ADVERTISEMENT

ಕೆಟ್ಟ ಸರ್ಕಾರಗಳನ್ನು ಕಿತ್ತೆಸೆಯಿರಿ: ದೊರೆಸ್ವಾಮಿ

​ಪ್ರಜಾವಾಣಿ ವಾರ್ತೆ
Published 11 ಜುಲೈ 2012, 18:40 IST
Last Updated 11 ಜುಲೈ 2012, 18:40 IST

ಬೆಂಗಳೂರು: `ರಾಜ್ಯದಲ್ಲಿ ಮೂರು ವರ್ಷಗಳಲ್ಲಿ ಮೂವರು ಮುಖ್ಯಮಂತ್ರಿಗಳಾದರು. ಅದರಲ್ಲಿ ಕೆಲವರು ಜೈಲಿಗೆ ಹೋದರು, ಮತ್ತೆ ಕೆಲವರು ಕೋರ್ಟ್‌ಗಳಿಗೆ ಅಲೆಯುತ್ತಿದ್ದಾರೆ. ಇಂತಹ ಭ್ರಷ್ಟ ಸರ್ಕಾರವನ್ನು ಉರುಳಿಸುವ ಅವಶ್ಯಕತೆ ಇಂದು ಬಂದೊದಗಿದೆ~ ಎಂದು ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಹೇಳಿದರು.

ನಗರದ ಭಾರತೀಯ ವಿದ್ಯಾಭವನದಲ್ಲಿ ಈಚೆಗೆ ನಡೆದ `ದಿ ಸ್ಪೈಡರ್ ಆಫ್ ಇಂಡಿಯಾ~ ಕನ್ನಡ ವಾರ ಪತ್ರಿಕೆ ಬಿಡುಗಡೆ ಸಮಾರಂಭವನ್ನು ಉದ್ಘಾಟಿಸಿ ಅವರು ಮತನಾಡಿದರು.

`ರಾಜ್ಯದಲ್ಲಿ ಕೆಟ್ಟ ಜನರು ಅಧಿಕಾರ ನಡೆಸುತ್ತಿದ್ದಾರೆ. ಇಂತಹ ಸರ್ಕಾರವನ್ನು ಕಿತ್ತೊಗೆಯಲು ರಾಜ್ಯಾದ್ಯಾಂತ ಬಿಜೆಪಿ ಹಠಾವೋ ಚಳವಳಿಯನ್ನು ಹಮ್ಮಿಕೊಳ್ಳುವ ಅವಶ್ಯಕತೆಯಿದೆ~ ಎಂದರು.

`ಬಿಜೆಪಿಯವರು ರಾಜಕೀಯದ ಅನಾಚಾರದಲ್ಲಿ ಬಹು ದೂರ ಸಾಗಿದ್ದಾರೆ. ಹೈಕಮಾಂಡ್ ಕೂಡ ಇಂತಹ ಕೆಟ್ಟ ಸರ್ಕಾರಕ್ಕೆ ಆದ್ಯತೆಯನ್ನು ನೀಡುತ್ತಿದೆ. ಒಬ್ಬ ಮನುಷ್ಯನನ್ನು ಉಳಿಸಿಕೊಳ್ಳುವುದಕ್ಕಾಗಿ ಹೈಕಮಾಂಡ್ ಜಾತಿ ರಾಜಕಾರಣದಂತಹ ದುರ್ಮಾರ್ಗವನ್ನು ಅನುಸರಿಸುತ್ತಿದೆ~ ಎಂದರು.

`ರಾಜ್ಯದಲ್ಲಿ ಭ್ರಷ್ಟಾಚಾರ, ಜಾತಿ ರಾಜಕಾರಣ, ಅರಾಜಕತೆ ತಾಂಡವವಾಡುತ್ತಿದ್ದರೂ, ಎಲ್ಲ ರಾಜಕೀಯ ಪಕ್ಷಗಳು ನಿಷ್ಕ್ರಿಯಗೊಂಡಿವೆ. ಜನರೂ ಕೂಡ ಇಂತಹ ಅನಾಚಾರಗಳನ್ನು ನೋಡಿಕೊಂಡು ಸತ್ತಂತೆ ಬದುಕುತ್ತಿದ್ದಾರೆ~ ಎಂದು ಕಿಡಿಕಾರಿದರು. ಹಿರಿಯ ಸಾಹಿತಿ ಚಂದ್ರಶೇಖರ ಕಂಬಾರ ಮಾತನಾಡಿದರು. ಮಾಜಿ ಮೇಯರ್ ಜೆ.ಹುಚ್ಚಪ್ಪ, ಪತ್ರಕರ್ತ ಎಚ್.ಎಚ್.ಧನಂಜಯ  ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.