ADVERTISEMENT

ಕಾಂಗ್ರೆಸ್‌ ಸರ್ಕಾರದ ಉತ್ತಮ ಕೆಲಸಗಳು ಚುನಾವಣೆಯಲ್ಲಿ ಫಲ ನೀಡಲಿವೆ: ಉಮ್ಮನ್‌ ಚಾಂಡಿ

​ಪ್ರಜಾವಾಣಿ ವಾರ್ತೆ
Published 5 ಮೇ 2018, 17:42 IST
Last Updated 5 ಮೇ 2018, 17:42 IST
ಉಮ್ಮನ್‌ ಚಾಂಡಿ (ಸಂಗ್ರಹ ಚಿತ್ರ).
ಉಮ್ಮನ್‌ ಚಾಂಡಿ (ಸಂಗ್ರಹ ಚಿತ್ರ).   

ಬೆಂಗಳೂರು: ‘ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರದ ಉತ್ತಮ ಕೆಲಸಗಳು ಈ ಚುನಾವಣೆಯಲ್ಲಿ ಫಲ ನೀಡಲಿವೆ’ ಎಂದು ಕೇರಳದ ಮಾಜಿ ಮುಖ್ಯಮಂತ್ರಿ ಉಮ್ಮನ್‌ ಚಾಂಡಿ ವಿಶ್ವಾಸ ವ್ಯಕ್ತಪಡಿಸಿದರು.

‘ರೈತರಿಗೆ ₹3 ಲಕ್ಷವರೆಗೆ ಬಡ್ಡಿರಹಿತ‌ ಸಾಲ, ಹನಿ ನೀರಾವರಿ ಯೋಜನೆ, ವಿಶ್ವದ ಅತಿ ದೊಡ್ಡ ಸೋಲಾರ್ ಪಾರ್ಕ್ ನಿರ್ಮಾಣ ಹೀಗೆ ರಾಜ್ಯ ಸರ್ಕಾರದ ಹಲವು ಜನಪರ ಮತ್ತು ಅಭಿವೃದ್ಧಿ ಕೆಲಸಗಳು ಕಾಂಗ್ರೆಸ್‌ ಪಕ್ಷಕ್ಕೆ ಮತ್ತೆ ಅಧಿಕಾರ ತಂದುಕೊಡಲಿವೆ’ ಎಂದು ಮಾಧ್ಯಮಗೋಷ್ಠಿಯಲ್ಲಿ ಶನಿವಾರ ಹೇಳಿದರು.

‘ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ದರ ಕಡಿಮೆಯಾಗಿದ್ದರೂ, ಕೇಂದ್ರದ ಎನ್‌ಡಿಎ ಸರ್ಕಾರ ಪೆಟ್ರೋಲ್‌, ಡೀಸೆಲ್‌ ಬೆಲೆ ಇಳಿಸದೆ ಜನರನ್ನು ವಂಚಿಸುತ್ತಿದೆ. ಜನರಿಗೆ ಕೊಟ್ಟ ಭರವಸೆಯನ್ನು ಮೋದಿ ಈಡೇರಿಸಿಲ್ಲ’ ಎಂದೂ ಅವರು ಆರೋಪಿಸಿದರು.

ADVERTISEMENT

ಮೋದಿಯಿಂದ ದೇಶದ ಆತ್ಮಕ್ಕೆ ಘಾಸಿ: ‘ಕಾಂಗ್ರೆಸ್ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುವ ಮೂಲಕ ಅಭಿವೃದ್ಧಿ ರಾಜಕೀಯಕ್ಕೆ ಕರ್ನಾಟಕದ ಜನರು ಮಣೆ ಹಾಕಲಿದ್ದಾರೆ’ ಎಂದು ಕಾಂಗ್ರೆಸ್‌ ಸಂಸದ ಶಶಿ ತರೂರ್‌ ಹೇಳಿದರು.

‘ಮೋದಿ ನೇತೃತ್ವದ ಕೇಂದ್ರ ಸರ್ಕಾರ, ದೇಶದ ಆತ್ಮಕ್ಕೆ ಘಾಸಿ ಮಾಡಿದೆ. ಅದು ಗುಣವಾಗಲು ಕಷ್ಟವಿದೆ. ಅಸಹಿಷ್ಣುತೆ, ವಿಭಜನೆ ರಾಜಕಾರಣವನ್ನು ಈ ದೇಶದ ಜನರು ಒಪ್ಪುವುದಿಲ್ಲ’ ಎಂದು ಅವರು ಅಭಿಪ್ರಾಯಪಟ್ಟರು.

‘ಮೋದಿ ಇತಿಹಾಸವನ್ನು ಕೆದಕಿ ರಾಜಕೀಯ ಮಾಡುತ್ತಿದ್ದಾರೆ. ಇತಿಹಾಸ ಕ್ಲಿಷ್ಟಕರ ವಿಚಾರ. ಅದನ್ನು ಸಮಗ್ರವಾಗಿ ಅಧ್ಯಯನ ಮಾಡಬೇಕು. ಹಲವು ರಾಜರಂತೆ ಟಿಪ್ಪುಸುಲ್ತಾನ್‌ ಕೂಡ ಉತ್ತಮ ಕಾರ್ಯಗಳನ್ನು ಮಾಡಿದ್ದಾರೆ. ಅದಕ್ಕಾಗಿ ಅವರನ್ನು ಗುರುತಿಸಬೇಕಾಗಿದೆ. ಬಿಜೆಪಿ ಗತಕಾಲದಲ್ಲಿ ಇದ್ದರೆ, ಕಾಂಗ್ರೆಸ್ ಭವಿಷ್ಯದ ಬಗ್ಗೆ ಚಿಂತಿಸುತ್ತದೆ’ ಎಂದೂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.