ಮಂಗಳೂರು: `ಕಾವೇರಿ ನದಿ ನೀರು ಹಂಚಿಕೆ ಕುರಿತು ರಾಜ್ಯ ಹಾಗೂ ತಮಿಳುನಾಡು ನಡುವಿನ ವ್ಯಾಜ್ಯದ ವಿಚಾರಣೆ ಸೋಮವಾರ ನಡೆಯಲಿದೆ. ರಾಜ್ಯವು ಎದುರಿಸುತ್ತಿರುವ ನೀರಿನ ಕೊರತೆಯ ವಿವರಗಳನ್ನು ಸುಪ್ರೀಂ ಕೋರ್ಟ್ಗೆ ಸಲ್ಲಿಸಿದ್ದೇವೆ. ಸಮಸ್ಯೆ ಸಾಂಗವಾಗಿ ಬಗೆಹರಿಯಲಿದೆ' ಎಂದು ಮುಖ್ಯಮಂತ್ರಿ ಜಗದೀಶ ಶೆಟ್ಟರ್ ವಿಶ್ವಾಸ ವ್ಯಕ್ತಪಡಿಸಿದರು.
ನಗರದಲ್ಲಿ ಭಾನುವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, `ನೀರಿನ ಕೊರತೆಯಿಂದಾಗಿ ರಾಜ್ಯದ ಪರಿಸ್ಥಿತಿ ಗಂಭೀರವಾಗಿದೆ. ಬೆಂಗಳೂರಿಗೆ ಕುಡಿಯುವ ನೀರು ಪೂರೈಸಲು 12 ಟಿಎಂಸಿ ಅಡಿ ನೀರು ಬೇಕು. ಅದಲ್ಲದೇ ಉಳಿದ ಭಾಗಗಳ ಕುಡಿಯುವ ನೀರಿನ ಪೂರೈಕೆಗೆ 20 ಟಿಎಂಸಿಗೂ ಅಧಿಕ ನೀರು ಬೇಕು. ಈಗಾಗಲೇ ಕೈಗೊಂಡಿರುವ ಬೆಳೆಗೂ ನೀರಿನ ಅಗತ್ಯವಿದೆ. ಈ ಎಲ್ಲ ಅಂಶಗಳನ್ನು ಮುಂದಿಟ್ಟು ಸುಪ್ರೀಂ ಕೋರ್ಟ್ನಲ್ಲಿ ರಾಜ್ಯವೂ ಈ ಬಗ್ಗೆ ಬಲವಾದ ವಾದ ಮಂಡಿಸಲಿದೆ' ಎಂದರು.
ಬಹಿಷ್ಕಾರ: ಟಿವಿ ಚಾನೆಲ್ ವರದಿಗಾರ ನವೀನ್ ಸೂರಿಂಜೆ ಬಂಧನವನ್ನು ಖಂಡಿಸಿ ಟಿ.ವಿ ಚಾನೆಲ್ಗಳ ವರದಿಗಾರರು ಹಾಗೂ ಕ್ಯಾಮೆರಾಮನ್ಗಳು ಮುಖ್ಯಮಂತ್ರಿಗಳ ಎಲ್ಲ ಕಾರ್ಯಕ್ರಮಗಳನ್ನು ಬಹಿಷ್ಕರಿಸಿದರು. ಹೆಲಿಪ್ಯಾಡ್ಗೆ ಮುಖ್ಯಮಂತ್ರಿ ಆಗಮಿಸುವ ವೇಳೆ ಟಿ.ವಿ. ಚಾನೆಲ್ಗಳ ವರದಿಗಾರರು ಸ್ಥಳದಲ್ಲಿದ್ದರೂ ಯಾವುದೇ ಚಿತ್ರೀಕರಣ ನಡೆಸದೆ ಪ್ರತಿಭಟನೆ ವ್ಯಕ್ತಪಡಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.