ADVERTISEMENT

ಕಾಫಿ ತೋಟಕ್ಕೆ ಹಬ್ಬಿದ ಕಾಳ್ಗಿಚ್ಚು

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2014, 19:30 IST
Last Updated 20 ಮಾರ್ಚ್ 2014, 19:30 IST

ಗೋಣಿಕೊಪ್ಪಲು: ಐದು ದಿನಗಳಿಂದ ಉರಿಯುತ್ತಿದ್ದ ಮಾವ್ಕಲ್ ಹಾಗೂ ದೇವ­ಮಚ್ಚಿ ಅರಣ್ಯದ ಬೆಂಕಿ ತುಸು ತಹ­ಬಂದಿಗೆ ಬಂದಿದೆ. ಆದರೆ, ದೇವಮಚ್ಚಿ ಅರಣ್ಯದ ಬೆಂಕಿ ಭದ್ರಗೋಳದ ಸುಮನ್ ಅವರ ಕಾಫಿತೋಟಕ್ಕೆ ಬುಧವಾರ ಹರಡಿ ಸುಮಾರು 2 ಎಕರೆಯಷ್ಟು ಕಾಫಿ ತೋಟ ನಾಶವಾಗಿದೆ.

ತೋಟದಲ್ಲಿದ್ದ ಕಾಫಿ ಗಿಡ, ಮೆಣಸು ಬಳ್ಳಿಗಳು ಬೆಂಕಿಗೆ ಆಹುತಿಯಾಗಿ ಸಾವಿ­ರಾರು ರೂಪಾಯಿ ನಷ್ಟವಾಗಿದೆ. ತೋಟಕ್ಕೆ ಹರಡಿದ್ದ ಬೆಂಕಿಯನ್ನು ಅಗ್ನಿ­ಶಾಮಕ ದಳ ಸಿಬ್ಬಂದಿ ಹಾಗೂ ಸಾರ್ವ­ಜನಿಕರು ಸೇರಿ ಗುರುವಾರ ಸಂಪೂರ್ಣ­ವಾಗಿ ನಂದಿಸಿದರು.
ಅತ್ತ ಅರಣ್ಯ ಸಿಬ್ಬಂದಿ ಹಾಗೂ ಸಾರ್ವ­ಜನಿಕರು ಸೇರಿ ಅರಣ್ಯದಲ್ಲಿನ ಬೆಂಕಿಯನ್ನು ತಹಬಂದಿಗೆ ತರುವಲ್ಲಿ ಯಶಸ್ವಿಯಾಗಿದ್ದಾರೆ.

ಒಣಗಿದ ಮರಗಳಿಗೆ ಹತ್ತಿರುವ ಬೆಂಕಿ ಈಗಲೂ ಉರಿ­ಯುತ್ತಿದೆ. ಆದರೆ, ಬೇರೆ ಕಡೆಗೆ ಹರಡದಂತೆ ಅರಣ್ಯ ಇಲಾಖೆ ಸಿಬ್ಬಂದಿ ಎಚ್ಚರ ವಹಿಸಿದೆ. ಅರಣ್ಯಾಧಿಕಾರಿಗಳು ಮತ್ತು ಸಿಬ್ಬಂದಿ ಗುರುವಾರ ಅರಣ್ಯದ ಅಂಚಿನಲ್ಲಿ ಪಹರೆ ನಡೆಸುತ್ತಿದ್ದು, ಅರಣ್ಯಕ್ಕೆ ಬೆಂಕಿ ಕೊಡುವ ಕಿಡಿಗೇಡಿಗಳ ಮೇಲೆ ನಿಗಾ ವಹಿಸಿ­ದ್ದಾರೆ. 

ಡಿಸಿಎಎಫ್ ಮಾಲ­ತಿ­ಪ್ರಿಯ ಅವರ ಸೂಚನೆಯಂತೆ ತಿತಿಮತಿ ಎಸಿಎಫ್ ಕಾರ್ಯಪ್ಪ, ಆರ್ಎಫ್ಒ ಗೋಪಾಲ್ ಹಾಗೂ ಸಿಬ್ಬಂದಿ ಪಹರೆ ಕಾಯುತ್ತಿದ್ದಾರೆ. ಇತ್ತಕುಟ್ಟ ಸಮೀಪದ ಕೇರಳ ಗಡಿಭಾಗದ ಅರಣ್ಯಕ್ಕೂ ಕಾಳ್ಗಿಚ್ಚು ಹರಡಿ ಅಪಾರ ಪ್ರಮಾಣದ ಅರಣ್ಯ ನಾಶ­ವಾಗಿದೆ. ಕೊಡಗು ಮತ್ತು ಕೇರಳ ಗಡಿಭಾಗದ ಅರಣ್ಯದ ತೋಲ್ಪಟ್ಟಿ ಎಂಬಲ್ಲಿ  ಕಾಳ್ಗಿಚ್ಚು ಈಗಲೂ ಶಮನ­ವಾಗಿಲ್ಲ ಎಂದು ಪ್ರತ್ಯಕ್ಷ­ದರ್ಶಿ­ಗಳು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.