂತೆ ಕೋರಲಾಗಿದೆ. ಮುದ್ರಣಾ­ಲಯ, ಬ್ಯಾಂಕ್‌ ಆಡಳಿತ ಮಂಡ­ಳಿಗಳೂ ಎಲ್ಲ ವ್ಯವಹಾರ­ಗಳ ಕುರಿತು ಮಾಹಿತಿ ಸಲ್ಲಿಸು­ವುದು ಅನಿ­ವಾರ್ಯ. ಟ್ಯಾಕ್ಸಿ ಮಾಲೀ­ಕರು ತಮ್ಮ ವಾಹನದ ಮೀಟರ್‌ ರೀಡಿಂಗ್‌ ಒದಗಿಸು­ವುದನ್ನೂ ಕಡ್ಡಾಯ­ಗೊಳಿಸ­ಲಾಗಿದೆ.

ಅಭ್ಯರ್ಥಿಗಳ, ಪಕ್ಷಗಳ ಪ್ರಮುಖ ಮುಖಂಡರ ಚಲನ­ವಲನದ ಮೇಲೆ ನಿಗಾ ಇರಿ­ಸಲು, ಚುನಾವಣೆಯ ಒಟ್ಟಾರೆ ಪ್ರಕ್ರಿಯೆಯ ಚಿತ್ರೀಕರಣಕ್ಕೆಂದೇ ಬೇರೆ ಜಿಲ್ಲೆಯ 250 ಜನ ಖಾಸಗಿ ವೀಡಿಯೊ ಗ್ರಾಫರ್‌­ಗಳನ್ನು ನೇಮಿಸಲಾ­ಗುತ್ತಿದೆ  ಎಂದು ಬಿಸ್ವಾಸ್‌ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.