ADVERTISEMENT

ಕಾಂಗ್ರೆಸ್ಸೇತರ ಪಕ್ಷಗಳ ಜೊತೆ ಬಿಜೆಪಿ ಹೊಂದಾಣಿಕೆ

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2011, 16:25 IST
Last Updated 22 ಫೆಬ್ರುವರಿ 2011, 16:25 IST

ಶಿವಮೊಗ್ಗ: ’ಆಡಳಿತ ನಡೆಸಲು ಕೊರತೆಯಾದರೆ ಕಾಂಗ್ರೆಸ್ಸೇತರ ಪಕ್ಷಗಳ ಜತೆ ಹೊಂದಾಣಿಕೆ  ತಾವು ಸದಾ ಸಿದ್ಧ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್. ಈಶ್ವರಪ್ಪ ತಿಳಿಸಿದರು.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಕ್ಷಗಳಲ್ಲಿ ವೈಚಾರಿಕವಾಗಿ ಭಿನ್ನತೆಗಳಿರಬಹುದು. ಆದರೆ, ಆಡಳಿತದ ಪ್ರಶ್ನೆ ಬಂದಾಗ ರಾಜಕೀಯವಾಗಿ ನಿಲುವು ಒಂದೇ ಆಗಿರುತ್ತವೆ. ಅಲ್ಲದೇ, ಹಿಂದೆಯೂ ಕಾಂಗ್ರೆಸ್ಸೇತರ ಪಕ್ಷಗಳ ಜತೆ ಬಿಜೆಪಿ ಹೊಂದಾಣಿಕೆ ಮಾಡಿಕೊಂಡ ಉದಾಹರಣೆಗಳಿವೆ. ಹಾಗಾಗಿ, ಆಡಳಿತ ನಡೆಸಲು ಕೊರತೆಯಾದರೆ ಹೊಂದಾಣಿಕೆಗೆ ತಯಾರಿದ್ದೇವೆ ಎಂದು ಸುಳಿವು ನೀಡಿದರು.

ಸದ್ಯಕ್ಕೆ ಈ ಪರಿಸ್ಥಿತಿ ಉದ್ಭವಿಸಿಲ್ಲ. ಆದರೆ, ಅಗತ್ಯಬಿದ್ದರೆ ರಾಜ್ಯದಲ್ಲಿ ಹೊಂದಾಣಿಕೆ ಮಾಡಿಕೊಳ್ಳಲಾಗುವುದು. ಸ್ಥಳೀಯ ಸಂಸ್ಥೆಗಳ ಹೊಂದಾಣಿಕೆ ವಿಚಾರವನ್ನು ಆಯಾ ಜಿಲ್ಲೆಯ ಪಕ್ಷದ ಮುಖಂಡರಿಗೆ ವಹಿಸಲಾಗಿದೆ ಎಂದ ಅವರು, ಕೋಮುವಾದಿ ಪಕ್ಷ ಎಂಬ ಪ್ರತಿಪಕ್ಷಗಳ ಟೀಕೆಗೆ, ಅವಕಾಶವಾದಿ ಹೇಳಿಕೆ, ರಾಜಕಾರಣ ಸಲ್ಲದು ಎಂದು ಪ್ರತಿಕ್ರಿಯಿಸಿದರು.

ಬೇಗ ತೀರ್ಪು ನೀಡಲಿ: ಮುಖ್ಯಮಂತ್ರಿಗಳ ಮೇಲಿನ ಹಗರಣಗಳ ಬಗ್ಗೆ ನಡೆಯುತ್ತಿರುವ ತನಿಖೆಯ ತೀರ್ಪು ವಿಳಂಬವಾಗುತ್ತಿರುವುದರಿಂದ ಪ್ರತಿಪಕ್ಷಗಳು ದುರುಪಯೋಗ ಪಡೆದುಕೊಳ್ಳುತ್ತಿವೆ. ಆದ್ದರಿಂದ ಈ ಸಂಬಂಧ ಆದಷ್ಟು ಬೇಗ ತೀರ್ಪು ನೀಡಬೇಕು ಎಂದು ಮನವಿ ಮಾಡಿದರು.

ನ್ಯಾ. ಸೋಮಶೇಖರ್ ಆಯೋಗದ ವರದಿ ಕುರಿತು ರಾಜ್ಯಪಾಲರ ಅಸಮಾಧಾನದ ಬಗ್ಗೆ ಪ್ರತಿಕ್ರಿಯಿಸಿದ ಕೆ.ಎಸ್. ಈಶ್ವರಪ್ಪ, ’ವರದಿ ಇನ್ನೂ ಟೇಬಲ್‌ಗೆ ಬಂದಿಲ್ಲ. ಆಗಲೇ ತಿರಸ್ಕರಿಸುವುದು ಎಷ್ಟು ಸಮಂಜಸ. ಇವರೆಂತಹ ಕಾನೂನು ತಜ್ಞರು?’ ಎಂದು ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.