ಬೆಂಗಳೂರು: ತತ್ವಪದಗಳ ಸಂಪುಟಗಳನ್ನು ಎಲ್ಲ ಗ್ರಂಥಾಲಯಗಳಲ್ಲಿ ಕಡ್ಡಾಯವಾಗಿ ಇಡುವಂತೆ ಸೂಚನೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಕರ್ನಾಟಕ ತತ್ವಪದಕಾರರ ಸಮಗ್ರ ಸಾಹಿತ್ಯ ಪ್ರಕಟಣಾ ಯೋಜನೆಯಡಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ ಹೊರ ತಂದಿರುವ 32 ಸಂಪುಟಗಳನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.
‘ತತ್ವಪದಗಳು ಎಂದರೆ ಜೀವನದ ಮೌಲ್ಯಗಳ ದರ್ಶನ. ಅವುಗಳನ್ನು ಹಾಡುವ, ಭಜನೆ ಮಾಡುವ ಸಂಸ್ಕೃತಿ ಈಗ ಮಾಯವಾಗಿದೆ. ನಮ್ಮ ಪೂರ್ವಜರು ಹಾಡುವ ಜೊತೆಗೆ ಬದುಕಿನಲ್ಲೂ ಅಳವಡಿಸಿಕೊಂಡಿದ್ದರು’ ಎಂದರು. ಎಲ್ಲ ತತ್ವಪದಗಳನ್ನು ಒಂದೆಡೆ ಸೇರಿಸಿ ಸಂಪುಟಗಳಾಗಿ ಹೊರ ತಂದಿರುವುದು ಅದ್ಬುತವಾದ ಕೆಲಸ. 81 ಸಂಶೋಧಕರು ಇದಕ್ಕಾಗಿ ಶ್ರಮಿಸಿದ್ದಾರೆ. ಬಾಕಿ ಇರುವ ಇನ್ನೂ 28 ಸಂಪುಟಗಳನ್ನು ಹೊರ ತರುವ ಕೆಲಸವನ್ನು ತ್ವರಿತವಾಗಿ ಮಾಡಬೇಕು ಎಂದು ಮುಖ್ಯಮಂತ್ರಿ ಹೇಳಿದರು. ಕನ್ನಡ ಮತ್ತು ಸಂಸ್ಕೃತಿ ಸಚಿವೆ ಉಮಾಶ್ರೀ, ತತ್ವಪದ ಸಂಪುಟಗಳನ್ನು ಕಣಜ ವೆಬ್ಸೈಟ್ಗೂ ಅಪ್ಲೋಡ್ ಮಾಡಲಾಗುವುದು.
ಪದಗಳನ್ನು ಕಲಾವಿದರಿಂದ ಹಾಡಿಸಿ ಅದರ ಧ್ವನಿಮುದ್ರಿಕೆಯ್ನೂ ವೆಬ್ಸೈಟ್ಗೆ ಸೇರ್ಪಡೆ ಮಾಡಲಾಗುವುದು ಎಂದು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.