ಗದಗ: ‘ನೈಸರ್ಗಿಕ ಸಂಪನ್ಮೂಲದ ಖನಿಯಾದ ಕಪ್ಪತ್ತಗುಡ್ಡವನ್ನು ಕರಗಿಸಲು ಕಾಂಗ್ರೆಸ್ ಪ್ರಯತ್ನಿಸಿತು. ಅದನ್ನು ಕೇಂದ್ರ ಸರ್ಕಾರ ತಡೆದು ಪರಿಸರ ಉಳಿಸಿತು’ ಎಂದು ಪ್ರಧಾನಿ ನರೇಂದ್ರ ಮೋದಿ ಬೆನ್ನುತಟ್ಟಿಕೊಂಡರು.
ಗದಗಿನ ತೋಂಟದಾರ್ಯ ಎಂಜಿನಿಯರಿಂಗ್ ಕಾಲೇಜು ಮೈದಾನದಲ್ಲಿ ನಡೆದ ಬಿಜೆಪಿಯ ಚುನಾವಣಾ ಪ್ರಚಾರ ಸಮಾವೇಶದಲ್ಲಿ ಅವರು ಮಾತನಾಡಿದರು.
ಭಾಷಣದ ಆರಂಭದಲ್ಲಿ ವೀರನಾರಾಯಣಪ್ಪ, ಗಾನಯೋಗಿ ಪಂಚಾಕ್ಷರಿ, ಪುಟ್ಟರಾಜ ಗವಾಯಿ, ಸಂತ ಶಿಶುನಾಳ ಶರೀಫರನ್ನು ನೆನದು ಜನಸಮೂಹದಿಂದ ಚಪ್ಪಾಳೆ ಗಿಟ್ಟಿಸಿದರು.
‘ಕಪ್ಪತ್ತಗುಡ್ಡದ ನೈಸರ್ಗಿಕ ಸಂಪನ್ಮೂಲ ಖಾಲಿಯಾದರೂ ಚಿಂತೆಯಿಲ್ಲ, ಜೇಬು ತುಂಬಿದರೆ ಸಾಕು ಎಂಬುದು ಕಾಂಗ್ರೆಸ್ನವರ ಮನೋಭಾವ. ಈ ಗುಡ್ಡದ ಪ್ರದೇಶವನ್ನು ಸಂರಕ್ಷಿತ ಅರಣ್ಯದಿಂದ ತೆಗೆಯಲು ಕಾಂಗ್ರೆಸ್ನವರು ಪ್ರಯತ್ನ ಮಾಡಿದರು. ನಮ್ಮ ಸರ್ಕಾರದ ನಿರ್ಧಾರದಿಂದ, ಆ ಪ್ರಯತ್ನ ವಿಫಲವಾಯಿತು’ ಎಂದರು.
‘ಏನಕೇನ ಪ್ರಕಾರೇಣ’ ಅಧಿಕಾರಕ್ಕೆ ಬರಬೇಕು ಎಂಬುದೇ ಕಾಂಗ್ರೆಸ್ ಮಂತ್ರವಾಗಿದೆ. ಹೇಗಾದರೂ ಮಾಡಿ ಅಧಿಕಾರಕ್ಕೆ ಬರಲು ಹೆಣಗಾಡುತ್ತಿದ್ದಾರೆ. ಗೋವಾ, ರಾಜಸ್ಥಾನ, ಉತ್ತರ ಪ್ರದೇಶ, ಹಿಮಾಚಲ, ಈಶಾನ್ಯ ಭಾರತದ ರಾಜ್ಯಗಳಲ್ಲಿ ನಮ್ಮೆದರು ಮುಗ್ಗರಿಸಿದ್ದಾರೆ. ಈಗ ಕರ್ನಾಟಕದಲ್ಲಿಯೂ ಸೋಲುವ ಸರದಿ ಬಂದಿರುವುದರಿಂದ ಎಲ್ಲರೂ ದಡಬಡಾಯಿಸುತ್ತಿದ್ದಾರೆ’ ಎಂದು ಕುಹಕವಾಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.