ಬೆಳಗಾವಿ: ‘ಒಂದು ಮನೆಯಲ್ಲಿ ಒಂದೇ ಮಗು ಇರದಂತೆ ನೋಡಿಕೊಳ್ಳಬೇಕು. ಇಬ್ಬರು ಮಕ್ಕಳಿರಬೇಕು’ ಎಂದು ಗೋವಾ ರಾಜ್ಯಪಾಲೆ ಮೃದುಲಾ ಸಿನ್ಹಾ ಸಲಹೆ ನೀಡಿದರು.
ಇಲ್ಲಿನ ಜವಾಹರಲಾಲ್ ನೆಹರೂ ವೈದ್ಯಕೀಯ ಕಾಲೇಜು ಸಭಾಂಗಣದಲ್ಲಿ ಮಂಗಳವಾರ ನಡೆದ ಕೆಎಲ್ಇ ವಿಶ್ವವಿದ್ಯಾಲಯದ 8ನೇ ಘಟಿಕೋತ್ಸವದಲ್ಲಿ ಅವರು ಮಾತನಾಡಿದರು.
‘ಇಬ್ಬರು ಮಕ್ಕಳಿದ್ದರೆ ಹಂಚಿಕೊಂಡು ಮತ್ತು ಕಿತ್ತುಕೊಂಡು ತಿನ್ನುವುದನ್ನು ಕಲಿಯುತ್ತವೆ’ ಎಂದು ಪ್ರತಿಪಾದಿಸಿದರು.
‘ಜೀವನದಲ್ಲಿ ಪ್ರೀತಿಯಷ್ಟೇ ಇರಬೇಕಾಗಿಲ್ಲ; ದ್ವೇಷವೂ ಬೇಕಾಗುತ್ತದೆ. ಮಹಿಳೆಯರು ವಿವಾಹ ವಿಚ್ಛೇದನ ಪಡೆದುಕೊಳ್ಳಬಾರದು. ಮದುವೆ ಕೇವಲ ಅನಿವಾರ್ಯವಲ್ಲ; ಅವಶ್ಯ. ತಂದೆ–ತಾಯಿ ಖುಷಿಪಡಿಸಲು ಮತ್ತು ಕುಟುಂಬ ಬೆಳೆಸುವುದಕ್ಕಾಗಿ ಮದುವೆ ಬೇಕು. ಅಪ್ಪ–ಅಮ್ಮನನ್ನು ವೃದ್ಧಾಶ್ರಮಕ್ಕೆ ಕಳುಹಿಸಬಾರದು. ಸಂಗಾತಿಯನ್ನು ಚೆನ್ನಾಗಿ ನೋಡಿಕೊಳ್ಳಬೇಕು’ ಎಂದರು.
‘75ನೇ ವಯಸ್ಸಿನಲ್ಲಿ ಈಜು ಕಲಿತ ಫೋಟೊ ಫೇಸ್ಬುಕ್ನಲ್ಲಿ ಇದೆ. ನನಗೆ ಮದುವೆಯಾಗಿ 59 ವರ್ಷವಾಗಿದೆ. ಆದರೆ, ನನ್ನ ವಯಸ್ಸು 42 ವರ್ಷವೆಂದೇ ಹೇಳಿಕೊಳ್ಳುತ್ತೇನೆ’ ಎಂದು ಹೇಳಿದರು.
‘ಯುವತಿಗೆ ಯಾರಾದರೂ ತೊಂದರೆ ಕೊಡುತ್ತಿದ್ದರೆ ಪ್ರಾಣವನ್ನೂ ಲೆಕ್ಕಕ್ಕೆ ತೆಗೆದುಕೊಳ್ಳದೇ ಕಾಪಾಡಬೇಕು’ ಎಂದು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.