ADVERTISEMENT

ಕಾವೇರಿ ಪ್ರತಿಭಟನೆ : ಮಂಡ್ಯದಲ್ಲಿ 16 ಮಂದಿ ವಶಕ್ಕೆ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2012, 11:27 IST
Last Updated 7 ಡಿಸೆಂಬರ್ 2012, 11:27 IST
ಕಾವೇರಿ ಪ್ರತಿಭಟನೆ : ಮಂಡ್ಯದಲ್ಲಿ 16 ಮಂದಿ ವಶಕ್ಕೆ
ಕಾವೇರಿ ಪ್ರತಿಭಟನೆ : ಮಂಡ್ಯದಲ್ಲಿ 16 ಮಂದಿ ವಶಕ್ಕೆ   

ಮಂಡ್ಯ (ಪಿಟಿಐ): ಸುಪ್ರೀಂಕೋರ್ಟ್ ಆದೇಶದಂತೆ ರಾಜ್ಯ ಸರ್ಕಾರ ತಮಿಳುನಾಡಿಗೆ ತಾತ್ಕಾಲಿಕವಾಗಿ ನಿತ್ಯ 10 ಸಾವಿರ ಕ್ಯೂಸೆಕ್ ಕಾವೇರಿ ನೀರು ಬಿಟ್ಟಿರುವುದನ್ನು ವಿರೋಧಿಸಿ ಮಂಡ್ಯದಲ್ಲಿ ಪ್ರತಿಭಟನೆ ತೀವ್ರಗೊಂಡಿದ್ದು, ಜಿಲ್ಲೆಯ ಹಲವೆಡೆಗಳಲ್ಲಿ ಕನಿಷ್ಟ 16 ಮಂದಿ ಪ್ರತಿಭಟನಾಕಾರರನ್ನು ವಶಕ್ಕೆ ಪಡೆದಿರುವುದಾಗಿ ಪೊಲೀಸರು ಶುಕ್ರವಾರ ಇಲ್ಲಿ ತಿಳಿಸಿದರು.

ತಮಿಳುನಾಡಿಗೆ ಕಾವೇರಿ ನೀರು ಬಿಡುತ್ತಿರುವುದನ್ನ ವಿರೋಧಿಸಿ ಕಾವೇರಿ ಹಿತರಕ್ಷಣಾ ವೇದಿಕೆ ನಾಳೆ ಮಂಡ್ಯ ಜಿಲ್ಲಾ ಬಂದ್ ಗೆ ಕರೆ ನೀಡಿದೆ.  ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಪ್ರತಿಭಟನೆಯನ್ನು ಮುನ್ನಡೆಸುವಂತೆ ಸಮಿತಿ ಅಧ್ಯಕ್ಷ ಜಿ. ಮಾದೇಗೌಡ ಮನವಿ ಮಾಡಿದರು.

ತಮಿಳುನಾಡಿಗೆ ಕಾವೇರಿ ನೀರು ಹರಿಬಿಡುತ್ತಿರುವುದನ್ನು ವಿರೋಧಿಸಿ ಚಾಮರಾಜನಗರದಲ್ಲೂ ಪ್ರತಿಭಟನೆ ನಡೆಯಿತು.

ಕಾವೇರಿ ನೀರು ಹರಿಸುತ್ತಿರುವುದನ್ನು ವಿರೋಧಿಸಿ ಕನ್ನಡ ಪರ ಸಂಘಟನೆಗಳು ಮೈಸೂರಿನಲ್ಲಿ ಪ್ರತಿಭಟನೆ ನಡೆಸುತ್ತಿದ್ದು, ಕರ್ನಾಟಕಕ್ಕೆ ಪ್ರಯಾಣ ಬೆಳೆಸಿದ್ದ ತಮಿಳುನಾಡಿದ ವಾಹನಗಳು ಮೈಸೂರು ಸಮೀಪದ ಸತ್ಯಮಂಗಲಂ ನಲ್ಲಿ ಸಂಚಾರ ಸ್ಥಗಿತಗೊಳಿಸಿವೆ. 800ಕ್ಕೂ ಹೆಚ್ಚು ಲಾರಿ, 300 ವ್ಯಾನ್ ಮತ್ತು 200 ಇತರೆ ವಾಹನಗಳು ಸತ್ಯಮಂಗಲಂ, ಬನ್ನೇರಿ ಚೆಕ್ ಪೋಸ್ಟ್ ಮತ್ತು ತಿಂಬಂ ಬಳಿ ನಿಲ್ಲಿಸಲಾಗಿದೆ ಎಂದು ಪೊಲೀಸರು ತಿಳಿಸಿದರು.

ಇದೇ ವೇಳೆ ತಮಿಳುನಾಡು ಮತ್ತು ಕರ್ನಾಟಕ ಗಡಿ ಪ್ರದೇಶಗಳಲ್ಲಿ ತೀವ್ರ ನಿಗಾ ವಹಿಸಿರುವುದಾಗಿ ಪೊಲೀಸರು ತಿಳಿಸಿದರು.

ADVERTISEMENT


ಯಡಿಯೂರಪ್ಪ ಆಗ್ರಹ: ಇನ್ನೊಂದೆಡೆ, ಬೆಳಗಾವಿಯಲ್ಲಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರು, ಕಾವೇರಿ ನೀರು ವಿವಾದ ಬಗೆಹರಿಸಲು ಬೆಳಗಾವಿಯಲ್ಲಿ ನಡೆಯುತ್ತಿರುವ ಅಧಿವೇಶನವನ್ನು ಮೊಟಕುಗೊಳಿಸಿ ಸಚಿವರುಗಳ ಮತ್ತು ಶಾಸಕರ ನಿಯೋಗದೊಂದಿಗೆ ಪ್ರಧಾನಿ ಅವರನ್ನು ಭೇಟಿ ಮಾಡುವಂತೆ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರಿಗೆ ಆಗ್ರಹಿಸಿದರು.

ಕಾವೇರಿ ಪ್ರದೇಶದಲ್ಲಿರುವ ರೈತರ ಹಿತರಕ್ಷಣೆಗಾಗಿ ಪ್ರತಿಭಟನೆ ಆರಂಭಿಸಲು ತಾವು ಸಿದ್ಧರಿರುವುದಾಗಿ ಯಡಿಯೂರಪ್ಪ ಇದೇ ವೇಳೆ ತಿಳಿಸಿದರು.

ಕಾವೇರಿ ಗದ್ದಲ : ಕಲಾಪ ಮುಂದೂಡಿಕೆ
ಕಾವೇರಿ ವಿಷಯ ಬೆಳಗಾವಿಯ ಅಧಿವೇಶನದಲ್ಲಿ ಪ್ರತಿಧ್ವನಿಸಿತು. ರೈತರನ್ನು ರಕ್ಷಿಸುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಎರಡೂ ಸದನಗಳಲ್ಲಿ ಪ್ರತಿಪಕ್ಷಗಳು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದವು. ಉಭಯ ಸದನಗಳಲ್ಲಿ ಗದ್ದಲ ಏರ್ಪಟ್ಟು ಕಲಾಪ ಸೋಮವಾರಕ್ಕೆ ಮುಂದೂಡಲ್ಪಟ್ಟವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.