ರಾಯಚೂರು: ನವ ಕರ್ನಾಟಕ ನಿರ್ಮಾಣಕ್ಕಾಗಿ ಪರಿವರ್ತನಾ ಯಾತ್ರೆ ಕೈಗೊಂಡಿರುವ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರು ರಾಯಚೂರು ನಗರದಲ್ಲಿ ಮಂಗಳವಾರ ಸಂಜೆ ಕನ್ನಡಕ ಕಳೆದುಕೊಂಡು ತೊಂದರೆ ಅನುಭವಿಸಿದರು.
ನಗರಕ್ಕೆ ಬರುತ್ತಿದ್ದಂತೆ ಬೆಂಬಲಿಗರು ಹಾಕುತ್ತಿದ್ದ ಹೂವಿನ ಹಾರದೊಂದಿಗೆ ಕನ್ನಡಕ ಕಳೆದುಹೋಗಿದೆ. ಸಮಾರಂಭ ಏರ್ಪಡಿಸಿದ್ದ ಆರ್ಟಿಒ ವೃತ್ತದ ಮೈದಾನದಲ್ಲಿ ಜನದಟ್ಟಣೆಯಿಂದ ಸಾಕಷ್ಟು ದೂಳು ಹರಡಿಕೊಂಡಿತ್ತು. ಈ ದೂಳಿನಿಂದಾಗಿ ಅವರ ಕಣ್ಣುಗಳು ಕೆಂಪಾಗಿದ್ದವು. ಬುಧವಾರ ಬೆಳಿಗ್ಗೆ ಕಣ್ಣುಗಳು ಊದಿಕೊಂಡಿದ್ದರಿಂದ ಎಂದಿನಂತೆ ಅವರಿಗೆ ಕಾರ್ಯಕರ್ತರನ್ನು ಭೇಟಿ ಮಾಡುವುದಕ್ಕೆ ಸಾಧ್ಯವಾಗಲಿಲ್ಲ. ಖಾಸಗಿ ಹೋಟೆಲ್ನಲ್ಲಿ ತಂಗಿದ್ದ ಅವರು ಮಧ್ಯಾಹ್ನ ಕನ್ನಡಕ ತಂದುಕೊಡುವವರೆಗೂ ವಿಶ್ರಾಂತಿ ಪಡೆದರು.
ಯಡಿಯೂರಪ್ಪ ಅವರ ಆಪ್ತ ಸಹಾಯಕ ಸಂತೋಷ್ ಅವರು ಕನ್ನಡಕ ತರುವುದಕ್ಕಾಗಿ ಮಂಗಳವಾರ ರಾತ್ರಿಯೇ ಬೆಂಗಳೂರಿಗೆ ತೆರಳಿದ್ದರು. ಬೆಂಗಳೂರಿನಿಂದ ಬುಧವಾರ ಹೆಲಿಕಾಪ್ಟರ್ ಮೂಲಕ ಕನ್ನಡಕವನ್ನು ತಂದು ತಲುಪಿಸಿದರು. ಬುಧವಾರ ಯಾವುದೇ ಸಮಾರಂಭ ಇರಲಿಲ್ಲ. ಡಿ.14 ರಂದು ಮಾನ್ವಿ ಮತ್ತು ಲಿಂಗಸುಗೂರುಗಳಲ್ಲಿ ಪರಿವರ್ತನಾ ಯಾತ್ರೆ ನಡೆಯಲಿದ್ದು, ಯಡಿಯೂರಪ್ಪ ಅವರು ಭಾಗವಹಿಸುವರು ಎಂದು ಪಕ್ಷದ ಮೂಲಗಳು ತಿಳಿಸಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.