ADVERTISEMENT

ಕಾಂಗ್ರೆಸ್ ವಿರುದ್ಧ ರಮೇಶ್‌ಕುಮಾರ್ ವಾಗ್ದಾಳಿ

​ಪ್ರಜಾವಾಣಿ ವಾರ್ತೆ
Published 6 ಜೂನ್ 2011, 19:30 IST
Last Updated 6 ಜೂನ್ 2011, 19:30 IST

ಮೈಸೂರು: ~ದೇವರಾಜು ಅರಸು ಅವರ ಫಲಾನುಭವಿಗಳಾದ ನಾವು ಕಾಂಗ್ರೆಸ್ ಒಳಗಿನ ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತದೇ ಹೋದರೆ ಮುಂದೆ ಟಿಕೆಟ್‌ಗಳನ್ನು ಹರಾಜು  ಹಾಕಲಾಗುತ್ತದೆ~ ಎಂದು ಮಾಜಿ ಸ್ಪೀಕರ್ ರಮೇಶ್‌ಕುಮಾರ್ ಸೋಮವಾರ ಕಾಂಗ್ರೆಸ್ ಹಾಗೂ ನಾಯಕರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ಮೈಸೂರು ವಿ.ವಿ.ಯ ರಾಣಿ ಬಹದ್ದೂರ್ ಸಭಾಂಗಣದಲ್ಲಿ ಆಯೋಜಿಸಿದ್ದ ~ಸಂಸದರ ಅಂಗಳದಲ್ಲಿ ಅರಸು ನೆನಪು~ ವಿಚಾರಗೋಷ್ಠಿಯಲ್ಲಿ ಮಾತನಾಡಿದ ಅವರು, ~ಈಗ ಪಾಲಿಕೆ ಚುನಾವಣೆಗೆ ನಿಲ್ಲಬೇಕು ಎಂದರೆ ನಿಮ್ಮ ಬಳಿ ಎಷ್ಟು ಆಸ್ತಿ, ಹಣ ಇದೆ ಎಂದು ಕೇಳುತ್ತಾರೆ. ಡಿ.ಬಿ.ಚಂದ್ರೇಗೌಡ, ನನಗೆ ಯಾರು ಟಿಕೆಟ್ ಕೊಡುತ್ತಾರೆ. ದೇವರಾಜ ಅರಸು ರಾಜ್ಯಕ್ಕೆ ನೀಡಿದ  ಹಲವು ಕ್ರಾಂತಿಕಾರಕ ಕಾರ್ಯಕ್ರಮಗಳ ಠೇವಣಿ (ಮತಗಳು) ಕರಗುತ್ತಾ ಬಂದಿದೆ. ಆದ್ದರಿಂದಲೇ ಕಾಂಗ್ರೆಸ್ 17 ಉಪ ಚುನಾವಣೆಯಲ್ಲಿ ಶೂನ್ಯ ಸಂಪಾದನೆ ಮಾಡಿದೆ~ ಎಂದು ಲೇವಡಿ ಮಾಡಿದ ಅವರು, ~ನಾಳೆ ನನಗೆ ಪಕ್ಷ ವಿರೋಧಿ ಎಂದು ನೋಟಿಸ್ ನೀಡಿದರೆ ಅದನ್ನು ಪಡೆಯಲು ಸಿದ್ಧ. ಈಗಾಗಲೇ ಕಾಂಗ್ರೆಸ್‌ನ ಬಹುತೇಕ ನಾಯಕರು ನನ್ನ ಸಂಪರ್ಕದಿಂದ ದೂರ ಉಳಿದಿದ್ದಾರೆ~ ಎಂದು ಹೇಳಿದರು.

~ದೇವರಾಜ ಅರಸು ಬುದ್ಧಿ ಮತ್ತು ಹೃದಯದ ಜೋಡಣೆಯಾಗಿದ್ದರು. ಅವರಿಗೆ ಹೃದಯ ಮುಂದೆ, ಬುದ್ಧಿ ಹಿಂದೆ ಇರುತಿತ್ತು. ಆದ್ದರಿಂದಲೇ ಅವರು ಬಡವರು, ಶೋಷಿತರು, ಹಿಂದುಳಿದವರ ಬಗ್ಗೆ ಅಪಾರ ಕಾಳಜಿ ಹೊಂದಿದ್ದರು. ಅವರು ಎಂದಿಗೂ ಇಂದಿನ ನಾಯಕರಂತೆ ವೈಯಕ್ತಿಕ ಅಜೆಂಡಾವನ್ನು ಇಟ್ಟುಕೊಂಡಿರಲಿಲ್ಲ.

ಅವರ ಫಲಾನುಭವಿಗಳಾದ ನಾವು ಯಾವುದೇ  ಹಂಗು ಇಲ್ಲದೆ, ರಾಜಕೀಯ ಲೆಕ್ಕಾಚಾರವನ್ನು ಇಟ್ಟುಕೊಳ್ಳದೆ ಈಗ ದೊಡ್ಡ ನಾಯಕರೆಂದು ಮೆರೆಯುತ್ತಿರುವವರ ವಿರುದ್ಧ ಧ್ವನಿ ಎತ್ತಬೇಕು. ನಿಮಗಿಂತ ನಾವು ದೊಡ್ಡ ಜನ ಇದ್ದೇವೆ ಎನ್ನುವುದನ್ನು ತೋರಿಸಿಕೊಡಬೇಕು~ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ಟೀಕಾಪ್ರಹಾರ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.