ಮೈಸೂರು: ರಂಗಾಯಣವು ಏ.6 ರಿಂದ 10ರವರೆಗೆ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವವನ್ನು ಆಯೋಜಿಸಿದೆ. ಹೆಸರಾಂತ ಕವಿ ರವೀಂದ್ರನಾಥ ಟ್ಯಾಗೋರರ ಜನ್ಮದಿನಾಚರಣೆ ಅಂಗವಾಗಿ ಬಹುರೂಪಿಗೆ ‘ಗುರುದೇವ-150’ ಎಂದು ಹೆಸರಿಡಲಾಗಿದೆ.
ಈ ಬಾರಿ ಬಹುರೂಪಿಯಲ್ಲಿ ವಸ್ತುಪ್ರದರ್ಶನ, ಪುಸ್ತಕ ಪ್ರದರ್ಶನ, ಚಲನಚಿತ್ರೋತ್ಸವ, ವರ್ಣಚಿತ್ರ ಪ್ರದರ್ಶನ, ಮೂರು ರಾಷ್ಟ್ರೀಯ ವಿಚಾರಗೋಷ್ಠಿಗಳು ಹಾಗೂ ಕಾವ್ಯವಾಚನ ಗೋಷ್ಠಿಯನ್ನು ಹಮ್ಮಿಕೊಳ್ಳಲಾಗಿದೆ. ರಂಗಾಯಣದ ವನರಂಗದಲ್ಲಿ ಮಣಿಪುರಿ ಜನಪದ ನೃತ್ಯ, ಸುಭದ್ರಾ ಪರಿ ಣಯ (ಯಕ್ಷಗಾನ), ಟೀ ಹೌಸ್ (ಕನ್ನಡ), ಮಿತ್ತ ಬೈಲು ಯಮುನಕ್ಕ (ಕನ್ನಡ), ಕರಾಳ ಬೇಟೆ (ಕನ್ನಡ) ಟ್ಯಾಗೋರ್ ಕಾವ್ಯ ಆಧರಿಸಿದ ನೃತ್ಯ ನಾಟಕ ಪ್ರದರ್ಶನವಿರುತ್ತದೆ. ಭೂಮಿಗೀತದಲ್ಲಿ ಗೋರಾ ಮತ್ತು ಚಿತ್ರಪಟ (ಕನ್ನಡ), ಭಾನುಸಿಂಗರ್ ಪದಾವಳಿ (ಬಂಗಾಳಿ), ಸೂರ್ಯಾಸ್ತ (ಹಿಂದಿ), ಫಾಯ್ ಜರೂರಿ ಲೋಗ್ (ಉರ್ದು) ಹಾಗೂ ಕಲಾಮಂದಿರ ದಲ್ಲಿ ಮಾಯಾ ಬಜಾರ್ (ತೆಲುಗು), ಹಯವದನ (ಮಣಿಪುರಿ), ನಾಗಲಿಂಗ ಮಹಿಮೆ (ಕನ್ನಡ), ಚಿತ್ರಾಂಗದ (ಬಂಗಾಳಿ), ರಂಜಬತಿ ಸೇನ್ (ಬಂಗಾಳಿ) ನಾಟಕಗಳು ಪ್ರದರ್ಶನಗೊಳ್ಳಲಿವೆ.
ಬಹುರೂಪಿಯನ್ನು ಬುಧವಾರ ಸಂಜೆ 5 ಗಂಟೆಗೆ ವನರಂಗದಲ್ಲಿ ರಂಗಭೂಮಿ ಖ್ಯಾತ ನಟ ಅಮೋಲ್ ಪಾಲೇಕರ್ ಉದ್ಘಾಟಿಸಲಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಸಚಿವ ಗೋವಿಂದ ಎಂ.ಕಾರಜೋಳ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎ.ರಾಮದಾಸ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿ ರಮೇಶ್ ಝಳಕಿ, ನಿರ್ದೇಶಕ ಮನು ಬಳಿಗಾರ್, ಜಿಲ್ಲಾಧಿಕಾರಿ ಹರ್ಷಗುಪ್ತ ಆಗಮಿಸುವರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.