ADVERTISEMENT

ಕೆ.ಸಿ.ವ್ಯಾಲಿ ಯೋಜನೆಯಿಂದ ಕೋಲಾರಕ್ಕೆ ನೀರು: ಭಾವುಕರಾಗಿ ಆನಂದಬಾಷ್ಪ ಸುರಿಸಿದ ಸಭಾಧ್ಯಕ್ಷರು

​ಪ್ರಜಾವಾಣಿ ವಾರ್ತೆ
Published 2 ಜೂನ್ 2018, 17:53 IST
Last Updated 2 ಜೂನ್ 2018, 17:53 IST
ವಿಧಾನಸಭಾ ಸ್ಪೀಕರ್‌ ಕೆ.ಆರ್‌.ರಮೇಶ್‌ಕುಮಾರ್‌ (ಮಧ್ಯದಲ್ಲಿ)
ವಿಧಾನಸಭಾ ಸ್ಪೀಕರ್‌ ಕೆ.ಆರ್‌.ರಮೇಶ್‌ಕುಮಾರ್‌ (ಮಧ್ಯದಲ್ಲಿ)   

ಕೋಲಾರ: ಜಿಲ್ಲೆಯ ಕೆರೆಗಳನ್ನು ತುಂಬಿಸುವ ಮಹತ್ವಾಕಾಂಕ್ಷೆಯ ಕೋರಮಂಗಲ– ಚಲ್ಲಘಟ್ಟ (ಕೆ.ಸಿ ವ್ಯಾಲಿ) ನೀರಾವರಿ ಯೋಜನೆ ಪೂರ್ಣಗೊಂಡು ತಾಲ್ಲೂಕಿನ ಲಕ್ಷ್ಮೀಸಾಗರ ಕೆರೆಗೆ ಶನಿವಾರ ನೀರು ಬಂದಿದ್ದರಿಂದ ಭಾವುಕರಾದ ವಿಧಾನಸಭಾ ಸ್ಪೀಕರ್‌ ಕೆ.ಆರ್‌.ರಮೇಶ್‌ಕುಮಾರ್‌ ಮಕ್ಕಳಂತೆ ಬಿಕ್ಕಿ ಬಿಕ್ಕಿ ಅತ್ತರು.

ಅವರು ಲಕ್ಷ್ಮೀಸಾಗರ ಕೆರೆಗೆ ಶನಿವಾರ ಭೇಟಿ ನೀಡಿದ ವೇಳೆ ಕಾಲುವೆ ಮೂಲಕ ನೀರು ಹರಿದು ಬರುತ್ತಿರುವುದನ್ನು ಕಂಡು ಕಣ್ಣಾಲಿಗಳು ತೇವಗೊಂಡವು. ಸಾರ್ಥಕ ಭಾವ ಮನದಲ್ಲಿ ಮೂಡಿ ಆನಂದಬಾಷ್ಪ ಸುರಿಸಿದರು.

</p><p>ಗದ್ಗದಿತರಾಗಿಯೇ ಸುದ್ದಿಗಾರರೊಂದಿಗೆ ಮಾತನಾಡಿದ ರಮೇಶ್‌ಕುಮಾರ್‌, ‘ಈ ಕ್ಷಣಕ್ಕೆ ನನ್ನ ತಾಯಿ ಜ್ಞಾಪಕಕ್ಕೆ ಬರುತ್ತಿದ್ದಾಳೆ. ನನಗೆ ಜನ್ಮ ಕೊಟ್ಟ ಆಕೆ ಬಹಳ ಮುಗ್ದೆ. ಪಾಪಾ ಆಕೆ ನನ್ನಿಂದ ಏನೂ ನಿರೀಕ್ಷಿಸಲಿಲ್ಲ. ನನ್ನಿಂದ ಇಂತಹ ಜನಪರ ಕೆಲಸವಾಗುತ್ತದೆ ಎಂಬ ಕಲ್ಪನೆಯೂ ಆಕೆಗಿರಲಿಲ್ಲ. ಜಿಲ್ಲೆಗೆ ನೀರು ಸಿಕ್ಕಿದ್ದು ನನ್ನ ಪೂರ್ವ ಜನ್ಮದ ಪುಣ್ಯ’ ಎಂದು ಭಾವುಕರಾದರು.</p><p><strong>₹ 1,280 ಕೋಟಿ ವೆಚ್ಚ:</strong> ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರವು ಜಿಲ್ಲೆಯ 126 ಕೆರೆಗಳಿಗೆ 5 ಟಿಎಂಸಿ ನೀರು ತುಂಬಿಸುವ ಉದ್ದೇಶಕ್ಕಾಗಿ ₹ 1,280 ಕೋಟಿ ಅಂದಾಜು ವೆಚ್ಚದಲ್ಲಿ ಕೆ.ಸಿ ವ್ಯಾಲಿ ಯೋಜನೆ ಕೈಗೆತ್ತಿಕೊಂಡಿತ್ತು. ಬೆಂಗಳೂರು ನಗರದ ಕೊಳಚೆ ನೀರನ್ನು ಸಂಸ್ಕರಿಸಿ ಜಿಲ್ಲೆಗೆ ಹರಿಸುವ ಈ ಯೋಜನೆಗೆ 2016ರ ಜೂನ್‌ನಲ್ಲಿ ಚಾಲನೆ ಸಿಕ್ಕಿತ್ತು.</p><p>ಆಗ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ರಮೇಶ್‌ಕುಮಾರ್‌ ವಿಧಾನಸಭಾ ಚುನಾವಣೆಗೂ ಮುನ್ನವೇ ಈ ಯೋಜನೆ ಪೂರ್ಣಗೊಳಿಸಿ ಜಿಲ್ಲೆಗೆ ನೀರು ಹರಿಸಬೇಕೆಂದು ಕನಸು ಕಂಡಿದ್ದರು. ಆದರೆ, ಸಾಕಷ್ಟು ಅಡೆತಡೆ ಎದುರಾಗಿದ್ದರಿಂದ ಕಾಮಗಾರಿ ವಿಳಂಬವಾಯಿತು. ಎರಡು ವರ್ಷದಲ್ಲಿ ಕಾಮಗಾರಿ ಪೂರ್ಣಗೊಂಡು ಲಕ್ಷ್ಮೀಸಾಗರ ಕೆರೆಗೆ ನೀರು ಹರಿದು ಬಂದಿದೆ.</p></p>

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.