ADVERTISEMENT

ಕೊಟ್ಟೂರು–ಹರಿಹರ ರೈಲು ಸಂಚಾರ ಆರಂಭ

ಎಂಟೂವರೆ ತಿಂಗಳಲ್ಲಿ ರಾಜ್ಯಕ್ಕೆ 22 ಹೊಸ ರೈಲು: ಖರ್ಗೆ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2014, 19:30 IST
Last Updated 3 ಮಾರ್ಚ್ 2014, 19:30 IST
ಕೊಟ್ಟೂರು–ಹರಿಹರ ರೈಲು ಸಂಚಾರಕ್ಕೆ ರೈಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ಸೋಮವಾರ ಹಸಿರು ನಿಶಾನೆ ತೋರಿಸಿದರು. ಮಾಜಿ ಸಚಿವ ಅಲ್ಲಂ ವೀರಭದ್ರಪ್ಪ, ಸಚಿವರಾದ ಶಾಮನೂರು ಶಿವಶಂಕರಪ್ಪ, ಪಿ.ಟಿ. ಪರಮೇಶ್ವರ ನಾಯ್ಕ, ನೈರುತ್ಯ ರೈಲ್ವೆ ವಲಯದ ಪ್ರಧಾನ ವ್ಯವಸ್ಥಾಪಕ ಪ್ರದೀಪಕುಮಾರ್‌ ಸಕ್ಸೆನಾ ಚಿತ್ರದಲ್ಲಿದ್ದಾರೆ
ಕೊಟ್ಟೂರು–ಹರಿಹರ ರೈಲು ಸಂಚಾರಕ್ಕೆ ರೈಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ಸೋಮವಾರ ಹಸಿರು ನಿಶಾನೆ ತೋರಿಸಿದರು. ಮಾಜಿ ಸಚಿವ ಅಲ್ಲಂ ವೀರಭದ್ರಪ್ಪ, ಸಚಿವರಾದ ಶಾಮನೂರು ಶಿವಶಂಕರಪ್ಪ, ಪಿ.ಟಿ. ಪರಮೇಶ್ವರ ನಾಯ್ಕ, ನೈರುತ್ಯ ರೈಲ್ವೆ ವಲಯದ ಪ್ರಧಾನ ವ್ಯವಸ್ಥಾಪಕ ಪ್ರದೀಪಕುಮಾರ್‌ ಸಕ್ಸೆನಾ ಚಿತ್ರದಲ್ಲಿದ್ದಾರೆ   

ಕೊಟ್ಟೂರು (ಬಳ್ಳಾರಿ ಜಿಲ್ಲೆ): ‘ರೈಲ್ವೆ ಸಚಿವನಾಗಿ ಅಧಿಕಾರ ವಹಿಸಿಕೊಂಡ ಕೇವಲ ಎಂಟೂವರೆ ತಿಂಗಳಲ್ಲಿ ರಾಜ್ಯಕ್ಕೆ 22 ನೂತನ ರೈಲುಗಳನ್ನು ಮಂಜೂರು ಮಾಡಿದ್ದೇನೆ. ನನೆಗುದಿಗೆ ಬಿದ್ದಿದ್ದ ಯೋಜನೆಗಳನ್ನು ಅತಿ ಕಡಿಮೆ ಅವಧಿ­ಯಲ್ಲಿ ಪೂರ್ಣಗೊ­ಳಿಸಲು ಚುರುಕು ನೀಡಲಾಗಿದೆ’ ಎಂದು ರೈಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ತಿಳಿಸಿದರು.

ಇಲ್ಲಿನ ರೈಲ್ವೆ ನಿಲ್ದಾಣದಲ್ಲಿ ಕೊಟ್ಟೂರು–ಹರಿಹರ ಮಾರ್ಗ ರೈಲು ಸಂಚಾರಕ್ಕೆ ಸೋಮವಾರ ಚಾಲನೆ ನೀಡಿ ಅವರು ಮಾತನಾಡಿದರು.

‘ನಾಲ್ಕೈದು ವರ್ಷಗಳ ಹಿಂದೆಯೇ ಈ ಮಾರ್ಗದ ಕಾಮಗಾರಿ ಶೇ 90ರಷ್ಟು ಪೂರ್ಣಗೊಂಡಿತ್ತು. ಉಳಿದ ಶೇ 10 ಕಾಮಗಾರಿ ಪೂರ್ಣ­ವಾ­ಗಿ­ರಲಿಲ್ಲ. ಇಂಥ ಹಲವಾರು ಯೋಜ­ನೆ­ಪೂರ್ಣಗೊಳಿಸ­ಲಾ­ಗಿದೆ’ ಎಂದರು.

‘ಹಿಂದುಳಿದ ಹೈದರಾಬಾದ್‌ ಕರ್ನಾಟಕ ಪ್ರದೇಶದ ಅಭಿವೃದ್ಧಿಗೆ ಸಂವಿಧಾನದ 371ಜೆ ಕಲಂನಿಂದ ಬಳ್ಳಾರಿ ಜಿಲ್ಲೆಯನ್ನು ಹೊರಗಿಡ­ಲಾಗಿತ್ತು. ಆದರೆ, ಬಳ್ಳಾರಿ ಜಿಲ್ಲೆಯೂ ಹಿಂದುಳಿದಿದ್ದು, ಅಭಿವೃದ್ಧಿ ಹೊಂದಲಿ ಎಂಬ ಉದ್ದೇಶದಿಂದ ಯುಪಿಎ ಸರ್ಕಾರ ವಿಶೇಷ ಸ್ಥಾನಮಾನದ ವ್ಯಾಪ್ತಿಯಲ್ಲಿ ಜಿಲ್ಲೆಯನ್ನು ಸೇರಿಸಿದೆ. ಇದರ ಫಲವಾಗಿ ಈ ಭಾಗದಲ್ಲಿ ಉದ್ಯೋಗ ಪರ್ವ ಆರಂಭವಾಗಲಿದೆ’ ಎಂದರು.

4800 ಕಿ.ಮೀ ರೈಲು ಮಾರ್ಗದ ಕಾಮಗಾರಿ ಬಾಕಿ
‘ರಾಜ್ಯದಲ್ಲಿ 2,100 ಕಿ.ಮೀ ರೈಲು ಮಾರ್ಗ ಇದೆ. ಆದರೆ ಇನ್ನೂ 4,800 ಕಿ.ಮೀ ಕಾಮಗಾರಿ ಬಾಕಿ ಇದ್ದು, ಈ ಕಾಮಗಾರಿಗಳನ್ನು ಪೂರ್ಣಗೊಳಿಸಲು ಒಟ್ಟು ರೂ. 23,000 ಕೋಟಿ  ಅಗತ್ಯವಿದೆ’ ಎಂದು ಮಲ್ಲಿಕಾರ್ಜುನ ಖರ್ಗೆ ತಿಳಿಸಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು. ‘ಉದ್ದೇಶಿತ ರೈಲು ಮಾರ್ಗದ ಕಾಮಗಾರಿ ಕೈಗೆತ್ತಿಕೊಳ್ಳಲು ರಾಜ್ಯ ಸರ್ಕಾರ ತನ್ನ ಪಾಲಿನ ಅನುದಾನ ಒದಗಿಸಬೇಕಿದ್ದು, ಇಲಾಖೆಯ ಕೋರಿಕೆಗೆ ರಾಜ್ಯ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಿದೆ’ ಎಂದು ಸಚಿವರು ತಿಳಿಸಿದರು.

‘ಎರಡು ವರ್ಷಗಳ ಹಿಂದೆ ರೈಲ್ವೆ ಇಲಾಖೆ ರೂ. 350 ಕೋಟಿ ನಷ್ಟದಲ್ಲಿ ಇತ್ತು. ಆದರೆ ಕಳೆದ ವರ್ಷ ರೂ. 1,500 ಕೋಟಿ ಲಾಭ ಗಳಿಸಿತು.ಪ್ರಸಕ್ತ ವರ್ಷ ರೂ. 7,000 ಕೋಟಿ ಲಾಭದ ಗುರಿ ಹೊಂದಲಾಗಿದ್ದು, ಈಗಾಗಲೇ ರೂ. 5,500 ಕೋಟಿ ಲಾಭ ಗಳಿಸಿದೆ. ಮಾರ್ಚ್‌ ಅಂತ್ಯಕ್ಕೆ ನಿರೀಕ್ಷಿತ ಗುರಿ ಮುಟ್ಟಲಾಗುವುದು’ ಎಂದು ಖರ್ಗೆ ವಿಶ್ವಾಸ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.