ಕುಶಾಲನಗರ:ಪಟ್ಟಣ ಹಾಗೂ ಹೋಬಳಿ ವ್ಯಾಪ್ತಿಯ ಕೆಲವು ಗ್ರಾಮಗಳಲ್ಲಿ ಮಂಗಳವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಕೆಲ ಸೆಕೆಂಡು ಭೂಮಿ ಕಂಪಿಸಿದ ಅನುಭವವಾಯಿತು.
ಪಟ್ಟಣ ವ್ಯಾಪ್ತಿಯ ದಂಡಿನಪೇಟೆ, ರಾಮಕೃಷ್ಣ ಬಡಾವಣೆಗಳು ಹಾಗೂ ಸಮೀಪದ ಗ್ರಾಮಗಳಾದ ಹೆಬ್ಬಾಲೆ, ಸೀಗೆಹೊಸೂರು, ಕೂಡಿಗೆ ಇತರೆಡೆ ಭೂಮಿ ಕಂಪಿಸಿತು. ಮಧ್ಯಾಹ್ನ ಇದ್ದಕ್ಕಿಂದ್ದಂತೆ ಗುಡುಗಿನ ಶಬ್ದ ಕೇಳಿಬಂತು. ಇದರೊಟ್ಟಿಗೇ ಭೂಮಿ ಕಂಪಿಸಿತು.
ಇದರಿಂದ ಭಯಪಟ್ಟ ದಂಡಿನಪೇಟೆಯ ಜನ ಮನೆಯಿಂದ ಹೊರ ಓಡಿದರು. ಅಲ್ಲದೇ ಅಕ್ಕಪಕ್ಕದವರೂ ಮನೆ ಬಿಟ್ಟು ಹೊರಬರವಂತೆ ಕೂಗಾಡಿದರು. ಕೂಡಿಗೆಯ ತೋಟಗಾರಿಕಾ ಕಚೇರಿಯಲ್ಲಿ ಒಂದೆಡೆ ಜೋಡಿಸಿದ್ದ ಧಾನ್ಯಗಳ ಮೂಟೆಗಳು ಕೆಳಗೆ ಬಿದ್ದವು. ಹೆಬ್ಬಾಲೆಯ ಮನೆಗಳಲ್ಲಿ ಜೋಡಿಸಿದ್ದ ಪಾತ್ರೆಗಳು ಸಹ ಅಲ್ಲಾಡಿದವು.
ಭೂಕಂಪದ ಬಗ್ಗೆ ಪ್ರತಿಕ್ರಿಯೆ ನೀಡಿದ ಹಾರಂಗಿ ಅಣೆಕಟ್ಟೆ ಮುಖ್ಯಾಧಿಕಾರಿ ಪಾಲನೇತ್ರಯ್ಯ, ಕಂಪನದ ಅನುಭವವಾಗಿದ್ದು ನಿಜ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.