ADVERTISEMENT

ಉಷ್ಣಮಾರುತ ಬೀಸಲಿದೆ ಎಚ್ಚರ!

ರಾಜಧಾನಿ, ಕರಾವಳಿಯಲ್ಲಿ ಕೆಂಡದಂತಹ ಬಿಸಿಲು

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2014, 19:30 IST
Last Updated 21 ಮಾರ್ಚ್ 2014, 19:30 IST

ಬೆಂಗಳೂರು: ಮಾರ್ಚ್‌ ಹಾಗೂ ಏಪ್ರಿಲ್‌ ತಿಂಗಳಿನಲ್ಲಿ ಉತ್ತರ ಕರ್ನಾಟಕ ಭಾಗ ಕಾದ ಬಾಣಲೆ­ಯಂತಾಗುವುದು ಸಹಜ. ಆದರೆ, ಈ ವರ್ಷ ಮಾರ್ಚ್‌ ತಿಂಗಳಿನಲ್ಲೇ ರಾಜ­ಧಾನಿ ಹಾಗೂ ಕರಾವಳಿಯಲ್ಲಿ ಕೆಂಡ­ದಂತಹ ಬಿಸಿಲು ಕಾಣಿಸಿಕೊಂಡಿದೆ.

ಸಾಮಾನ್ಯವಾಗಿ ಮಾರ್ಚ್‌ ತಿಂಗಳ  ಮಧ್ಯಭಾಗದಲ್ಲಿ ಬಿಸಿಲಿನ ತಾಪ ಹೆಚ್ಚು­ತ್ತದೆ. ಆದರೆ, ಈ ಬಾರಿ ಮಾರ್ಚ್‌ ಮೊದಲನೇ ವಾರದಿಂದಲೇ ಏರುತ್ತಿ­ರುವ ಬಿಸಿಲಿನ ಕಾವು ಸರಾಸರಿ ಉಷ್ಣಾಂಶ­­ವನ್ನೇ ಮೀರಿದೆ. ಬೆಂಗ­ಳೂರು, ದಕ್ಷಿಣ ಕನ್ನಡ, ಉಡುಪಿ, ಮೈಸೂರಿನಲ್ಲಿ  ಗರಿಷ್ಠ ಉಷ್ಣಾಂಶ ದಾಖಲಾಗಿದೆ.

ಈ ಬಗ್ಗೆ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಹವಾಮಾನ ಇಲಾ­ಖೆ ನಿರ್ದೇಶಕ ಬಿ.ಪುಟ್ಟಣ್ಣ, ‘ಪ್ರಾಕೃತಿಕ ಅಸಮತೋಲನದಿಂದಾಗಿ ಬೇಸಿಗೆಯ ತಾಪಮಾನ ಈ ಬಾರಿ ಹೆಚ್ಚಾಗಿದ್ದು, ಮಹಾನಗರಗಳಲ್ಲಿ ಸರಾಸರಿಗಿಂತಲೂ ಹೆಚ್ಚಿನ ಉಷ್ಣಾಂಶ ಕಂಡುಬಂದಿದೆ. ಮುಂದಿನ ದಿನಗಳಲ್ಲಿ ಉಷ್ಣಾಂಶ ಇನ್ನಷ್ಟು ಹೆಚ್ಚುವ ಸಾಧ್ಯತೆಯಿದೆ’ ಎಂದು ಮಾಹಿತಿ ನೀಡಿದರು.

‘ಭೂಮಟ್ಟದಿಂದಲೇ ಉಷ್ಣಾಂಶ ಏರಿಕೆಯಾಗುವುದರಿಂದ ತಾಪಮಾನ ಹೆಚ್ಚುತ್ತದೆ. ಪೂರ್ವದಿಂದ ಪಶ್ಚಿಮಕ್ಕೆ ಚಲಿಸುವ ಮಾರುತಗಳಲ್ಲಿ ವಾಯು­ಭಾರ ಕುಸಿತ ಉಂಟಾದಾಗ ಉಷ್ಣಾಂಶ­ವು ಇಳಿಕೆಯಾಗುವ ಸಾಧ್ಯತೆ­ಯಿದೆ’ ಎಂದು ಹೇಳಿದರು.

ಏಪ್ರಿಲ್‌ ಮಧ್ಯಭಾಗದಲ್ಲಿ ಹೆಚ್ಚಾಗುವ ಸಾಧ್ಯತೆ: ‘ಏಪ್ರಿಲ್‌ ತಿಂಗಳಿನ ಮಧ್ಯ­ಭಾಗದಲ್ಲಿ ಉತ್ತರ ಕರ್ನಾಟಕದ ಬೀದರ್‌, ಯಾದ­ಗಿರಿ, ಗುಲ್ಬರ್ಗ, ರಾಯ­ಚೂರು, ಬೆಳಗಾವಿ ಸೇರಿದಂತೆ ಹಲವೆಡೆ  ಉಷ್ಣಮಾರುತದ ಪ್ರಭಾವ  ಹೆಚ್ಚಾಗಬಹುದು’ ಎಂದು ಅವರು ಎಚ್ಚರಿಸಿದರು.

‘ಸಾಮಾನ್ಯವಾಗಿ ಈ ಭಾಗಗಳಲ್ಲಿ ಸರಾಸರಿ ಉಷ್ಣಾಂಶ 39 ಡಿಗ್ರಿ ಸೆಲ್ಸಿ­ಯಸ್‌. ಆದರೆ, ಇದಕ್ಕಿಂತ 5 ರಿಂದ 6 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶ ಏರಿಕೆ­ಯಾದಾಗ ಉಷ್ಣಗಾಳಿ ಬೀಸು­ತ್ತದೆ. ಅತಿಯಾದ ಬಿಸಿಗಾಳಿ ಬೀಸುವುದರಿಂದ ಸಾವು–ನೋವುಗಳಾ­ಗಬಹುದು’ ಎಂದು ವಿಶ್ಲೇಷಿಸಿದರು.

‘ಪ್ರತಿ ಬಾರಿಯೂ ಉಷ್ಣ ಮಾರುತ­ಗಳ ಪ್ರಭಾವವಿರುತ್ತದೆ. ಈ ಸಂದರ್ಭ­ಗಳಲ್ಲಿ ಇಲಾಖೆಯು ಮುನ್ನಚ್ಚರಿಕೆಯ ಕ್ರಮಗಳನ್ನು ಅನುಸರಿಸುವಂತೆ ಸೂಚಿ­ಸು­ತ್ತದೆ. ಈ ಬಾರಿ ಬೀಸುವ ಉಷ್ಣಾಂ­ಶದ ಗಾಳಿ ಕಳೆದ ಬಾರಿ­ಗಿಂತಲೂ ಪ್ರಭಾವಶಾಲಿ ಯಾಗಿರ­ಲಿದೆ’ ಎಂದು ತಿಳಿಸಿದರು.

ಬಿಸಿಲು ಕಾದರೆ ಮಾತ್ರ ಉತ್ತಮ ಮಳೆ: ‘ಈಗ ಉಷ್ಣಾಂಶದಲ್ಲಿ ಏರಿಕೆ­ಯಾಗಿದ್ದರೂ, ಇದು ಅನೈಸರ್ಗಿಕವಲ್ಲ.  ಹತ್ತು ವರ್ಷಗಳಿಂದೀಚೆಗೆ ತಾಪಮಾನ­ದಲ್ಲಿ ಸತತ ಏರಿಕೆ ಕಂಡುಬಂದಿದೆ. ಬೇಸಿಗೆಯಲ್ಲಿ ಭೂಮಿ ಚೆನ್ನಾಗಿ ಕಾದರೆ ಮಾತ್ರ ಉತ್ತಮ ಮಳೆಯನ್ನು ನಿರೀಕ್ಷಿಸ­ಬಹುದು. ಬಿಸಿಲ ಝಳಕ್ಕೂ, ಉತ್ತಮ ಮಳೆಗೂ ಸಂಬಂಧವಿದೆ’ ಎಂದರು.

ಕಡಿಮೆಗೊಳ್ಳಲಿದೆ ಬಿಸಿಲ ಧಗೆ: ಕೃಷಿ ವಿಶ್ವವಿದ್ಯಾಲಯದ ಹವಾ­ಮಾನ ವಿಭಾಗದ ಪ್ರಾಧ್ಯಾಪಕ ಡಾ.ಎಂ.ಬಿ.­ರಾಜೇಗೌಡ,  ‘ಬೇಸಿಗೆ ಮಳೆಯು ಅವಧಿಗೆ ಮುನ್ನವೇ ಬಂದಿರುವು­ದ­ರಿಂದ ಏರುತ್ತಿರುವ ಬಿಸಿಲಿನ ಕಾವು ಕುಸಿಯುವ ಸಾಧ್ಯತೆಯಿದೆ’ ಎಂದು ಅಭಿಪ್ರಾಯಪಟ್ಟರು.

‘ಸಾಮಾನ್ಯವಾಗಿ ಮಾರ್ಚ್‌  15 ರಿಂದ ಮೇ ತಿಂಗಳ ಕೊನೆಯವರೆಗೆ ಬೇಸಿಗೆ ಮಳೆಯ (ಪೂರ್ವ ಮುಂಗಾರು) ಅವಧಿ ಎಂದು ಪರಿಗ­ಣಿ­ಸ­ಲಾಗುತ್ತದೆ. ಆದರೆ, ಈ ಬಾರಿ ಫೆಬ್ರುವರಿ ಕೊನೆಯ ವಾರದಲ್ಲಿಯೇ ಬೇಸಿಗೆ ಮಳೆ ಆರಂಭಗೊಂಡಿ­ರು­ವುದ­ರಿಂದ ವಾತಾವರಣ­ದಲ್ಲಿ ಉಷ್ಣಾಂಶ ಗಣನೀಯವಾಗಿ ಕಡಿಮೆಯಾಗುವ ಸಾಧ್ಯತೆಯಿದೆ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.