ಬೆಂಗಳೂರು: ಜೂನ್ನಿಂದ ಸೆಪ್ಟೆಂಬರ್ವರೆಗೆ ತಮಿಳುನಾಡಿಗೆ 134 ಟಿಎಂಸಿ ಅಡಿ ನೀರು ಹರಿಸುವಂತೆ ಕಾವೇರಿ ನ್ಯಾಯಮಂಡಳಿಯು 2007ರಲ್ಲಿ ನೀಡಿರುವ ತೀರ್ಪು ಪುನರ್ಪರಿಶೀಲನೆಗೆ ಕಾವೇರಿ ಮೇಲ್ವಿಚಾರಣಾ ಸಮಿತಿ ಸಭೆಯಲ್ಲಿ ಒತ್ತಡ ಹೇರಲು ವಿಧಾನಮಂಡಲದ ಉಭಯ ಸದನಗಳ ನಾಯಕರ ಸಭೆ ತೀರ್ಮಾನಿಸಿದೆ.
ಗುರುವಾರ ನಡೆದ ಸಭೆಯ ಅಧ್ಯಕ್ಷತೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ವಹಿಸಿದ್ದರು. ಇದೇ 12ರಂದು ನವದೆಹಲಿಯಲ್ಲಿ ನಡೆಯುವ ಕಾವೇರಿ ಮೇಲ್ವಿಚಾರಣಾ ಸಮಿತಿ ಸಭೆಯಲ್ಲಿ ರಾಜ್ಯದ ನಿಲುವನ್ನು ಮುಖ್ಯಕಾರ್ಯದರ್ಶಿ ಎಸ್.ವಿ.ರಂಗನಾಥ್ ಪ್ರತಿಪಾದಿಸಲಿದ್ದಾರೆ.
ಸಭೆಯಲ್ಲಿ ಕೈಗೊಂಡ ನಿರ್ಣಯಗಳ ಕುರಿತು ವಿಧಾನಸಭೆಯಲ್ಲಿ ಹೇಳಿಕೆ ನೀಡಿದ ಸಿದ್ದರಾಮಯ್ಯ, `ಜೂನ್ - ಸೆಪ್ಟೆಂಬರ್ ಅವಧಿಯಲ್ಲಿ ನಮ್ಮ ರೈತರಿಗೆ ಅಗತ್ಯವಾಗಿ ನೀರು ಬೇಕಾಗಿದೆ. ಹೀಗಾಗಿ ಕಾವೇರಿ ನ್ಯಾಯಮಂಡಳಿಯ ಐತೀರ್ಪಿಗೆ ಅನುಗುಣವಾಗಿ ತಮಿಳುನಾಡಿಗೆ ನೀರು ಹರಿಸಲು ಸಾಧ್ಯವಿಲ್ಲ. ಐತೀರ್ಪಿನಲ್ಲಿ ಪ್ರಸ್ತಾಪಿಸಿರುವಷ್ಟು ನೀರಿನ ಸಂಗ್ರಹ ಆಗದೆ ಇರುವುದರಿಂದ ನೀರು ಬಿಡುವುದು ಅಸಾಧ್ಯ' ಎಂದರು.
`4ತಿಂಗಳ ಅವಧಿಯಲ್ಲಿ (ಜೂನ್ನಿಂದ ಸೆಪ್ಟೆಂಬರ್) 134 ಟಿಎಂಸಿ ಅಡಿ ನೀರು ಹರಿಸಬೇಕು ಎಂದು ನಿಗದಿಯಾಗಿದೆ. ಇದನ್ನು 97.82 ಟಿಎಂಸಿ ಅಡಿಗೆ ಇಳಿಸುವಂತೆ ಸಮಿತಿ ಸಭೆಯಲ್ಲಿ ಒತ್ತಾಯಿಸಲು ನಿರ್ಣಯ ತೆಗೆದುಕೊಳ್ಳಲಾಗಿದೆ. ಮೊದಲಿನಿಂದಲೂ ಈ ಅಂಶವನ್ನು ಹೇಳುತ್ತಲೇ ಬಂದಿದ್ದೇವೆ' ಎಂದರು.
ಪ್ರತಿ ತಿಂಗಳು ಹರಿಸಬೇಕಾದ ನೀರಿನ ಪ್ರಮಾಣವನ್ನು ಐದು ವರ್ಷಗಳ ನಂತರ ಪುನರ್ಪರಿಶೀಲಿಸಬಹುದು ಎಂದು 2007ರಲ್ಲಿ ನೀಡಲಾದ ಐತೀರ್ಪಿನಲ್ಲಿ ತಿಳಿಸಲಾಗಿದೆ. ಈಗಾಗಲೇ 5ವರ್ಷದ ಅವಧಿ ಮುಗಿದಿದೆ. ಆದ್ದರಿಂದ ತಮಿಳುನಾಡಿಗೆ ಹರಿಸಬೇಕಾಗಿರುವ ನೀರಿನ ಪ್ರಮಾಣವನ್ನು ಪುನರ್ಪರಿಶೀಲಿಸುವಂತೆ ಕೋರಲು ನಿರ್ಧರಿಸಲಾಗಿದೆ ಎಂದರು.
2008-09ರಿಂದ 2012-13ರವರೆಗಿನ ಐದು ವರ್ಷಗಳ ಅವಧಿಯಲ್ಲಿ 134 ಟಿಎಂಸಿ ಅಡಿ ನೀರು ಸಂಗ್ರಹವಾಗಿಲ್ಲ ಎಂದು ಸಾಬೀತುಪಡಿಸುವ ಮಳೆಯ ಅಧಿಕೃತ ದಾಖಲೆಗಳನ್ನು ನೀಡಿ ಬದಲಾವಣೆ ಮಾಡುವಂತೆ ಸಭೆಯಲ್ಲಿ ಪ್ರತಿಪಾದಿಸಲಾಗುವುದು ಎಂದು ತಿಳಿಸಿದರು.
ಸಭೆಯಲ್ಲಿ: ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ, ವಸತಿ ಸಚಿವ ಅಂಬರೀಷ್, ಕಾನೂನು ಸಚಿವ ಟಿ.ಬಿ.ಜಯಚಂದ್ರ, ವಿಧಾನಸಭೆಯ ವಿರೋಧ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ, ಪರಿಷತ್ತಿನ ವಿರೋಧ ಪಕ್ಷದ ನಾಯಕ ಡಿ.ವಿ.ಸದಾನಂದಗೌಡ, ಕೆಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಬಿಎಸ್ಆರ್ ಕಾಂಗ್ರೆಸ್ ಅಧ್ಯಕ್ಷ ಬಿ.ಶ್ರೀರಾಮುಲು, ರಾಜ್ಯದ ಮಾಜಿ ನೀರಾವರಿ ಸಚಿವರು, ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.
ಕಾವೇರಿ ಜಲಾನಯನ ಪ್ರದೇಶದ ರೈತರ ಹಿತವನ್ನು ಗಮನದಲ್ಲಿಟ್ಟುಕೊಂಡು ನೀರಾವರಿ ಮತ್ತು ಕಾನೂನು ತಜ್ಞರ ಜೊತೆ ಸಮಾಲೋಚನೆ ನಡೆಸಿ ಇದೇ 12ರಂದು ನಡೆಯಲಿರುವ ಕಾವೇರಿ ಮೇಲ್ವಿಚಾರಣಾ ಸಮಿತಿಯ ಕಾರ್ಯಸೂಚಿಯಲ್ಲಿ ಪ್ರಮುಖವಾಗಿ ಈ ಕೆಳಕಂಡ ಏಳು ಅಂಶಗಳಿಗೆ ಸೂಕ್ತ ಪ್ರತಿಕ್ರಿಯೆ ನೀಡಲು ತೀರ್ಮಾನಿಸಲಾಗಿದೆ.
*ಕಾವೇರಿ ಮೇಲ್ವಿಚಾರಣಾ ಸಮಿತಿಯ ಕಾರ್ಯನಿರ್ವಹಣಾ ನಿಯಮಾವಳಿಗಳನ್ನು ರೂಪಿಸುವುದು.
*ಕಾವೇರಿ ನ್ಯಾಯಮಂಡಳಿಯ ಐತೀರ್ಪಿನ ಅನುಷ್ಠಾನ ಪರಿಶೀಲಿಸಲು ಅನುಕೂಲವಾಗುವಂತೆ ಕಾವೇರಿ ಜಲಾನಯನ ಪ್ರದೇಶದಲ್ಲಿ ಜಲಮಾಪನ ಕೇಂದ್ರಗಳನ್ನು ಗುರುತಿಸುವುದು.
*ಜಲಾನಯನ ಪ್ರದೇಶದಲ್ಲಿರುವ ಜಲಾಶಯಗಳ ನೀರು ಸಂಗ್ರಹದ ವರದಿಗೆ ಸೂಕ್ತ ನಮೂನೆಯನ್ನು ರೂಪಿಸುವುದು.
*ಮಳೆ ಪ್ರಮಾಣಕ್ಕೆ ಅನುಗುಣವಾಗಿ ಸಾಮಾನ್ಯ ವರ್ಷ ಮತ್ತು ಸಂಕಷ್ಟದ ವರ್ಷಗಳನ್ನು ಗುರುತಿಸುವುದು
*ಕಾವೇರಿ ಐತೀರ್ಪಿನ ಅನುಷ್ಠಾನದ ಉದ್ದೇಶಕ್ಕಾಗಿ ರಚನೆಗೊಂಡಿರುವ ಮೇಲ್ವಿಚಾರಣಾ ಸಮಿತಿಗೆ ಮಾರ್ಗಸೂಚಿಗಳನ್ನು ರಚಿಸುವುದು.
*ಒಟ್ಟು ನೀರಿನ ಬೇಡಿಕೆಯಲ್ಲಿ ಕುಡಿಯಲು ಬೇಕಾದ ನೀರಿನ ಪ್ರಮಾಣವನ್ನು ಸೇರಿಸುವುದು. ಆ ನೀರನ್ನು ರಾಜ್ಯಗಳು ತಮ್ಮ ಪಾಲಿನ ನೀರಿನಲ್ಲಿಯೇ ಪೂರೈಸುವಂತೆ ಮಾಡುವುದು.
*ಕಾವೇರಿ ಜಲಾನಯನ ಪ್ರದೇಶದ ಎಲ್ಲಾ ಜಲಾಶಯಗಳಲ್ಲಿ ಸ್ವಯಂ ಚಾಲಿತ ಜಲಮಾಪನ ಕೇಂದ್ರಗಳನ್ನು ಸ್ಥಾಪಿಸುವುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.