ಭದ್ರಾವತಿ: ‘ಜೆಡಿಎಸ್ ಪಕ್ಷವನ್ನು ಅಧಿಕಾರಕ್ಕೆ ತಂದು ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡುವುದೇ ನಮ್ಮ ಗುರಿ’ ಎಂದು ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಹೇಳಿದರು.
ಇಲ್ಲಿನ ಹಳೇ ನಗರದಲ್ಲಿ ಬುಧವಾರ ಜರುಗಿದ ಕಾರ್ಯಕರ್ತರ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.
ನಾನು ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸಿಯಾಗಿದೆ. ಇನ್ನೊಮ್ಮೆ ಅದರ ಮೇಲೆ ನನಗೆ ಆಸಕ್ತಿ ಇಲ್ಲ. ಯುವಕರಾದ ಕುಮಾರ ಸ್ವಾಮಿ ಈ ರಾಜ್ಯದ ಅಧಿಕಾರ ಹಿಡಿಯಬೇಕು ಎಂಬುದು ನಮ್ಮೆಲ್ಲರ ಆಸೆ ಎಂದರು. ‘ನನಗೆ ಈಗ 78ವಯಸ್ಸು, ನನಗಿಂತ ದೇವೇಗೌಡರು ಇನ್ನೂ ಆರು ತಿಂಗಳು ದೊಡ್ಡವರು, ನಮ್ಮಿಬ್ಬರಿಗೂ ಬೇಕಿರುವುದು ಹೊಸ ನಾಯಕತ್ವ ಕೊಡಿಸುವ ಜವಾಬ್ದಾರಿ ಹಾಗಾಗಿ, ಈ ವಯಸ್ಸಿನಲ್ಲಿ ರಾಜ್ಯಾದ್ಯಂತ ಪ್ರವಾಸ ನಡೆಸಿದ್ದೇವೆ’ ಎಂದು ತಮ್ಮ ರಾಜಕೀಯ ಇಚ್ಛಾಶಕ್ತಿ ಪ್ರದರ್ಶಿಸಿ ಕಾರ್ಯಕರ್ತರಿಗೆ ಹುರುಪು ತುಂಬಿದರು. ರಾಜ್ಯದಲ್ಲಿ ಬಿಜೆಪಿ ಸಂಕಷ್ಟದಲ್ಲಿದೆ, ಕಾಂಗ್ರೆಸ್ ಮುಳುಗುತ್ತಿರುವ ಹಡಗು. ಜೆಡಿಎಸ್ ಪಕ್ಷಕ್ಕೆ ಇದು ಸಕಾಲ ಇದನ್ನು ಬಳಸಿಕೊಳ್ಳುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದರು.
ಕೇಂದ್ರ ಯುಪಿಎ ಸರ್ಕಾರ ಬೆಲೆ ನಿಯಂತ್ರಿಸುವಲ್ಲಿ ವಿಫಲವಾಗಿದೆ. ರಾಜ್ಯ ಸರ್ಕಾರ ಕೃಷಿ ಬಜೆಟ್ ನೆಪದಲ್ಲಿ ರೈತರಿಗೆ ವಂಚಿಸಲು ಸಿದ್ಧವಾಗಿದೆ. ಇವೆಲ್ಲವನ್ನು ನೋಡಿ ಬೇಸತ್ತಿರುವ ಜನಕ್ಕೆ ಹೊಸ ನಾಯಕತ್ವ ಬೇಕಿದೆ. ಅದಕ್ಕಾಗಿ ಪಕ್ಷ ಬಲಪಡಿಸೋಣ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.