ADVERTISEMENT

ಕೇಜ್ರಿವಾಲ್ ಸದ್ದು ಮಾತ್ರ

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2014, 9:43 IST
Last Updated 18 ಮಾರ್ಚ್ 2014, 9:43 IST

ಹುಬ್ಬಳ್ಳಿ: ‘ಆಮ್‌ ಆದ್ಮಿ ಪಕ್ಷದ ಸಂಸ್ಥಾ­ಪಕ ಅರವಿಂದ ಕೇಜ್ರಿವಾಲ್‌ ಬೆಂಗ­ಳೂರಿಗೆ ಬಂದು ಸದ್ದು ಮಾಡಿ­ದ್ದಾರೆಯೇ ಹೊರತು ಚುನಾವಣೆ ಫಲಿ­ತಾಂಶದ ಮೇಲೆ ಯಾವುದೇ ಪ್ರಭಾವ ಬೀರುವುದಿಲ್ಲ’ ಎಂದು ಬಿಜೆಪಿ ರಾಜ್ಯ ಘಟ­ಕದ ಅಧ್ಯಕ್ಷ ಪ್ರಹ್ಲಾದ ಜೋಶಿ ಹೇಳಿದರು.

ಇಲ್ಲಿನ ಚವ್ಹಾಣ್ ಗ್ರೀನ್‌ ಗಾರ್ಡ­ನ್‌ನ ಶಿವಪುರ ಕಾಲೊನಿಯಲ್ಲಿರುವ ಶಿವ­ಮಂದಿರದಲ್ಲಿ ಸೋಮವಾರ ಪೂಜೆ ಸಲ್ಲಿಸಿ ಪಾದಯಾತ್ರೆ ಮೂಲಕ ಚುನಾ­ವಣಾ ಪ್ರಚಾರ ಆರಂಭಿಸಿದ ಅವರು, ಸುದ್ದಿಗಾರರೊಂದಿಗೆ ಮಾತ­ನಾಡಿದರು.

‘ವಾರಾಣಸಿಯಲ್ಲಿ ಕೇಜ್ರಿವಾಲ್‌ ಸ್ಪರ್ಧೆ­ಯಿಂದ ನರೇಂದ್ರ ಮೋದಿ ಅವರಿಗೆ ಹಿನ್ನಡೆಯಾಗಲಿದೆಯೇ’ ಎಂಬ  ಪ್ರಶ್ನೆಗೆ, ಹೊಟ್ಟೆ ಪಕ್ಷದ ರಂಗ­ಸ್ವಾಮಿಯೂ ಈ ಹಿಂದೆ ಹಲವು ಚುನಾವಣೆಗಳಲ್ಲಿ ಸ್ಪರ್ಧಿಸಿದ್ದರು ಎಂದು ಮಾರ್ಮಿಕವಾಗಿ ನುಡಿದರು.

‘ಪ್ರಮೋದ್ ಮುತಾಲಿಕ್‌ ಸ್ಪರ್ಧೆ­ಯಿಂದ ಹಿಂದೂಗಳ ಮತ ವಿಭಜನೆ­ಯಾಗಿ ನನಗೆ ತೊಂದರೆ­ಯಾಗಲಿದೆ ಎನ್ನುವುದು ಸುಳ್ಳು. ವಾಸ್ತವವಾಗಿ ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ –ಕಾಂಗ್ರೆಸ್ ಹಾಗೂ ಜೆಡಿಎಸ್‌ ನಡುವಿನ ತ್ರಿಕೋನ ಸ್ಪರ್ಧೆ ಇದೆ’ ಎಂದರು.
ಬೀದರ್, ಮಂಡ್ಯ ಹಾಗೂ ಹಾಸನ ಲೋಕ­ಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ಮಂಗಳವಾರ ಅಂತಿಮ­ಗೊಳ್ಳ­ಲಿದೆ. ನರೇಂದ್ರ ಮೋದಿ ರಾಜ್ಯದಲ್ಲಿ ಇನ್ನೂ ಮೂರು ರ್‍ಯಾಲಿ­ಗಳಲ್ಲಿಪಾಲ್ಗೊ­ಳ್ಳಲಿದ್ದು, ಶೀಘ್ರ ಸ್ಥಳ ನಿರ್ಧರಿಸ­ಲಾಗುವುದು ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.