ಉಡುಪಿ: ಉಡುಪಿ– ಚಿಕ್ಕಮಗಳೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಅವರು ಚುನಾವಣಾ ಅಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಡಾ. ಮುದ್ದುಮೋಹನ್ ಅವರಿಗೆ ಬುಧವಾರ ನಾಮಪತ್ರ ಸಲ್ಲಿಸಿದ್ದಾರೆ.
ನಾಮಪತ್ರ ಸಲ್ಲಿಸುವ ಬಗ್ಗೆ ಶೋಭಾ ಅವರು ಮಾಧ್ಯಮದವರಿಗೆ ಮಾಹಿತಿ ನೀಡಿರಲಿಲ್ಲ. ಕೆಲ ಆಪ್ತರ ಜೊತೆ ತೆರಳಿದ ಅವರು ನಾಮಪತ್ರ ಸಲ್ಲಿಸಿದ್ದಾರೆ. ಇದೇ 26ರಂದು ಅವರು ಕಾರ್ಯಕರ್ತರ ಜೊತೆ ತೆರಳಿ ಇನ್ನೊಂದು ನಾಮಪತ್ರ ಸಲ್ಲಿಸಲಿದ್ದಾರೆ ಎನ್ನಲಾಗಿದೆ.
ಶೋಭಾ ಅವರು ₨5,10,89,452 ಮೌಲ್ಯದ ಚರಾಸ್ಥಿ ಮತ್ತು ₨ 2.10 ಕೋಟಿ ಮೌಲ್ಯದ ಸ್ಥಿರಾಸ್ಥಿ ಹೊಂದಿದ್ದಾರೆ. ₨3,81,19,792 ಸಾಲವನ್ನು ಅವರು ವಿವಿಧ ಸಂಸ್ಥೆ– ಮೂಲಗಳಿಂದ ಪಡೆದಿದ್ದಾರೆ. ಸ್ವ ಖರೀದಿ ಮಾಡಿರುವ ಚರಾಸ್ಥಿಯ ಖರೀದಿ ಸಮಯದ ಮೌಲ್ಯ ₨ 15,41,058 ಆಗಿದೆ. ಕಳೆದ ಆರ್ಥಿಕ ವರ್ಷದಲ್ಲಿ ಅವರು ₨ 17,62,570 ಆದಾಯ ತೋರಿಸಿದ್ದಾರೆ. ಅವರ ಕೈಯಲ್ಲಿ ₨1,76 ಲಕ್ಷ ನಗದು ಇದೆ. ಬೆಂಗಳೂರಿನ ಎಚ್ಎಸ್ಆರ್ ಲೇಔಟ್ನಲ್ಲಿ 50x80 ಅಳತೆಯ ನಿವೇಶನವನ್ನು ಹೊಂದಿದ್ದಾರೆ.
ಇದೊಂದು ನಿವೇಶನದ ಬೆಲೆಯೇ ಬರೋಬ್ಬರಿ ಎರಡು ಕೋಟಿ ರೂಪಾಯಿ ಮತ್ತು ಪುತ್ತೂರಿನಲ್ಲಿ ₨ ಹತ್ತು ಲಕ್ಷ ಮೌಲ್ಯದ 15 ಸೆಂಟ್ಸ್ ನಿವೇಶನ ಹೊಂದಿದ್ದಾರೆ. ಟೊಯೊಟಾ ಫಾರ್ಚುನರ್ ಮತ್ತು ಇನೊವಾ ವಾಹನ ಹೊಂದಿದ್ದಾರೆ. ಒಂದು ಕೆ.ಜಿ ಚಿನ್ನ ಮತ್ತು 650 ಗ್ರಾಂ ಚಿನ್ನಾಭರಣ ಹೊಂದಿದ್ದಾರೆ. 1400 ಗ್ರಾಂ ಬೆಳ್ಳಿ ಮತ್ತು 220 ಗ್ರಾಮ ಬೆಳ್ಳಿ ವಸ್ತು ಇವರ ಬಳಿಯಿದೆ. ಫಾರ್ಚುನರ್ ಮತ್ತು ಇನೊವಾ ವಾಹನದ ಸಾಲ ಕ್ರಮವಾಗಿ ₨ 5,66,165 ಮತ್ತು ₨ 8,81,347 ಇದೆ.
ಕಪಿಲಾ ಮಂಜುಶ್ರೀ ಅಪಾರಲ್ಸ್ ಪ್ರೈವೇಟ್ ಲಿಮಿಟೆಡ್ಗೆ ₨3,36,83,563 ಸಾಲ ನೀಡಿದ್ದಾರೆ. ಸಂಬಂಧಿಕರಿಗೆ ₨ 2 ಲಕ್ಷ, ಚೌಮನ್ ಪಾರ್ಟನರ್ಸ್ಗೆ ₨ 20 ಸಾವಿರ ಸಾಲ ನೀಡಿದ್ದಾರೆ. ಆದರ್ಶ ಡೆವಲಪರ್ಸ್ಗೆ ₨ 3,66,72,280 ಸಾಲ ನೀಡಿದ್ದಾರೆ.
47 ವರ್ಷ ವಯಸ್ಸಿನ ಶೋಭಾ ಅವರು ಬೆಂಗಳೂರಿನ ಕುಮಾರ ಪಾರ್ಕ್ ವೆಸ್ಟ್ನ ನಿವಾಸಿ. ಬೆಂಗಳೂರು ಕೇಂದ್ರ ಲೋಕಸಭಾ ಮತ್ತು ಶಿವಾಜಿನಗರ ವಿಧಾನಸಭಾ ಕ್ಷೇತ್ರದ ಮತದಾರರು. ಪುತ್ತೂರಿನ ಸೇಂಟ್ ಫಿಲೋಮಿನಾ ಕಾಲೇಜಿನಲ್ಲಿ ಬಿ.ಎ, ಮಂಗಳೂರಿನ ರೋಶನಿ ನಿಲಯದಲ್ಲಿ ಎಂಎಸ್ಡಬ್ಲ್ಯೂ ಪದವಿ ಪಡೆದಿದ್ದಾರೆ. ಮೈಸೂರಿನ ಮುಕ್ತ ವಿಶ್ವವಿದ್ಯಾಲಯದಲ್ಲಿ ಸಮಾಜ ಸೇವೆ ವಿಷಯದಲ್ಲಿ ಎಂ.ಎ. ಪದವಿ ಪಡೆದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.