ADVERTISEMENT

ಕಲಾ ಕೌಶಲ ಪ್ರದರ್ಶನಕ್ಕೆ ವೇದಿಕೆಯಾದ ಮಕ್ಕಳ ಸಮ್ಮೇಳನ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2017, 19:30 IST
Last Updated 14 ಅಕ್ಟೋಬರ್ 2017, 19:30 IST
ಜೇಡಿಮಣ್ಣಿನಲ್ಲಿ ಕಲಾಕೃತಿಗಳನ್ನು ನಿರ್ಮಿಸುತ್ತಿರುವ ವಿದ್ಯಾರ್ಥಿಗಳು
ಜೇಡಿಮಣ್ಣಿನಲ್ಲಿ ಕಲಾಕೃತಿಗಳನ್ನು ನಿರ್ಮಿಸುತ್ತಿರುವ ವಿದ್ಯಾರ್ಥಿಗಳು   

ತುಮಕೂರು: ನಗರದ ರಾಮಕೃಷ್ಣ–ವಿವೇಕಾನಂದ ಆಶ್ರಮದಲ್ಲಿ ಶನಿವಾರ ನಡೆದ ರಾಜ್ಯ ಮಟ್ಟದ ‘ಸ್ವಾಮಿ ವಿವೇಕಾನಂದ ಮಕ್ಕಳ ಸಮ್ಮೇಳನ’ ಬಾಲ ಪ್ರತಿಭೆಗಳ ಕಲಾ ಕೌಲಶ ಅನಾವರಣಕ್ಕೆ ವೇದಿಕೆ ಆಯಿತು.

ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಬಾಲ ಕಲಾವಿದೆ ಪಂಚಮಿ ಮಾರೂರು ಸಮ್ಮೇಳನಾಧ್ಯಕ್ಷೆಯಾಗಿದ್ದರು. ರಾಜ್ಯದ 135 ಪ್ರೌಢಶಾಲೆಗಳ 800 ವಿದ್ಯಾರ್ಥಿಗಳು ಸ್ಪರ್ಧೆಗಳಲ್ಲಿ ಪಾಲ್ಗೊಂಡಿದ್ದರು. ಚಿತ್ರಕಲೆ, ಜೇಡಿಮಣ್ಣಿನಲ್ಲಿ ಕಲಾಕೃತಿ ತಯಾರಿಕೆ, ರಸಪ್ರಶ್ನೆ ಸ್ಪರ್ಧೆಗಳು ನಡೆದವು. ಗಣಪತಿ, ಆನೆ, ಆಮೆ, ಪರಿಸರ ಸ್ನೇಹಿ ಮನೆ ಹೀಗೆ ನಾನಾ ನಮೂನೆಯ ಕಲಾಕೃತಿಗಳನ್ನು ರಚಿಸುವ ಮೂಲಕ ಮಕ್ಕಳು ಗಮನಸೆಳೆದರು.

ಬೆಳಿಗ್ಗೆ ನಡೆದ ಸಮ್ಮೇಳನಾಧ್ಯಕ್ಷೆಯ ಮೆರವಣಿಗೆಯಲ್ಲಿ ಮಕ್ಕಳು ವೀರಗಾಸೆ, ಡೊಳ್ಳು ಕುಣಿತ ಹೀಗೆ ವಿವಿಧ ಜನಪದ ಕಲೆಗಳನ್ನು ಪ್ರದರ್ಶಿಸಿದರು. ಹಿರಿಯ ಸಾಹಿತಿ ಎಚ್‌.ಎಸ್.ವೆಂಕಟೇಶ ಮೂರ್ತಿ ಸಮ್ಮೇಳನ ಉದ್ಘಾಟಿಸಿ, ಕುವೆಂಪು ಅವರ ‘ಬೊಮ್ಮನಹಳ್ಳಿ ಕಿಂದರಿಜೋಗಿ’ ಪದ್ಯವನ್ನು ಮಕ್ಕಳ ಮನಸ್ಸಿಗೆ ನಾಟುವಂತೆ ವಿಶ್ಲೇಷಿಸಿದರು. ವೇದಘೋಷ, ಪ್ರಾರ್ಥನೆ ಹಾಗೂ ಕಾರ್ಯಕ್ರಮದ ನಿರ್ವಹಣೆಯನ್ನು ಮಕ್ಕಳೇ ಅಚ್ಚುಕಟ್ಟಾಗಿ ನಿರ್ವಹಿಸಿದ್ದು ಸಭಿಕರ ಗಮನ ಸೆಳೆಯಿತು.

ADVERTISEMENT

‘ಇರುವುದೊಂದೇ ಭೂಮಿ; ಕಾಪಾಡಿಕೊಳ್ಳುವುದು ಬೇಡವೆ ಸ್ವಾಮಿ?’ ಎಂಬ ವಿಷಯದ ಕುರಿತು ನಡೆದ ಗೋಷ್ಠಿಯಲ್ಲಿ ಪರಿಸರವಾದಿ ಅ.ನ.ಯಲ್ಲಪ್ಪ ರೆಡ್ಡಿ ಉಪನ್ಯಾಸ ನೀಡಿದರು.

ಮಕ್ಕಳಿಂದ ಮಲ್ಲಕಂಬ ಮತ್ತು ದೊಣ್ಣೆವರಸೆ ಪ್ರದರ್ಶನ, ಭಕ್ತಿ ಸಂಗೀತ ಕಾರ್ಯಕ್ರಮಗಳು ಜರುಗಿದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.