ಮಂಗಳೂರು: ‘ನೋಟ್ ರದ್ದತಿ ಮಾಡುವ ಮೂಲಕ ದೇಶದ ಆರ್ಥಿಕ ಸ್ಥಿತಿಯನ್ನು ದಿವಾಳಿಗೆ ತಂದಿರುವ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ವಿರುದ್ಧ ಬಿಜೆಪಿ ಪರಿವರ್ತನಾ ರ್ಯಾಲಿ ನಡೆಸಲಿ. ಜೈಲಿಗೆ ಹೋಗಿ ಬಂದಿರುವ ಬಿಜೆಪಿ ಮುಖಂಡರು ರಾಜ್ಯವನ್ನು ಪರಿವರ್ತನೆ ಮಾಡುತ್ತೇವೆ ಎಂಬ ಹುಚ್ಚುತನವನ್ನು ಕೈ ಬಿಡಬೇಕು’ ಎಂದು ಅರಣ್ಯ ಮತ್ತು ಪರಿಸರ ಸಚಿವ ರಮಾನಾಥ ರೈ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
‘ಬಿಜೆಪಿ ಪರಿವರ್ತನಾ ಯಾತ್ರೆಗೆ ಸಂಪೂರ್ಣವಾಗಿ ಹಿನ್ನಡೆಯಾಗಿದೆ. ನೆಲಮಂಗಲ, ತುಮಕೂರಿನಲ್ಲಿನ ಖಾಲಿ ಖುರ್ಚಿಗಳೇ ಇದಕ್ಕೆ ಸಾಕ್ಷಿ. ಬಿಜೆಪಿ ರಾಜ್ಯದಲ್ಲಿ ಅಧಿಕಾರದಲ್ಲಿದ್ದ ವೇಳೆ ಆಗಿನ ಮುಖ್ಯಮಂತ್ರಿ ಯಡಿಯೂರಪ್ಪ ಸೇರಿದಂತೆ ಅವರ ಸಚಿವ ಸಂಪುಟದಲ್ಲಿದ್ದ ಹಲವು ಸಚಿವರು ಜೈಲು ಸೇರಿದ್ದರು. ಅಂಥವರಿಂದ ಈ ರಾಜ್ಯವು ಪರಿವರ್ತನೆ ಬಯಸುವುದಿಲ್ಲ. ಜನರು ಕಾಂಗ್ರೆಸ್ ಪರವಾಗಿದ್ದಾರೆ. ಜನಪರ ಆಡಳಿತ ನೀಡುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇನ್ನೊಂದು ಬಜೆಟ್ ಮಂಡನೆ ಮಾಡಲಿದ್ದಾರೆ. ಕೇಂದ್ರ ಸರ್ಕಾರದ ಜನ ವಿರೋಧಿ ನೀತಿ ವಿರುದ್ಧ ನ. 8ರಂದು ಕಾಂಗ್ರೆಸ್ ಕರಾಳ ದಿನ ಆಚರಣೆ ಮಾಡಲಿದೆ’ ಎಂದು ಅವರು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.