ಜಗಳೂರು: ತಾಲ್ಲೂಕಿನ ರಂಗಯ್ಯನದುರ್ಗ ವನ್ಯಧಾಮದ ಅಂಚಿನಲ್ಲಿರುವ ಗೋಡೆ ಗ್ರಾಮದ ಕುರಿಗಾಹಿಗಳ ಮನೆಯಲ್ಲಿದ್ದ ಎರಡು ಕೊಂಡುಕುರಿ ಮರಿಗಳನ್ನು ಪತ್ತೆಹಚ್ಚಿ ಸಂರಕ್ಷಿಸುವಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.
ಕೊಂಡುಕುರಿಯ ಮೂರು ತಿಂಗಳ ಎರಡು ಮರಿಗಳು ಇರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಅಧಿಕಾರಿಗಳು ತೆರಳಿದ್ದರು.
ಈ ಸಂದರ್ಭ ‘ಪ್ರಜಾವಾಣಿ’ ಜತೆ ಮಾತನಾಡಿದ ಕೊಂಡುಕುರಿ ವನ್ಯಧಾಮ ವಲಯ ಅರಣ್ಯಾಧಿಕಾರಿ ಸಂದೀಪ ನಾಯಕ, ‘ಕುರಿಗಳ ಹಿಂಡಿನೊಂದಿಗೆ ಕೊಂಡುಕುರಿ ಮರಿಗಳು ಬಂದಿವೆ ಎಂದು ಕುರಿಗಾಹಿಗಳು ಹೇಳುತ್ತಿದ್ದಾರೆ. ಆರೋಗ್ಯವಾಗಿದ್ದ ಮುದ್ದಾದ ಎರಡು ಮರಿಗಳನ್ನು ಮಡ್ರಳ್ಳಿ ಅರಣ್ಯದ ವನ್ಯಧಾಮಕ್ಕೆ ತಂದು ಆರೈಕೆ ಮಾಡಿದ್ದೇವೆ. ಬುಧವಾರ ಅರಣ್ಯ ಪ್ರದೇಶಕ್ಕೆ ಬಿಡಲಾಗಿದೆ’ ಎಂದು ಹೇಳಿದರು.
'ಅರಣ್ಯದ ಮಧ್ಯಭಾಗದಲ್ಲಿ ಮರಿಗಳನ್ನು ಬಿಟ್ಟು, ದೂರದಿಂದ ಸತತ 48 ತಾಸುಗಳ ಕಾಲ ಮರಿಗಳ ಚಲನವಲನ ಗಮನಿಸಲು ಇಲಾಖೆಯ ಸಿಬ್ಬಂದಿಗೆ ಸೂಚನೆ ನೀಡಲಾಗಿದೆ. ಅಲ್ಲಿನ ಕುರಿಗಾಹಿಗಳು ಮತ್ತು ಗ್ರಾಮಸ್ಥರಿಗೆ ಈ ಭಾಗದಲ್ಲಿ ಐದಾರು ದಿನಗಳ ಕಾಲ ಅರಣ್ಯ ಪ್ರವೇಶ ಮಾಡದಂತೆ ಸೂಚನೆ ನೀಡಲಾಗಿದೆ. ಮರಿಗಳ ಕೂಗನ್ನು ಆಧರಿಸಿ ತಾಯಿ ಬರಬಹುದು ಎಂದು ನಿರೀಕ್ಷಿಸಲಾಗಿದೆ' ಎಂದು ಅವರು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.