ADVERTISEMENT

ಕಾರ್ನಾಡ್ ವಿರುದ್ಧ ಕೃತಿಚೌರ್ಯ ಆರೋಪ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2014, 19:30 IST
Last Updated 22 ಮಾರ್ಚ್ 2014, 19:30 IST

ಬೆಂಗಳೂರು: ‘ಸಾಹಿತಿ ಡಾ.ಗಿರೀಶ್‌ ಕಾರ್ನಾಡ್‌ ಅವರು ಅನುಮತಿ ಇಲ್ಲದೆ ನನ್ನ ರಚನೆಯ ಗೀತೆಯನ್ನು ಅವರ ‘ನಾಗಮಂಡಲ’ ನಾಟಕ ಕೃತಿಯಲ್ಲಿ  ಬಳಸಿಕೊಂಡಿದ್ದಾರೆ’ ಎಂದು ಲೇಖಕ ಗೋಪಾಲ್‌ ವಾಜಪೇಯಿ ದೂರಿದರು.

ನಗರದಲ್ಲಿ ಶನಿವಾರ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈ ಕುರಿತು ದೂರು ದಾಖಲಿಸಲಾಗಿದ್ದು,  ಬೆಂಗಳೂರಿನ 9ನೇ ಎಸಿಎಂಎಂ ನ್ಯಾಯಾ­ಲಯವು ಮಾರ್ಚ್‌ 6ರಂದು  ಸಾಹಿತಿ ಕಾರ್ನಾಡ್‌, ಕೃತಿ ಪ್ರಕಟಿಸಿರುವ ಮನೋಹರ್‌ ಗ್ರಂಥಮಾಲಾ ಪ್ರಕಾ­ಶ­ನದ ರಮಾಕಾಂತ ಜಿ.ಜೋಶಿ, ಪ್ರಕಾಶನದ ವ್ಯವಸ್ಥಾಪಕ ಸಮೀರ್ ಆರ್.ಜೋಶಿ ಅವರಿಗೆ ಸಮನ್ಸ್‌ ಜಾರಿ ಮಾಡಿದೆ ಎಂದು ತಿಳಿಸಿದರು.

‘ಗಿರೀಶ್‌ ಕಾರ್ನಾಡ್‌ ಅವರ ನಾಗ­ಮಂಡಲ ನಾಟಕವನ್ನು ಶಂಕರ್‌­ನಾಗ್‌ ರಂಗಕ್ಕೆ ತರುವಾಗ  ನಾಟಕಕ್ಕಾಗಿ ನನ್ನಿಂದ ಹತ್ತು ಗೀತೆಗಳನ್ನು ಬರೆಸಿದ್ದರು. ಗೀತೆ­ಗಳು ಜನಪ್ರಿಯಾದ ಮೇಲೆ ಕಾರ್ನಾಡ್‌ ಅವರು ನಾಟಕದಲ್ಲಿ ಹೆಚ್ಚು ಜನಪ್ರಿಯವಾಗಿದ್ದ ‘ಮಾಯಾ­ದೊ­ ಮನದ ಭಾರ’ ಗೀತೆ­ಯನ್ನು ಕೃತಿಯ ಮುಂದಿನ ಎಲ್ಲ ಆವೃತ್ತಿಗಳಲ್ಲಿ ಕೇವಲ ₨1,500ಕ್ಕೆ ಬಳಸಿಕೊಳ್ಳಲು ಅನುಮತಿ ಪಡೆದಿದ್ದರು’ ಎಂದು ತಿಳಿಸಿದರು.

‘2005ರಲ್ಲಿ ಬಂದ ಕೃತಿಯ 2ನೇ ಆವೃತ್ತಿ­ಯಲ್ಲಿ ಗೀತೆಯನ್ನು ಬಳಸಿ­ಕೊಂಡು ನನ್ನ ಹೆಸರು ಹಾಕಿರಲಿಲ್ಲ. 2008ರಲ್ಲಿ ತಿಳಿದು ಗಿರೀಶ್‌ ಕಾರ್ನಾಡ್‌ ಅವರನ್ನು ಕೇಳಿ­ದಾಗ ಕಣ್ತಪ್ಪಿ­ನಿಂದ ಆಗಿದೆ ಎಂದು ಹೇಳಿದರು. ಆಗ ಗೀತೆಯನ್ನು ಬಳಸಿ­ಕೊಳ್ಳಲು ನೀಡಿದ್ದ ಅನುಮತಿ­ಯನ್ನು ಹಿಂಪಡೆದು ಅವರು ನೀಡಿದ್ದ ₨1,500 ಚೆಕ್‌ನ್ನು ಹಿಂತಿ­ರುಗಿಸಿದ್ದೇನೆ. ಆದರೂ 2009ರಲ್ಲಿ ಬಂದ ಸಮಗ್ರ ನಾಟಕ ಸಂಪುಟ, 2012ರಲ್ಲಿ ಪ್ರಕಟಗೊಂಡ ಕೃತಿಯ ಮರು ಆವೃತ್ತಿಗಳಲ್ಲಿ ಗೀತೆ­ಗಳನ್ನು ಬಳಸಿಕೊಳ್ಳಲಾಗಿದೆ ಎಂದು ದೂರಿದರು. ಅನುಮತಿ ಹಿಂಪಡೆದ ನಂತರವೂ ಗೀತೆಗಳನ್ನು ಬಳಸಿಕೊಂಡಿ­ರುವುದರಿಂದ ₨10 ಲಕ್ಷ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.