ಬಳ್ಳಾರಿ: ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳು ನಡೆಸುವ ಸಭೆ, ಸಮಾರಂಭ, ಮನೆಮನೆ ಪ್ರಚಾರ, ಹಣ, ಹೆಂಡ, ಉಡುಗೊರೆ ಹಂಚಿಕೆ ಕುರಿತು ಮಾಹಿತಿ ಸಂಗ್ರಹಿಸಲು ಆಯಾ ಕ್ಷೇತ್ರ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುವ ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರ ನೆರವು ಪಡೆಯಲು ಚುನಾವಣಾ ಆಯೋಗ ನಿರ್ಧರಿಸಿದೆ.
ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಪ್ರಚಾರ ನಡೆಸುವ ಅಭ್ಯರ್ಥಿಗಳು, ಕಾರ್ಯಕರ್ತರು, ಬೆಂಬಲಿಗರು ಮತದಾರರಿಗೆ ಒಡ್ಡುವ ಆಮಿಷ ಕುರಿತು ತಕ್ಷಣ ಮಾಹಿತಿ ಒದಗಿಸಲು ಅನುಕೂಲವಾಗುವಂತೆ ಈ ಕಾರ್ಯಕರ್ತೆಯರಿಗೆ ಸಿಯುಜಿ (ಕ್ಲೋಸ್ ಯೂಸರ್ ಗ್ರೂಪ್) ವ್ಯವಸ್ಥೆಯ ಮೊಬೈಲ್ ಸಿಮ್ ಕಾರ್ಡ್ ವಿತರಿಸಲು ಕ್ರಮ ಕೈಗೊಳ್ಳಲಾಗಿದೆ.
ಈಗಾಗಲೇ ಬಿಎಸ್ಎನ್ಎಲ್ ಜತೆ ಈ ಕುರಿತು ಮಾತುಕತೆ ನಡೆಸಲಾಗಿದ್ದು, ಒಟ್ಟು 760 ಸಿಮ್ ಕಾರ್ಡ್ ಪೂರೈಸುವಂತೆ ಕೋರಲಾಗಿದೆ ಎಂದು ಚುನಾವಣಾಧಿಕಾರಿ ಆಗಿರುವ ಜಿಲ್ಲಾಧಿಕಾರಿ ಎ.ಎ. ಬಿಸ್ವಾಸ್ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.
ಇದೇ ಮೊದಲ ಬಾರಿಗೆ ವಿಶಿಷ್ಟ ಸೇವೆಗೆ ನಿಯುಕ್ತಿ ಹೊಂದುತ್ತಿರುವ ಈ ಕಾರ್ಯಕರ್ತೆಯರಿಗೆ ಸೂಕ್ತ ರೀತಿಯ ಗೌರವಧನವನ್ನೂ ನೀಡುವ ನಿಟ್ಟಿನಲ್ಲಿ ಚಿಂತನೆ ನಡೆದಿದ್ದು, ಸರ್ಕಾರಕ್ಕೆ ಪ್ರಸ್ತಾವನೆಯನ್ನೂ ಸಲ್ಲಿಸಲಾಗಿದೆ. ಕೇವಲ ಮಾಹಿತಿದಾರರಾಗಿ ಸೇವೆ ಸಲ್ಲಿಸುವ ಈ ಸಿಬ್ಬಂದಿಯು ತಮಗೆ ನೀಡಿರುವ ಸಿಮ್ ಕಾರ್ಡ್ ಮೂಲಕ ಮಾದರಿ ನೀತಿ ಸಂಹಿತೆ ಮುಖ್ಯಸ್ಥರಿಗೆ ತಕ್ಷಣವೇ ಕರೆ ಮಾಡಿ ಅಥವಾ ಸಂದೇಶ (ಎಸ್ಎಂಎಸ್) ರವಾನಿಸುವ ಮೂಲಕ ಅಕ್ರಮ ತಡೆಗೆ ನೆರವಾಗಲಿದ್ದಾರೆ ಎಂದು ಅವರು ಹೇಳಿದ್ದಾರೆ.
ಅಲ್ಲದೆ, ಗ್ರಾಮ ಪಂಚಾಯ್ತಿಗಳ ಅಭಿವೃದ್ಧಿ ಅಧಿಕಾರಿಗಳು, ಬಿಲ್ ಕಲೆಕ್ಟರ್ಗಳು, ಗ್ರಾಮ ಸೇವಕರನ್ನೂ ಚುನಾವಣೆ ಕಾರ್ಯಕ್ಕೆ ಬಳಸಿಕೊಳ್ಳಲಾಗುತ್ತಿದ್ದು, ಆಯಾ ಪಂಚಾಯ್ತಿ ವ್ಯಾಪ್ತಿಯಲ್ಲಿ ನಡೆಯುವ ಪ್ರಚಾರ ಕಾರ್ಯ, ರಾಜಕೀಯ ಸಭೆ, ಸಮಾರಂಭಗಳನ್ನು ಕ್ಯಾಮೆರಾ ಮೂಲಕ ಚಿತ್ರೀಕರಿಸುವಂತೆ ಸೂಚಿಸಲಾಗಿದೆ ಎಂದು ಅವರು ವಿವರ ನೀಡಿದ್ದಾರೆ.
ಕಟ್ಟುನಿಟ್ಟಿನ ಕ್ರಮ: ಅಭ್ಯರ್ಥಿಗಳ ಖರ್ಚು, ವೆಚ್ಚವನ್ನು ಕರಾರುವಾಕ್ಕಾಗಿ ಲೆಕ್ಕ ಹಾಕುವ ಹಿನ್ನೆಲೆಯಲ್ಲಿ ಆಯೋಗವು ಕೆಲವು ವಿಶಿಷ್ಟ ಕ್ರಮ ಜಾರಿಗೊಳಿಸಿದ್ದು, ವಸತಿಗೃಹಗಳ ಮಾಲೀಕರಿಗೆ ದಿನನಿತ್ಯದ ವಹಿವಾಟು, ಗ್ರಾಹಕರ ವಿವರವನ್ನು ಒದಗಿಸುವಂತೆ ಆದೇಶಿಸಲಾಗಿದೆ. ಬೇರೆಯವರ ಹೆಸರಿನಲ್ಲಿ ಕೊಠಡಿ ಪಡೆಯುವುದನ್ನು ನಿಯಂತ್ರಿಸಲು ಈ ಮಾರ್ಗ ಅನುಸರಿಸಲಾಗುತ್ತಿದೆ.
ಹೋಟೆಲ್, ಬಾರ್, ರೆಸ್ಟೋರಂಟ್, ಖಾನಾವಳಿಗಳಲ್ಲಿನ ವಹಿವಾಟಿನ ಕುರಿತೂ ವಿವರ ಕೋರಲಾಗಿದೆ. ಕಿರಾಣಿ ಅಂಗಡಿ, ಶಾಪಿಂಗ್ ಮಾಲ್, ಎಲೆಕ್ಟ್ರಾನಿಕ್ ವಸ್ತು, ಚಿನ್ನಾಭರಣ ವ್ಯಾಪಾರಿಗಳೂ ಅಧಿಕ ಪ್ರಮಾಣದ ಮಾರಾಟದ ಮಾಹಿತಿ ನೀಡಬೇಕಾಗುತ್ತದೆ.
ಅಂಚೆ ಇಲಾಖೆ ಮೂಲಕ ಕಳುಹಿಸುವ ‘ಮನಿ ಆರ್ಡರ್’ ಪ್ರಕ್ರಿಯೆಯ ಮೇಲೂ ‘ಹದ್ದಿನಕಣ್ಣು’ ಇರಿಸಲು ನಿರ್ಧರಿಸಲಾಗಿದ್ದು, ಒಂದೇ ಬಾರಿ ಹೆಚ್ಚು ವಿಳಾಸಗಳಿಗೆ ಹಣ ಕಳಹಿಸಿದಲ್ಲಿ ಆ ಕುರಿತ ಮಾಹಿತಿ ಒದಗಿಸುವಂತೆ ಸೂಚಿಸಲಾಗಿದೆ.
ಕೊರಿಯರ್ ಮೂಲಕ ಹಣ ಹಾಗೂ ವಸ್ತುಗಳನ್ನು ಕಳುಹಿಸುವ ಸಾಧ್ಯತೆಗಳೂ ಇರುವುದರಿಂದ ಸಂಬಂಧಿಸಿದವರಿಗೆ ತಕ್ಷಣಕ್ಕೆ ವಿವರ ಒದಗಿಸುವಂತೆ ಕೋರಲಾಗಿದೆ. ಮುದ್ರಣಾಲಯ, ಬ್ಯಾಂಕ್ ಆಡಳಿತ ಮಂಡಳಿಗಳೂ ಎಲ್ಲ ವ್ಯವಹಾರಗಳ ಕುರಿತು ಮಾಹಿತಿ ಸಲ್ಲಿಸುವುದು ಅನಿವಾರ್ಯ. ಟ್ಯಾಕ್ಸಿ ಮಾಲೀಕರು ತಮ್ಮ ವಾಹನದ ಮೀಟರ್ ರೀಡಿಂಗ್ ಒದಗಿಸುವುದನ್ನೂ ಕಡ್ಡಾಯಗೊಳಿಸಲಾಗಿದೆ.
ಅಭ್ಯರ್ಥಿಗಳ, ಪಕ್ಷಗಳ ಪ್ರಮುಖ ಮುಖಂಡರ ಚಲನವಲನದ ಮೇಲೆ ನಿಗಾ ಇರಿಸಲು, ಚುನಾವಣೆಯ ಒಟ್ಟಾರೆ ಪ್ರಕ್ರಿಯೆಯ ಚಿತ್ರೀಕರಣಕ್ಕೆಂದೇ ಬೇರೆ ಜಿಲ್ಲೆಯ 250 ಜನ ಖಾಸಗಿ ವೀಡಿಯೊ ಗ್ರಾಫರ್ಗಳನ್ನು ನೇಮಿಸಲಾಗುತ್ತಿದೆ ಎಂದು ಬಿಸ್ವಾಸ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.